ಮನಶಾಂತಿ ನೀಡುವ ಜೊತೆಗೆ ನೆಗೆಟಿವ್ ಎನರ್ಜಿ ತೊಲಗಿಸುವ ವಿಭೂತಿ

0 7

ಹಿಂದೂ ಧರ್ಮದಲ್ಲಿ ಅನೇಕ ಸಂಪ್ರದಾಯ ಹಾಗೂ ಆಚರಣೆಗಳಿವೆ. ನಮ್ಮ ಪೂರ್ವಜರ ಕಾಲದಿಂದಲೂ ಅದನ್ನು ತಪ್ಪದೇ ಇಂದಿನವೆರೆಗೆ ಆಚರಿಸಿಕೊಂಡು ಬಂದಿರುತ್ತೇವೆ. ಆದರೆ ಅದರ ನಿಜವಾದ ಮಹತ್ವವನ್ನು ತಿಳಿದಿರುವುದಿಲ್ಲ. ಇಂತಹ ಆಚರಣೆಗಳಲ್ಲಿ ಒಂದಾಗಿರುವಂತಹ ಒಂದು ಸಂಪ್ರದಾಯದ ಬಗ್ಗೆ ತಿಳಿದುಕೊಳ್ಳೋಣ. ಹಣೆಗೆ ವಿಭೂತಿ ಅಥವಾ ಭಸ್ಮವನ್ನು ಹಚ್ಚಿಕೊಳ್ಳುವುದು ಸಾಮಾನ್ಯ. ದೇವಾಲಯದಲ್ಲಿ ಪೂಜಾರಿಗಳೂ ಹಣೆಯ ಮೇಲೆ ಮೂರು ಸಾಲಿನ ಭಸ್ಮವನ್ನು ಹಚ್ಚಿಕೊಂಡಿರುತ್ತಾರೆ.ಮಾತ್ರವಲ್ಲದೇ ಶಿವಶರಣರು, ಸ್ಮಾರ್ತ ಬ್ರಾಹ್ಮಣರು ಹಾಗೂ ಲಿಂಗಾಯಿತರೂ ಹಣೆಗೆ ವಿಭೂತಿಯನ್ನು ಹಚ್ಚುತ್ತಾರೆ. ಭಸ್ಮದ ರೂಪದಲ್ಲಿರುವ ವಿಭೂತಿಯನ್ನು ಹಣೆಯ ಮೇಲೆ ತೋರು ಬೆರಳು, ಮಧ್ಯ ಹಾಗೂ ಉಂಗುರ ಬೆರಳುಗಳ ಸಹಾಯದಿಂದ ಅನ್ವಯಿಸಲಾಗುತ್ತದೆ. ವಿಭೂತಿಯ ಮಹಿಮೆ ಅಂತಿಂಥದ್ದಲ್ಲ. ಮಹಾಮಹಿಮ ಶಿವನಿಗೆ ಪ್ರಿಯವಾದ ವಿಲೇಪನ ಇದು. ಇದನ್ನು ಹಚ್ಚಿಕೊಳ್ಳುವುದೆಂದರೆ ಶಿವನ ಪೂಜೆಯೆಂದೇ ಅರ್ಥ. ವಿಭೂತಿಯ ಕುರಿತಾದ ಅದರ ಮಹತ್ವ ಹಾಗೂ ವಿಶೇಷತೆಯನ್ನು ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಚಂದನವು ಹೇಗೆ ಮಹಾವಿಷ್ಣುವಿಗೆ ಪ್ರಿಯವೋ ಹಾಗೇ ವಿಭೂತಿ ಪ್ರಿಯ ಶಿವ. ಶಿವನು ವಾಸಿಸುವುದು ಸ್ಮಶಾನದಲ್ಲಿ, ಸ್ಮಶಾನದಲ್ಲಿ ವಿಪುಲವಾಗಿ ಸಿಗುವುದೆಂದರೆ ವಿಭೂತಿಯೇ. ನಮ್ಮ ದೇಹವನ್ನು ಸುಟ್ಟ ಮೇಲೆ ಉಳಿಯುವುದು ಬೂದಿ ಮಾತ್ರ. ವಿಭೂತಿಯು ಹೀಗೆ ನಮ್ಮ ದೇಹದ, ನಮ್ಮ ಅಹಂಕಾರದ ಅಳಿವಿನ ಸಂಕೇತವಾಗಿದೆ. 

ಶಿವಲಿಂಗದ ಮೇಲೆ ಮೂರು ಅಡ್ಡನಾಮಗಳನ್ನು ನಾವು ಕಾಣಬಹುದು. ಇದು ವಿಭೂತಿ. ಶಿವ ಭಕ್ತರು, ಲಿಂಗಾಯತರು, ಬ್ರಾಹ್ಮಣರು, ದೈವಭಕ್ತರು ಯಾವಾಗಲೂ ಹಣೆಗೆ ವಿಭೂತಿ ಹಚ್ಚುತ್ತಾರೆ. ದೇವಸ್ಥಾನಗಳಲ್ಲಿ ಪೂಜಾರಿಗಳು ವಿಭೂತಿ ಹಚ್ಚಿಯೇ ಪೂಜೆ  ಶುರು ಮಾಡುವುದು. ವಿಭೂತಿ ಅಥವಾ ಭಸ್ಮವನ್ನು ಹಣೆಯ ಮೇಲೆ ಮೂರು ಸಾಲಿನಲ್ಲಿ ಅಡ್ಡವಾಗಿ ಹಚ್ಚುತ್ತಾರೆ. ದೇಹದ ಇತರ ಭಾಗಗಳಲ್ಲೂ ಕೆಲವರು ವಿಭೂತಿ ಧಾರಣೆ ಮಾಡಿಕೊಳ್ಳುತ್ತಾರೆ. ಹೀಗೆ ವಿಭೂತಿ ಹಚ್ಚಿಕೊಳ್ಳುವ ವಿಧಾನವೂ ವಿಶೇಷವಾಗಿರುತ್ತದೆ. ತೋರು ಬೆರಳು, ಮಧ್ಯ ಬೆರಳು ಹಾಗೂ ಉಂಗುರದ ಬೆರಳುಗಳಿಗೆ ವಿಭೂತಿ ತಿಕ್ಕಿಕೊಂಡು ಅದನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ.

ಹಿಂದೂ ಪುರಾಣದ ಪ್ರಕಾರ ವಿಭೂತಿಗೊಂದು ಕತೆಯೆ ಇದೆ. ಭೃಗು ಮಹರ್ಷಿ ಕಾಡಿನಲ್ಲಿ ತಪಸ್ಸು ಆಚರಿಸುತ್ತಿದ್ದನು. ಒಮ್ಮೆ ಆತ ಕಾಡಿನಲ್ಲಿ ಹುಲ್ಲನ್ನು ಕತ್ತರಿಸುವಾಗ ಆಕಸ್ಮಿಕವಾಗಿ ತಮ್ಮ ಬೆರಳನ್ನು ಕತ್ತರಿಸಿಕೊಳ್ಳುತ್ತಾನೆ. ಈ ವೇಳೆ ಆತನ ಬೆರಳಿನಿಂದ ರಕ್ತ ಜಿನುಗುವ ಬದಲು ಮರವೊಂದನ್ನು ಕತ್ತರಿಸಿದಾಗ ಬರುವ ದ್ರವದಂತೆ ಸೋರಲಾರಂಭಿಸುತ್ತದೆ. ಇದನ್ನು ನೋಡಿದ ಭೃಗು ಮಹರ್ಷಿ, ತನ್ನ  ತಪಸ್ಸಿನ ಫಲದಿಂದ ಹೀಗೆ ಆಗಿದೆ ಎಂದು ಅಹಂಕಾರಪಡುತ್ತಾನೆ. ಇದನ್ನು ತಿಳಿದ ಶಿವನು ಒಬ್ಬ ವೃದ್ಧನ ವೇಷಧಾರಿಯಾಗಿ ಬಂದು ಏಕೆ ಇಷ್ಟೊಂದು ಸಂಭ್ರಮ ಪಡುತ್ತಿರುವೆ ಎಂದು ಮಹರ್ಷಿಯನ್ನು ಕೇಳುತ್ತಾನೆ. ಆಗ ಆ ಭೃಗು ಮಹರ್ಷಿ ನಡೆದದ್ದನ್ನು ತಿಳಿಸಿ, ಅಹಂಕಾರದಿಂದ ಮೆರೆಯುತ್ತಾನೆ. ಇದನ್ನು ಕೇಳಿದ ವೃದ್ಧನ ವೇಷದಲ್ಲಿದ್ದ ಶಿವ ಅದರಲ್ಲಿ ವಿಶೇಷವೇನಿದೆ. ಮರ ಕತ್ತರಿಸಿ ಸುಟ್ಟರೆ ಭಸ್ಮವಾಗುತ್ತದೆ ಎಂದು ಹೇಳುತ್ತಾನೆ. ನಂತರ ತನ್ನ ಬೆರಳು ಕತ್ತರಿಸಿಕೊಳ್ಳುತ್ತಾನೆ. ಆಗ ಕೈನಿಂದ ಭಸ್ಮ ಸುರಿಯುತ್ತದೆ. ಇದನ್ನು ನೋಡಿದ ಭೃಗು ಮಹರ್ಷಿಗೆ ತಮ್ಮ ತಪ್ಪು ಅರಿವಾಗುತ್ತದೆ. ಹೀಗೆ ಭಸ್ಮವು ಶಿವನ ಒಂದಂಶವಾಗಿ ಪರಿಗಣಿಸಲ್ಪಟ್ಟಿದೆ.
 
ವಿಭೂತಿ ಅಥವಾ ಭಸ್ಮಕ್ಕೆ ಕೆಟ್ಟದನ್ನು ನಾಶ ಮಾಡುವ ಶಕ್ತಿ ಇರುತ್ತದಂತೆ. ವಿಭೂತಿ ಧರಿಸಿಕೊಂಡರೆ ಯಾವುದೇ ಋಣಾತ್ಮಕ ಅಥವಾ ದುಷ್ಟಶಕ್ತಿಗಳು ನಮ್ಮನ್ನು ಕಾಡುವುದಿಲ್ಲವಂತೆ. ನಮ್ಮ ಪಾಪಗಳನ್ನು ಕೂಡಾ ನಾಶ ಮಾಡುವ ಶಕ್ತಿ ಈ ವಿಭೂತಿಗೆ ಇದೆಯಂತೆ. ಯಾವುದೇ ವಸ್ತುವನ್ನು ಸುಟ್ಟರೂ ಅದರಿಂದ ಭಸ್ಮ ಸೃಷ್ಟಿಯಾಗುತ್ತದೆ. ಆದರೆ ಆ ಯಾವ ಭಸ್ಮವೂ ಪವಿತ್ರವಾಗುವುದಿಲ್ಲ.  ಶುದ್ಧ ನಾಟಿ ಹಸುವಿನ ಹಾಲು, ತುಪ್ಪ, ಜೇನುತುಪ್ಪದಿಂದ ಸಗಣಿಯನ್ನು ಸುಟ್ಟಾಗ ಬರುವ ಭಸ್ಮ ಶ್ರೇಷ್ಠ ಎಂದು ನಂಬಲಾಗಿದೆ. ಇದನ್ನೇ ವಿಭೂತಿ ಎಂದು ಕರೆಯಲಾಗುತ್ತದೆ. ಇನ್ನೂ ವಿಭೂತಿ ಹಚ್ಚಿಕೊಳ್ಳುವವರು ಹಣೆಯ ಮೇಲೆ ಮೂರು ಗೆರೆಗಳನ್ನೆ ಹಚ್ಚಿಕೊಳ್ಳುತ್ತಾರೆ ಯಾಕೆ ಎನ್ನುವ ಪ್ರಶ್ನೆ ಕೆಲವರಿಗೆ ಇರಬಹುದು. ಅದಕ್ಕೆ ಉತ್ತರ ನೋಡುವುದಾದರೆ , ತೋರು ಬೆರಳು, ಮಧ್ಯ ಬೆರಳು ಹಾಗೂ ಉಂಗುರದ ಬೆರಳುಗಳ ಮೂಲ ಹಣೆಗೆ ಮೂರು ಗೆರೆಗಳಾಗಿ ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ. ಇದರ ಅರ್ಥ ಮೊದಲ ಸಾಲು ನಮ್ಮಲ್ಲಿನ ಅಹಂಕಾರವನ್ನು ತೊಡೆದುಹಾಕುತ್ತದೆ. ಎರಡನೆಯ ಸಾಲು ನಮ್ಮಲ್ಲಿರುವ ಅಜ್ಞಾನವನ್ನು ದೂರ ಮಾಡುತ್ತದೆ. ಮೂರನೆಯ ಸಾಲು ನಮ್ಮಲ್ಲಿನ ಕೆಟ್ಟ ಗುಣಗಳನ್ನು, ನಾವು ಮಾಡಿರುವ ಪಾಪಗಳನ್ನು ತೊಡೆದುಹಾಕುತ್ತದೆ.

ಆಯುರ್ವೇದದಲ್ಲಿ ಭಸ್ಮದ ಬಳಕೆ: ಭಾರತದಲ್ಲಿ ಭಸ್ಮ ಧಾರಣೆ ಒಂದು ನಂಬಿಕೆ. ಇದರ ಜೊತೆಗೆ ಈ ಭಸ್ಮವನ್ನು ಆಯುರ್ವೇದದಲ್ಲಿ ಔಷಧ ತಯಾರಿಕೆಯಲ್ಲೂ ಬಳಕೆ ಮಾಡುತ್ತಾರೆ. ಚೀನೀಯರು, ಟಿಬೆಟಿಯನ್ನರು ಕೂಡಾ ಕೆಲವೊಂದು ಔಷಧಿ ತಯಾರಿಕೆಯಲ್ಲಿ ಈ ಭಸ್ಮವನ್ನು ಉಪಯೋಗಿಸುತ್ತಾರಂತೆ. ತಲೆನೋವು, ಆತಂಕ, ಗೊಂದಲಗಳು ನಿವಾರಣೆಯಾಗಿ ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿಯ ಸಂಚಾರವಾಗುತ್ತದೆ ಎಂದು ಹೇಳಲಾಗಿದೆ. ದುರದೃಷ್ಟವಶಾತ್ ಅನೇಕ ಸ್ಥಳಗಳು ಒಂದು ವಿಶಿಷ್ಟವಾದ ಬಿಳಿಕಲ್ಲಿನ ಪುಡಿಯನ್ನು ವಿಭೂತಿಯೆಂಬುದಾಗಿ ನೀಡಿ ಕಳಂಕ ತರುವ ವ್ಯವಹಾರ ಕ್ಷೇತ್ರಗಳಾಗಿವೆ. ಆದರೆ ಅದನ್ನು ಸರಿಯಾಗಿ ತಯಾರಿಸಿ, ಅದನ್ನು ಹೇಗೆ ಎಲ್ಲಿ ಧರಿಸಬೇಕು ಎಂಬುದರ ಅರಿವು ನಿಮಗಿದ್ದರೆ, ನೀವು ತೀವ್ರ ಗ್ರಹಣಶಕ್ತಿಯುಳ್ಳವರಾಗುವಿರಿ. ಶರೀರದ ಮೇಲೆ ಧರಿಸಿದ ಸ್ಥಳವು ಹೆಚ್ಚು ಸಂವೇದನಾಶೀಲವಾಗುತ್ತದೆ ಮತ್ತು ಉನ್ನತ ಸ್ವಭಾವದೆಡೆಗೆ ಸಾಗುತ್ತದೆ. ಪ್ರಪ್ರಥಮವಾಗಿ ನೀವು ಬೆಳಗಿನ ಹೊತ್ತು ಮನೆಯಿಂದಾಚೆ ಹೋಗುವ ಸಮಯದಲ್ಲಿ, ವಿಭೂತಿಯನ್ನು ನಿರ್ದಿಷ್ಟ ಜಾಗಗಳಲ್ಲಿ ಧಾರಣೆ ಮಾಡಿಕೊಂಡಾಗ, ನಿಮ್ಮ ಸುತ್ತಲೂ ಇರುವ ದೈವೀ ಶಕ್ತಿಯನ್ನು ಸ್ವೀಕರಿಸುವಿರಿ.

ಶಿವನ ಅಂಶವಾಗಿರುವ ವಿಭೂತಿಯನ್ನು ಈ ಕಾರಣದಿಂದಾಗಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಂದಿಗೂ ಹಿಂದೂ ಧರ್ಮದಲ್ಲಿ ಅನೇಕರು ದುಷ್ಟಶಕ್ತಿಗಳನ್ನು ದೂರವಿಡಲು ಹಾಗೂ ನಕಾರಾತ್ಮಕ ಆಲೋಚನೆಗಳನ್ನು ದೂರವಿರಿಸಲು ಭಸ್ಮ ಅಥವಾ ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ

Leave A Reply

Your email address will not be published.