Ultimate magazine theme for WordPress.

ಕನ್ನಡದ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ ಜೀವನ ಹಾದಿ ಹೇಗಿತ್ತು ಗೊತ್ತೇ

0 2

ಚಿತ್ರರಂಗ ಹಲವು ಶಾಖೆಗಳು, ಸಾಕಷ್ಟು ಜನರು ಕೆಲಸ ಮಾಡುವ ಒಂದು ಉದ್ಯಮ. ಈ ಉದ್ಯಮದಲ್ಲಿ ಸಾಹಸ ಕಲಾವಿದರು ಕೆಲಸ ಮಾಡುತ್ತಾರೆ. ಸಾಹಸ ಕಲಾವಿದರು ತಮ್ಮ ಜೀವದ ಆಸೆಯನ್ನು ಬಿಟ್ಟು ಕೆಲಸ ಮಾಡಬೇಕಾಗುತ್ತದೆ. ಅಂತವರಲ್ಲಿ ಥ್ರಿಲ್ಲರ್ ಮಂಜು ಒಬ್ಬ ಉತ್ತಮ ಸಾಹಸ ಕಲಾವಿದ. ಅವರ ಬಗ್ಗೆ ಹಾಗೂ ಅವರು ನಟಿಸಿದ ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಒಂದು ಸಿನಿಮಾ ಯಶಸ್ವಿಯಾಗಲು ಸಾಹಸ ಕಲಾವಿದರು ಪ್ರಮುಖ ಕಾರಣವಾಗುತ್ತಾರೆ. ಚಿತ್ರೀಕರಣದ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಾಯಗಳಾಗುತ್ತದೆ, ಒಂದು ರೀತಿಯಲ್ಲಿ ಇವರದು ಸಾವಿನೊಂದಿಗೆ ಸೆಣೆಸಾಟ. ಕನ್ನಡ ಚಿತ್ರರಂಗದಲ್ಲಿ ಅನೇಕರು ಸಾಹಸ ಕಲಾವಿದರು, ಸ್ಟಂಟ್ ಮಾಸ್ಟರ್ ಇದ್ದಾರೆ ಅದರಲ್ಲಿ ಥ್ರಿಲ್ಲಿಂಗ್ ಮಂಜು ಅವರು ಸಾಹಸದಿಂದ ಮನೆಮಾತಾದ ಕಲಾವಿದರು. ಕನ್ನಡದ ಹೆಮ್ಮೆಯ ಫೈಟ್ ಮಾಸ್ಟರ್, ನಿರ್ದೇಶಕ ಹಾಗೂ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರ ಕೊಡುಗೆ ಚಿತ್ರರಂಗದಲ್ಲಿ ಪ್ರಧಾನವಾದದ್ದು. ಇವರು ಬೆಂಗಳೂರಿನವರಾಗಿದ್ದು, ಶ್ರೀ ಹನುಮಪ್ಪ ರೆಡ್ಡಿ ಹಾಗೂ ರುಕ್ಮಿಣಮ್ಮ ದಂಪತಿಗಳಿಗೆ 1968 ರಲ್ಲಿ ಮೂರು ಮಕ್ಕಳಲ್ಲಿ ಎರಡನೆಯವನಾಗಿ ಸಾಧಾರಣ ಕುಟುಂಬದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿ ಇದ್ದಾಗಲೇ ಸಿನಿಮಾ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. ಅವರು ಡಾಕ್ಟರ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದರು. ಮಂಜು ಅವರು ರಾಜಕುಮಾರ್ ಅವರ ಸಿನಿಮಾದ ಫೈಟಿಂಗ್ ಸೀನ್ ಗಳನ್ನು ನೋಡಿ ತಾವು ಅನುಸರಿಸುತ್ತಿದ್ದರು, ಅಲ್ಲದೆ ಫೈಟಿಂಗ್ ಗೆ ಹೆಸರುವಾಸಿಯಾಗಿರುವ ಬ್ರೂಸ್ಲಿ ಅವರ ಅಭಿಮಾನಿಯಾಗಿದ್ದರು ಅವರಂತೆ ಫೈಟರ್ ಆಗಬೇಕೆಂದು ಒಬ್ಬರೇ ಅಭ್ಯಾಸ ಮಾಡುತ್ತಿದ್ದರು. ಅವರು ಪಿಯುಸಿ ಓದುವಾಗ ಕನ್ನಡ ಚಿತ್ರರಂಗದ ಪ್ರಮುಖ ಸ್ಟಂಟ್ ಮಾಸ್ಟರ್ ಶ್ರೀ ಹಾಸನರಘು ಎನ್ನುವವರ ತರಬೇತಿ ಶಿಬಿರದ ಆಯ್ಕೆಯ ಜಾಹೀರಾತಿನ ಅಂಕಣವನ್ನು ನೋಡಿ ಅದಕ್ಕೆ ಸೇರಲು ನಿರ್ಧರಿಸಿ, ತರಬೇತಿ ಶಿಬಿರಕ್ಕೆ ಆಯ್ಕೆಯಾಗುತ್ತಾರೆ. ಅಲ್ಲಿ ಹಲವು ಹಿರಿಯ ಸಾಹಸ ಕಲಾವಿದರ ಪರಿಚಯವಾಯಿತು, ಜೊತೆಗೆ ಅನೇಕ ಸಾಹಸ ಕಲೆಗಳನ್ನು ಶ್ರದ್ಧೆಯಿಂದ ಕಲಿತರು ದೇಹ ದಂಡಿಸಿದರು. ತವರು ಮನೆ ಎಂಬ ಸಿನಿಮಾದಲ್ಲಿ ಸಾಹಸಿ ಕಲಾವಿದನಾಗಿ ಪಾತ್ರ ನಿರ್ವಹಿಸಿ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

ಕನ್ನಡ ಚಿತ್ರರಂಗದ ಅಂದಿನ ಫೇಮಸ್ ಸ್ಟಂಟ್ ಮಾಸ್ಟರ್ ವೈ. ಶಿವಯ್ಯ ಅವರಿಂದ ಸೈ ಎನಿಸಿಕೊಂಡರು. ಶಿವರಾಜಕುಮಾರ್ ಅವರ ಆನಂದ ಸಿನಿಮಾದಲ್ಲಿ ಸ್ಟಂಟ್ ಮ್ಯಾನ್ ಆಗಿ ಸೇರಿಕೊಂಡರು. ರಾಜಕುಮಾರ್ ಅವರ ಗುರಿ ಸಿನಿಮಾದಲ್ಲಿ ಸ್ಟಂಟ್ ಮ್ಯಾನ್ ಆಗಿ ನಟಿಸಿದರು ನಂತರ ಹಲವು ಸಿನಿಮಾಗಳಲ್ಲಿ ನಟಿಸಿದರು. ರಥಸಪ್ತಮಿ, ಆಸೆಗೊಬ್ಬ ಮೀಸೆಗೊಬ್ಬ, ಮನ ಮೆಚ್ಚಿದ ಹುಡುಗಿ, ಶೃತಿ ಸೇರಿದಾಗ, ಅನುರಾಗ ಅರಳಿತು ಮುಂತಾದ ಸಿನಿಮಾಗಳಲ್ಲಿ ಸಾಹಸ ಕಲಾವಿದನಾಗಿ ನಟಿಸಿದರು. ಪರಭಾಷಾ ಕಲಾವಿದರ ದಬ್ಬಾಳಿಕೆಯನ್ನು ನೋಡಿದ ಮಂಜು ಅವರು ತಾವೇ ಮಾಸ್ಟರ್ ಆಗಬೇಕೆಂದು ಶ್ರಮ ಪಟ್ಟರು. ಮಾಸ್ಟರ್ ಆದ ನಂತರ ಶಂಕರ್ ನಾಗ್ ಅವರ ನರಸಿಂಹ ಚಿತ್ರದಲ್ಲಿ ನಟಿಸಿದರು. ನಂತರ ಲಾಕಪ್ ಡೆತ್ ಸಿನಿಮಾದಲ್ಲೂ ನಟಿಸಿದರು ಇದರಿಂದ ಬೆಸ್ಟ್ ಸಾಹಸ ಕಲಾವಿದ ಸ್ಟೇಟ್ ಅವಾರ್ಡ್ ಮಂಜು ಅವರಿಗೆ ದೊರೆಯಿತು, ಮಾಸ್ಟರ್ ಮಂಜು ಆದರು. ನಂತರ ಸಿಂಹದ ಮರಿ, ಓಂ ಸಿನಿಮಾಗಳಲ್ಲಿ ನಟಿಸಿದರು. ಉಪೇಂದ್ರ ಅವರ ನಿರ್ದೇಶನದ ಶ್ ಸಿನಿಮಾದಲ್ಲಿ ಥ್ರಿಲ್ಲರ್ ಮಂಜು ಅವರ ಥ್ರಿಲ್ಲಿಂಗ್ ಫೈಟ್ ಅನ್ನು ಯಾರು ಮರೆಯುವುದಿಲ್ಲ. ಪೊಲೀಸ್ ಸ್ಟೋರಿ ಚಿತ್ರವನ್ನು ಮಂಜು ಅವರು ತಾವೇ ಸ್ವತಃ ನಿರ್ದೇಶನ ಮಾಡಿದ್ದಾರೆ. ನಂತರ ಪೊಲೀಸ್ ಆಫೀಸರ್, ಥ್ರಿಲ್ಲರ್ ಕಿಲ್ಲರ್, ಪೊಲೀಸ್ ಡಾಗ್ ಹೀಗೆ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವರು 550ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲೂ ಮಂಜು ಅವರು ಸಕ್ರೀಯರಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನ ಮಾಡಲಾಗಿದೆ. ಅವರ ಕೀರ್ತಿ ಇನ್ನಷ್ಟು ಹರಡಲಿ ಎಂದು ಆಶಿಸೋಣ.

Leave A Reply

Your email address will not be published.