ಶ್ರೀ ರಾಘವೇಂದ್ರ ಸ್ವಾಮಿಗಳು ನೆಲೆಸಿದ ಪುಣ್ಯ ಸ್ಥಳ ಮಂತ್ರಾಲಯದ ಬಗ್ಗೆ ನೀವು ತಿಳಿಯದ ರೋಚಕ ಕಥೆ
ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮರಥಾಯ ಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಪರಾಮಪೂಜ್ಯರಾದ ಶ್ರೀ ರಾಘವೇಂದ್ರಶ್ರೀಗಳನ್ನು ಭಕ್ತಿಯಿಂದ ಭಜಿಸುವವರಿಗೆ ಸದಾಕಾಲ ಕಲ್ಪವೃಕ್ಷದಂತೆ ಕಾಪಾಡುತ್ತಿದ್ದಾರೆ. ಇಂತಹ ಮಹಾನ್ ವ್ಯಕ್ತಿಗಳನ್ನು ಪಡೆದ ಪವಿತೃಭೂಮಿ ನಮ್ಮ ದೇಶ. ಅಪಾರ ಜ್ಞಾನ, ತಪೋಬಲ, ಅಗಾಧಶಕ್ತಿ ಹೊಂದಿರುವ ಇವರು ಭಕ್ತರ ಕಾಮನೆಗಳನ್ನು ನಿವಾರಿಸಿ ಕಲಿಯುಗದ ಕಾಮಧೇನು ಎಂದು ಕರೆಸಿಕೊಂಡಿದ್ದಾರೆ.
ಸರ್ವ ಜಾತಿ ಜನಾಂಗದಿಂದ ಪೂಜಿಸಲ್ಪಡುವವರೆಂದರೆ ರಾಘವೇಂದ್ರ ಶ್ರೀಗಳು ಮಾತ್ರ. ಕಲಿಯುಗದ ಕಲ್ಪತರು, ಕಾಮಧೇನು, ಗುರುರಾಯರು, ಗುರುರಾಜರು ಎಂದೆಲ್ಲ ಕರೆಸಿಕೊಳ್ಳುವ ಇವರು ನರಸಿಂಹನ ಅವತಾರಕ್ಕೆ ಸಾಕ್ಷಿಯಾದ ಪ್ರಹ್ಲಾದನ ಅವತಾರದ ಸ್ವರೂಪ ಎಂದು ಭಕ್ತಸಮೂಹ ಕರೆಯುತ್ತದೆ.
ಭಕ್ತರ ಸಕಲ ಇಷ್ಟಾರ್ಥಗಳನ್ನು ಸಿದ್ಧಿಸುವ ಇವರು ಸಜೀವ ಬೃಂದಾವನಸ್ಥರಾದ ಸ್ಥಳವೆಂದರೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಮಂತ್ರಾಲಯ.ತುಂಗಭದ್ರದ ದದಡಲ್ಲಿರುವ ಈ ಮಂತ್ರಾಲಯಕ್ಕೆ ಪಂಡಿತರು, ಪಾಮರರು,ಮೇಧವಿಗಳು, ಉದ್ಯೋಗಿಗಳು, ಹಿರಿಯರು, ಕಿರಿಯರು ಯಾವುದೇ ಭೇದ ಭಾವವಿಲ್ಲದೆ ಇಲ್ಲಿಗೆ ಆಗಮಿಸುತ್ತಾರೆ. ದೇವರೆಂದರೆ ತಿರುಪತಿಯತಿಮ್ಮಪ್ಪ ,ಗುರುಳೆಂದರೆ ಮಂತ್ರಾಲಯದ ರಾಘಪ್ಪ ಎಂದು ನಂಬಿ ಇಲ್ಲಿ ಬಂದು ಪುಣ್ಯ ಕಟ್ಟಿಕೊಳ್ಳುತ್ತಾರೆ.
ಸ್ರಷ್ಟಿಕರ್ತ ಬ್ರಹ್ಮ ದೇವನ ಗಣಗಳಲ್ಲಿ ಒಬ್ಬರಾದ ರಾಯರು ಪೂರ್ವ ಜನ್ಮದಲ್ಲಿ ಲೋಕಕಲ್ಯಾಣಕ್ಕಾಗಿ ಪ್ರಹ್ಲಾದನಾಗಿ ಹುಟ್ಟಿ ಮುಂದಿನ ಜನ್ಮದಲ್ಲಿ ವ್ಯಾಸರಾಯರಾಗಿ ಹುಟ್ಟಿ ತಮ್ಮ ಮಹಿಮೆಯನ್ನು ಸಾರಿ ನಂತರ ಶ್ರೀ ರಾಘವೇಂದ್ರಯತಿಗಳಾಗಿ ಹುಟ್ಟಿ ಭಕ್ತರನ್ನು ಕಾಪಾಡುತ್ತಿದ್ದಾರೆ.

16ನೇ ಶತಮಾನದಲ್ಲಿ ತಿಮ್ಮನ್ನರು ಹಾಗೂ ಗೋಪಮ್ಮ ಎಂಬ ದಂಪತಿಗಳಿಗೆ ತಿಮ್ಮಪ್ಪನ ಆಶೀರ್ವಾದದಿಂದ ತಮಿಳುನಾಡಿನ ಭುವನಾಗಿರಿಯಲ್ಲಿ ಜನಿಸಿದರು. ರಾಯರ ಪೂರ್ವಾಶ್ರಮದ ಹೆಸರು ವೆಂಕಟನಾಥ. ಇವರು ಬಾಲ್ಯದಿಂದಲೇ ಮೇಧವಿಗಳು, ತೇಜಸ್ವಿಗಳು ಆಗಿದ್ದರು.ನಂತರ ಸರಸ್ವತಿ ಎಂಬ ಯುವತಿಯನ್ನು ವಿವಾಹವಾದರು.ನಂತರ ಕುಂಭಕೋಣದಲ್ಲಿ ಶ್ರೀ ಸುಧೀಂದ್ರತೀರ್ಥರ ಹತ್ತಿರ ವ್ಯಾಸಂಗ ಮಾಡಿ ಅಲ್ಲಿಯೇ ಗುರುಕುಲದಲ್ಲಿ ಪಾಠ ಹೇಳಿಕೊಡುತ್ತಿದ್ದರು. ನಂತರ ಕುಂಭಕೋಣದ ಉತ್ತರಾಧಿಕಾರಿ ಯಾದರು.
ಕನಸಿನಲ್ಲಿ ತಾಯಿ ಶಾರದೆಯು ಬಂದು ಸನ್ಯಾಸತ್ವ ಸ್ವೀಕರಿಸಲು ಆದೇಶ ಮಾಡಿದಾಗ ಸುಧೀಂದ್ರತೀರ್ಥರಿಂದ ಸನ್ಯಾಸತ್ವ ಸ್ವೀಕರಿಸಿ ಶ್ರೀ ರಾಘವೇಂದ್ರ ಸ್ವಾಮಿಗಳೆಂದು ನಾಮಾಂಕಿತಗೊಳ್ಳುತ್ತಾರೆ. ಇದರಿಂದ ಬೇಸರಗೊಂಡು ಪತ್ನಿ ಸರಸ್ವತಿಯು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಪಿಶಾಚಿಯಾಗಿ ಅವರ ಬಳಿ ಹೋದಾಗ ತೀರ್ಥದಿಂದ ಮೋಕ್ಷಗೊಳಿಸುತ್ತಾರೆ.
ಲೋಕಕಲ್ಯಾಣಕ್ಕಾಗಿ ತೀರ್ಥಯಾತ್ರೆ ಮಾಡಿ ತಾವು ನಡೆದ ಸ್ಥಳಗಳನ್ನು ಪಾವನಗೊಳಿಸಿದ್ದಾರೆ. ಅಂತಿಮವಾಗಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂಚಾಲಿ ಎಂಬಲ್ಲಿ ಸಜೀವ ವಿಲೀನರಾದರು. ಆಗಿನ ಮಂಚಾಲಿಯೇ ಈಗಿನ ಮಂತ್ರಾಲಯ.