ಜೀವನ ಅನ್ನೋದು ನಾವು ಅಂದುಕೊಂಡಷ್ಟು ಸುಲಭವು ಅಲ್ಲ ಕಷ್ಟವೂ ಅಲ್ಲ. ಬದುಕಲ್ಲಿ ಏನು ಬೇಕಾದರೂ ಆಗಬಹುದು ಇಂದು ಬಡವನಾಗಿದ್ದವ ನಾಳೆ ಕೋಟ್ಯಾಧಿಪತಿನೂ ಆಗಬಲ್ಲ ಹಾಗೇ ಕೋಟ್ಯಧಿಪತಿ ಭಿಕಾರಿಯೂ ಆಗಬಹುದು. ಜೀವನ ಯಾವ ಕ್ಷಣದಲ್ಲಿ ಬೇಕಾದರೂ ಬದಲಾಗಬಹುದು. ಒಬ್ಬ ಸಾಮಾನ್ಯ ಬಾಲಕ ಸನ್ಯಾಸಿಯಾಗಿ ನಂತರ ಒಂದು ದೊಡ್ಡ ರಾಜ್ಯದ ಮುಖ್ಯಮಂತ್ರಿ ಆದ ಬಗ್ಗೆ ಇಲ್ಲಿ ಅವರ ಜೀವನದ ಬಗ್ಗೆ ಮಾಹಿತಿ ಕಲೆಹಾಕಿ ನೀಡಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥರ ಕುರಿತು ಹೇಳಲಾಗಿದೆ. ಅವರ ಹುಟ್ಟಿದ ಸ್ಥಳ, ಆರಂಭಿಕ ಜೀವನ, ಶಿಕ್ಷಣ, ರಾಜಕೀಯ ಜೀವನದ ಕುರಿತು ತಿಳಿದುಕೊಳ್ಳೋಣ.

ಯೋಗಿ ಆದಿತ್ಯನಾಥ್ ಅವರು ಉತ್ತಮ ವಾಗ್ಮಿ ಮತ್ತು ತಮ್ಮ ಭಾಷಣದಿಂದ ಯಾರನ್ನಾದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದಿತ್ಯನಾಥ್ 5 ಜೂನ್ 1972 ರಂದು ಉತ್ತರಾಖಂಡ್‌ನ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರ ತೆಹಸಿಲ್‌ನ ಪಂಚೂರ್ ಗ್ರಾಮದಲ್ಲಿ ಜನಿಸಿದರು. ಆ ಸಮಯದಲ್ಲಿ ಆ ಭಾಗವು ಉತ್ತರ ಪ್ರದೇಶದ ಅಡಿಯಲ್ಲಿಯೇ ಇತ್ತು. ಇಂದು ಉತ್ತರಾಖಂಡ್ ರಾಜ್ಯದಲ್ಲಿ ಬರುತ್ತದೆ. ಯೋಗಿ ಆದಿತ್ಯನಾಥ್ ಗರ್ವಾಲಿ ರಜಪೂತ ಸಮುದಾಯದವರು. ಅವರ ತಂದೆಯ ಹೆಸರು ಆನಂದ್ ಸಿಂಗ್ ಬಿಸ್ಟಾ. ಇವರು ಅರಣ್ಯ ರಕ್ಷಕರಾಗಿದ್ದರು ಮತ್ತು ತಾಯಿಯ ಹೆಸರು ಸಾವಿತ್ರಿ ದೇವಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಬಿಷ್ಟಾ. ಅವರ ತಂದೆ ತಾಯಿಯ ಒಟ್ಟು ಎಳು ಜನ ಮಕ್ಕಳಲ್ಲಿ ಇವರು ಏರಡನೆಯವರು.

ಯೋಗಿ ಆದಿತ್ಯನಾಥ್ 1977 ರಲ್ಲಿ ತೆಹ್ಲಿ ಗದ್ವಾಲ್‌ನ ಗಾಜಾ ಶಾಲೆಯಿಂದ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. 1989 ರಲ್ಲಿ, ಅವರು ಋಷಿಕೇಶದ ಭಾರತ್ ಮಂದಿರ ಇಂಟರ್ ಕಾಲೇಜ್‌ನಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾದರು. 1992 ರಲ್ಲಿ ಹೇಮಾವತಿ ನಂದನ್ ಬಹುಗುಣ ಗದ್ವಾಲ್ ವಿಶ್ವವಿದ್ಯಾಲಯದಿಂದ ಗಣಿತ ವಿಜ್ಞಾನಶಾಸ್ತ್ರದಲ್ಲಿ ಬಿಎಸ್ಸಿ ಮಾಡಿದರು. ಕಾಲೇಜಿನ ಕಾಲದಿಂದಲೂ ಅವರು ತಮ್ಮ ಮಾತಿನ ಗುಣದಿಂದ ಬಹಳ ಪ್ರಸಿದ್ಧರಾಗಿದ್ದರು.

ವಿದ್ಯಾರ್ಥಿ ಜೀವನದಲ್ಲಿ ಹಲವಾರು ಸಾಮಾಜಿಕ ಚಳವಳಿ ಹಾಗೂ ಆಂದೋಲನಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ತಮ್ಮ 22 ನೇ ವಯಸ್ಸಿನಲ್ಲಿ ಕುಟುಂಬವನ್ನು ತೊರೆದು ಸನ್ಯಾಸತ್ವ ಸ್ವೀಕರಿಸಿದರು. ಒಂದು ಕಡೆ ಕುಳಿತು ದೈವಾರಾಧನೆ ಮಾಡುವ ಬದಲಾಗಿ ಎಲ್ಲ ಕಡೆಗೆ ಸುತ್ತಾಡುತ್ತ ಜನರಲ್ಲಿ ಅರಿವು ಮೂಡಿಸತೊಡಗಿದರು. ಪೂರ್ವ ಉತ್ತರ ಪ್ರದೇಶದಲ್ಲಿ ಜನಜಾಗರಣ ಅಭಿಯಾನ ಆರಂಭಿಸಿದರು. ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಇವರು ಎಲ್ಲ ವರ್ಗದ ಜನರೊಂದಿಗೆ ಬೆರೆತು ಅವರೊಂದಿಗೆ ಊಟ ಸೇವಿಸಿದರು.

ಯೋಗಿ ಆದಿತ್ಯನಾಥರು 1990 ರ ಸುಮಾರಿಗೆ ಅಯೋಧ್ಯೆ ರಾಮ ಮಂದಿರ ಚಳುವಳಿಗೆ ಸೇರಲು ತಮ್ಮ ಮನೆಯನ್ನು ತೊರೆದರು. ಆ ಸಮಯದಲ್ಲಿ ಅವರು ಗೋರಖನಾಥ ಮಠದ ಮುಖ್ಯಸ್ಥರಾದ ಮಹಂತ್ ಅವೈದ್ಯನಾಥ್ ಅವರ ಶಿಷ್ಯರಾದರು. ತಮ್ಮ ದೀಕ್ಷೆಯ ನಂತರ ಗೋರಖ್‌ಪುರದಲ್ಲಿ ನೆಲೆಸಿರುವಾಗ, ಆದಿತ್ಯನಾಥ್ ಅವರು ತಮ್ಮ ಪೂರ್ವಜರ ಗ್ರಾಮಕ್ಕೆ ಆಗಾಗ್ಗೆ ಭೇಟಿ ನೀಡುತ್ತಿದ್ದರು, 1998 ರಲ್ಲಿ ಅಲ್ಲಿ ಶಾಲೆಯನ್ನು ಸ್ಥಾಪಿಸಿದರು. 1998 ರಲ್ಲಿ ಪ್ರಥಮ ಬಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸಂಸದರಾದರು. ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು. 12 ಸೆಪ್ಟೆಂಬರ್ 2014 ರಂದು ಆವೈದ್ಯನಾಥ್ ಅವರ ಮರಣದ ನಂತರ ಆದಿತ್ಯನಾಥ್ ಅವರನ್ನು ಮಹಂತ್ ಅಥವಾ ಗೋರಖನಾಥ ಮಠದ ಪ್ರಧಾನ ಅರ್ಚಕರಾಗಿ ಬಡ್ತಿ ನೀಡಲಾಯಿತು.

ಯೋಗಿ ಆದಿತ್ಯನಾಥ ಹಿಂದೂ ಧರ್ಮದ ಪ್ರಬಲ ಬೆಂಬಲಿಗ ಬಲಪಂಥೀಯ ಫೈರಬ್ಯಾಂಡ್ ರಾಜಕಾರಣಿಯಾಗಿದ್ದಾರೆ. ಭಾರತದ ಮುಂದಿನ ಪ್ರಧಾನಿ ಎಂದೇ ಬಿಂಬಿತವಾದ ಮತ್ತು ಯಾವಾಗಲೂ ಮೋದಿ ಜೊತೆಗೆ ತಳುಕು ಹಾಕಿಕೊಂಡಿರುತ್ತದೆ. ಮೋದಿ ಯೋಗಿ ಎಂಬುದು ಭಾರತೀಯ ಜನತಾ ಪಾರ್ಟಿ ಮತ್ತು ಹಿಂದೂ ಸಮಾಜದ ನಾಯಕರ, ಅಭಿಮಾನಿಗಳ ಅಚ್ಚುಮೆಚ್ಚಿನ ಹೆಸರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆಗಿರುವ ಯೋಗಿ ಆದಿತ್ಯನಾಥ್ ಈ ಬಾರಿಯ ಚುನಾವಣೆಯಲ್ಲಿ ಕೂಡ ಗೆಲುವು ಸಾಧಿಸಿ ಮತ್ತೊಮ್ಮೆ ಸಿಎಂ ಗದ್ದುಗೆಗೆ ಏರುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ 23 2022 ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಮುನ್ನಡೆಯುತ್ತಿದೆ. ಆ ಮೂಲಕ, ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವುದು ಖಚಿತವಾಗಿದೆ. ಪ್ರಸ್ತುತ ಇವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾರೆ.

Leave a Reply

Your email address will not be published. Required fields are marked *