ಕಟ್ಟಡ ಕಾರ್ಮಿಕರಿಗೆ ಮತ್ತೊಂದು ಗುಡ್ ನ್ಯೂಸ್!

0 5

ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಘೋಷಿಸಿರುವಂತೆ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ 3,000 ರೂಪಾಯಿ ಲಾಕ್ ಡೌನ್ ವಿಶೇಷ ಪರಿಹಾರಧನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಈ ಮೂಲಕ ರಾಜ್ಯದ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಶುಭ ಸುದ್ದಿಯನ್ನು ಸರ್ಕಾರ ನೀಡಿದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಕುರಿತಂತೆ ಕಾರ್ಮಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬಿಎಸ್ ಅವರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಕೋವಿಡ್-19ರ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದಿನಾಂಕ 2021 ಏಪ್ರಿಲ್ 21ರಿಂದ, 2021 ಜೂನ್ ಏಳರವರೆಗೆ ಲಾಕ್ ಡೌನ್ ಘೋಷಿಸಲಾಗಿರುತ್ತದೆ.
ದಿನಾಂಕ 19 ಮೆ 2021ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಸದರಿ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೊಳಗಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಲಾ 3000 ರೂಪಾಯಿಯಂತೆ ಸಹಾಯ ಧನವನ್ನು ವಿತರಿಸುವುದಾಗಿ ಘೋಷಣೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಘೋಷಣೆಯಂತೆ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಒಳಗಾದ ಒಟ್ಟು 24,98,521 ನೊಂದಾಯಿತ ಎಲ್ಲಾ ಕಟ್ಟಡ ಕಾರ್ಮಿಕರಿಗೆ ತಲಾ 3000 ರೂಪಾಯಿಯಂತೆ ಒಟ್ಟು ರೂ.749.55 ಕೋಟಿಗಳಷ್ಟು ಮೊತ್ತವನ್ನು ಮಂಡಳಿಯ ಸುಂಕ ನಿಧಿಯಿಂದ ಸಹಾಯಧನವಾಗಿ ಪಾವತಿಸಲು ಸಹಾಯಧನವನ್ನು ನೇರವಾಗಿ ಅವರುಗಳ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಮಾತ್ರ ವರ್ಗಾಯಿಸಲು ಈ ಕೆಳಕಂಡ ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಹಾಗಾದರೆ ಆ ಷರತ್ತುಗಳು ಎನು ಎಂದು ನೋಡುವುದಾದರೆ, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಣಿಗೊಂಡ ಫಲಾನುಭವಿಗಳಿಗೆ ಮಾತ್ರ ಸಹಾಯಧನವನ್ನು ಪಾವತಿಸುವುದು. ಡಿಬಿಟಿಯ ಮೂಲಕ ವರ್ಗಾಯಿಸುವಾಗ ಫಲಾನುಭವಿಯ ಪುನರಾವರ್ತನೆ ಆಗದಂತೆ, ನಕಲೀಕರಣವಾಗದಂತೆ ಜಾಗ್ರತೆ ವಹಿಸುವುದು. ಒಬ್ಬರೇ ಫಲಾನುಭವಿಯು ಅಸಂಘಟಿತ ಮತ್ತು ಸಂಘಟಿತ ಎರಡೂ ಮಂಡಳಿಗಳಿಂದ ಫಲಾನುಭವಿಯಾಗದಂತೆ ಮತ್ತು ಪರಿಹಾರ ಪಡೆಯುವಲ್ಲಿ ಪುನರಾವರ್ತನೆ ಆಗದಂತೆ ಜಾಗ್ರತೆ ವಹಿಸುವುದು. ಫಲಾನುಭವಿಯ ಹೆಸರು, ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಮೊಬೈಲ್ ದೂರುವಾಣಿ ಸಂಖ್ಯೆ, ವಿಳಾಸ, ಅಂಚೆ ಸೂಚ್ಯಂಕ ಸಂಖ್ಯೆ, ಇತರೆ ಗುರುತಿಸುವಿಕೆಗಳನ್ನು ಸಮರ್ಪಕವಾಗಿರುವ ಬಗ್ಗೆ ದೃಢೀಕರಿಸಿಕೊಂಡು ಖಚಿತಪಡಿಸಿಕೊಳ್ಳಬೇಕು. ಕಾಲಕಾಲಕ್ಕೆ ಎಷ್ಟು ಫಲಾನುಭವಿಗಳಿಗೆ ಸಹಾಯಧನ ನೀಡಲಾಗಿದೆ ಎಂಬುದರ ಕುರಿತಾಗಿ ಸರ್ಕಾರಕ್ಕೆ ವರದಿಯನ್ನು ಸಲ್ಲಿಸುವುದು. ಸದರಿ ವಿತರಣೆಯು ವಿಳಂಬವಾಗದಂತೆ ಎಚ್ಚರಿಕೆ ವಹಿಸುವುದು. ಇವಿಷ್ಟು ಷರತ್ತುಗಳನ್ನು ಪಾಲಿಸಬೇಕು.

ಇನ್ನು ಕಾರ್ಮಿಕರ ಖಾತೆಗೆ ಬರೀ ಹಣವನ್ನು ಜಮಾ ಮಾಡುವುದು ಮಾತ್ರವಲ್ಲದೆ ಆಹಾರದ ಕಿಟ್ ವಿತರಿಸುವ ಸೌಲಭ್ಯ ಕೂಡಾ ಮಾಡಲಾಗುತ್ತಿದೆ. ಕಟ್ಟಡ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ಒದಗಿಸುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು , ಈಗಾಗಲೇ ಕಾರ್ಮಿಕ ಇಲಾಖೆಯಿಂದ ಇದರ ಕುರಿತಾಗಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಶನಿವಾರ ಭಾನುವಾರ ಈ ಎರಡು ದಿನಗಳು ಸರ್ಕಾರಿ ರಜೆಗಳು ಇರುವ ಕಾರಣ ಸ್ವಲ್ಪ ವಿಳಂಬ ಆಗಿರಬಹುದು. ಆದರೆ ಆದಷ್ಟು ಬೇಗ ಎಲ್ಲರ ಖಾತೆಗಳಿಗೂ ಹಣ ಜಮಾ ಮಾಡಲಾಗುವುದು. ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಆರು ಸಾವಿರ ರೂಪಾಯಿ ಮೌಲ್ಯದ ಆಹಾರ ಕಿಟ್ ಒದಗಿಸಲಾಗುವುದು. ಇದರ ಕುರಿತಾಗಿ ಕಟ್ಟಡ ಕಾರ್ಮಿಕರ ಮಂಡಳಿ ಸಲ್ಲಿಸಿದ ಅರ್ಜಿಗೆ ಸರ್ಕಾರ ಅನುಮೋದನೆಯನ್ನು ನೀಡಿದೆ. ಈ ಯೋಜನೆಯ ಅಡಿಯಲ್ಲಿ ಹೆಸರು ನೊಂದಾಯಿಸಿಕೊಂಡ ಸುಮಾರು 22 ಲಕ್ಷಕ್ಕೂ ಅಧಿಕ ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಗುವುದು ಎಂದು ಇದರ ಕುರಿತು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಈಗಾಗಲೇ ಕಳೆದ ವರ್ಷ ಸುಮಾರು ಹದಿನಾರು ಲಕ್ಷ ಕಾರ್ಮಿಕರಿಗೆ ಆಹಾರದ ಕಿಟ್ ಹಾಗೂ ತಲಾ ಐದು ಸಾವಿರ ಹಣವನ್ನು ಸಹ ನೀಡಲಾಗಿತ್ತು. ಈ ಬಾರಿ ಪ್ರತೀ ಕಟ್ಟಡ ಕಾರ್ಮಿಕರಿಗೆ ಮೂರು ಸಾವಿರ ರೂಪಾಯಿ ಪರಿಹಾರ ಧನ ನೀಡಲಾಗುವುದು.

Leave A Reply

Your email address will not be published.