ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಯಾಕೆ ಹೋಗಬಾರದು ಗೊತ್ತಾ..

0 1

ಭಾರತದಂತಹ ಬಹು ಧರ್ಮೀಯ ಬಹು ಸಂಸ್ಕೃತಿಯ ವೈವಿಧ್ಯತೆಯ ದೇಶದಲ್ಲಿ ದೇವರು, ಸಂಪ್ರದಾಯ, ಆಚರಣೆ ಎನ್ನುವುದು ಎಷ್ಟು ಮಹತ್ವದ್ದೋ ಅಷ್ಟೇ ಸೂಕ್ಷ್ಮ ವಿಚಾರ ಕೂಡ. ಈ ದೇಶದ ಕಾನೂನು ಎಲ್ಲರಿಗೂ ಅವರವರ ಧರ್ಮವನ್ನು ಅಥವಾ ಅವರಿಗೆ ಒಪ್ಪಿತವಾದ ಧರ್ಮವನ್ನು ಆಚರಿಸುವ, ಅನುಸರಿಸುವ ಹಕ್ಕುಗಳನ್ನು ಕೊಟ್ಟಿದೆ. ಆದರೆ ಯಾರೊಬ್ಬರು ಮತ್ತೊಂದು ಧರ್ಮವನ್ನು ನಿಂದಿಸುವ, ಪರಿಹಾಸ್ಯ ಮಾಡುವ, ಮತ್ತೊಬ್ಬರ ಧಾರ್ಮಿಕ ಭಾವನೆಗೆ ಧಕ್ಕೆ ಮಾಡುವಂತೆ ಇಲ್ಲ.

ಇನ್ನು ದೇವಸ್ಥಾನ, ಚರ್ಚ್, ಮಸೀದಿ, ಜೀನಾಲಯ, ಗುರುದ್ವಾರ ಇತ್ಯಾದಿ ಧಾರ್ಮಿಕ ಆರಾಧನಾ ಕೇಂದ್ರಗಳಲ್ಲಿ ತನ್ನದೇ ನಿಯಮಗಳು ಇರುತ್ತವೆ. ನಾನು ದೇವರ ಭಕ್ತ, ದೇವರ ದರ್ಶನಕ್ಕೆ ಭಕ್ತಿಯೊಂದೇ ಮುಖ್ಯ ಅಂತ ದೇವಸ್ಥಾನಗಳಲ್ಲಿ ಅಥವಾ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ನಿಮ್ಮ ಇಷ್ಟದಂತೆ ವರ್ತಿಸುವಹಾಗಿಲ್ಲ. ಹಾಗಿದ್ರೆ ದೇವಸ್ಥಾನಕ್ಕೆ ಹೇಗೆ ಹೋಗಬೇಕು? ದೇವರ ದರ್ಶನಕ್ಕೆ ನಿಯಮಗಳೇನಾದರೂ ಇದೆಯೇ? ಮಾಂಸಾಹಾರ ತಿಂದು ದೇವರ ದರ್ಶನ ಮಾಡಬಹುದೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಈ ಬಗ್ಗೆ ತಿಳಿದುಕೊಳ್ಳೋಣ ಆ ಕುರಿತಾದ ಮಾಹಿತಿ ಇಲ್ಲಿದೆ.

ದೇವಾಲಯಗಳು ಹಿಂದೂ ಧರ್ಮದ ಶ್ರಧ್ಧಾ ಕೇಂದ್ರಗಳು. ಹಿಂದೂ ಧರ್ಮದ ಬಹುತೇಕ ಧಾರ್ಮಿಕ ಚಟುವಟಿಕೆಗಳ ಮುಖ್ಯಕೇಂದ್ರವೇ ದೇವಸ್ಥಾನಗಳಾಗಿರುತ್ತವೆ. ಹಾಗಾಗಿ ಪ್ರತಿಯೊಂದು ಹಳ್ಳಿಗಳಲ್ಲಿಯೂ ಒಂದಲ್ಲಾ ಒಂದು ದೇವಾಲಯಗಳು ಇದ್ದೇ ಇರುತ್ತವೆ. ಶಿವ, ವಿಷ್ಣು, ದುರ್ಗೆ, ಲಕ್ಷ್ಮೀ, ಸರಸ್ವತಿ, ಗಣೇಶ, ಸುಬ್ರಹ್ಮಣ್ಯ, ಅಯ್ಯಪ್ಪ, ನಾಗದೇವರು, ಗ್ರಾಮದೇವರು, ಪುರುಷ ಹಾಗೂ ಸ್ತ್ರೀ ದೇವರು, ಯಕ್ಷ ಯಕ್ಷಿಣಿಯರು ಇತ್ಯಾದಿ ಸೇರಿದಂತೆ ಹಲವು ದೇವರುಗಳಿಗೆ ದೇವಸ್ಥಾನ ಕಟ್ಟಿ ಪೂಜಿಸಲಾಗುತ್ತದೆ. ದೇವಾಲಯದ ಪರಿಸರವು ಮಾನಸಿಕ ಪರಿಣಾಮವನ್ನು ಉಂಟುಮಾಡುತ್ತದೆ. ಮಾನಸಿಕವಾಗಿ ನೆಮ್ಮದಿ ನೀಡಲು ಸಹಾಯ ಮಾಡುತ್ತದೆ.

ಇದು ಬಯಸಿದ ಉದ್ದೇಶದ ಮೇಲೆ ಮನಸ್ಸನ್ನು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಭಕ್ತನು ಜನನ, ಮರಣ ವೃದ್ಧಾಪ್ಯ, ರೋಗ ಮತ್ತು ಮಕ್ಕಳು, ಹೆಂಡತಿ, ಮನೆ ಮತ್ತು ಪ್ರಪಂಚದ ಇತರರೊಂದಿಗೆ ಸಿಕ್ಕಿಹಾಕಿಕೊಳ್ಳುವ ಕೆಟ್ಟ ಗ್ರಹಿಕೆಯಿಂದ ಮುಕ್ತವಾಗಿರಲು ಪ್ರಯತ್ನಿಸುವ ಸ್ಥಳವೇ ದೇವಾಲಯ. ಎಲ್ಲಾ ದೇವಸ್ಥಾನಗಳಿಗೆ ಸ್ಥಳಗಳಿಗೆ ಶಾಸ್ತ್ರ ಮತ್ತು ಸಂಪ್ರದಾಯಗಳ ನೆಪದಲ್ಲಿ ಭೇಟಿ ನೀಡಲೇ ಬೇಕೆಂಬ ಅಲಿಖಿತ ನಿಯಮವಿರುತ್ತಿತ್ತು. ಹಾಗಾಗಿಯೇ ವಿವಿಧ ತೀರ್ಥಕ್ಷೇತ್ರಗಳ ದರ್ಶನ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂಬ ನಂಬಿಯೂ ಇತ್ತು. ಇನ್ನು ಎಲ್ಲಾ ದೇಗುಲಕ್ಕೆ ತನ್ನದೇ ಆದ ನಿಯಮಗಳಿದ್ದು ಅಲ್ಲಿಗೆ ಹೋದ ಜನರು ಅದನ್ನು ಪಾಲಿಸಲೇ ಬೇಕೆಂಬ ಅಲಿಖಿತ ನಿಯಮಗಳಿವೆ. ಆದರೆ ಕಾನೂನಿನಲ್ಲಿ ಅಥವಾ ಲಿಖಿತವಾಗಿ ಈ ಬಗ್ಗೆ ವಿವರಣೆ ಇಲ್ಲದಿದದ್ದರೂ ಸಂಪ್ರದಾಯದ ಹೆಸರಲ್ಲಿ ಇದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ದೇವಾಲಯಗಳಿಗೆ ಭೇಟಿ ನೀಡುವ ಮೊದಲು ಶುಚಿರ್ಭೂತರಾಗಿ ಮನೆಮಂದಿಯೆಲ್ಲಾ ಹೂವು, ಹಣ್ಣು, ಕಾಯಿಗಳೊಂದಿಗೆ ಮನೆ ಮಂದಿಯೆಲ್ಲಾ ಭಕ್ತಿಯಿಂದ ದೇವಸ್ಥಾನಗಳಿಗೆ ಸೂರ್ಯೋದಯ ಸಮಯದಲ್ಲೋ, ಇಲ್ಲವೇ ಸೂರ್ಯಾಸ್ತದ ಸಮಯದಲ್ಲೋ ಭೇಟಿ ನೀಡಬೇಕೆಂಬ ಸಂಪ್ರದಾಯವಿದೆ. ಕನಿಷ್ಠ ಪಕ್ಷ ಮೂರು ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಬಲಗಾಲು ಇಟ್ಟುಕೊಂಡು ಏಕೋಭಾವದಿಂದ ಧನಾತ್ಮಕಚಿಂತನೆಯಿಂದ ದೇವಾಲಯವನ್ನು ಪ್ರವೇಶಿಸಿ, ಮನಸೋ ಇಚ್ಚೆ ದೇವರ ದರ್ಶನ ಮಾಡಿ ಭಕ್ತಿಯಿಂದ ದೇವರನ್ನು ಸ್ತುತಿಸಿ, ಮಂಗಳಾರತಿ, ತೀರ್ಥ ಪ್ರಸಾದವನ್ನು ಸ್ವೀಕರಿಸಿ ದೇವಸ್ಥಾನದ ಹೊರೆಗೆ ಬಂದು ಗರುಡಗಂಭದ ಹಿಂದೆ ಮತ್ತೊಮ್ಮೆ ದೀರ್ಘದಂಡ ಪ್ರಣಾಮಗಳನ್ನು ಸಲ್ಲಿಸಿ, ಕೆಲ ಕಾಲ ದೇವಸ್ಥಾನದಲ್ಲಿಯೇ ಕುಳಿತುಕೊಂಡು ನಂತರವೇ ತಮ್ಮ ತಮ್ಮ ಮನೆಗಳಿಗೆ ಹೊಗುವ ಸಂಪ್ರದಾಯವಿದೆ.

ಸಾಧಾರಣವಾಗಿ ಬಹುತೇಕ ದೇವಸ್ಥಾನಗಳ ನಿರ್ಮಾಣವಾಗಲು, ಆ ಸ್ಥಳ ಪುರಾಣವೋ, ಪೌರಾಣಿಕ ಹಿನ್ನಲೆಯೋ ಇಲ್ಲವೇ ಐತಿಹಾಸಿಕ ಘಟನೆಗಳು ಕಾರಣವಾಗಿರುತ್ತದೆ. ಹಾಗಾಗಿ, ಪ್ರತಿಯೊಬ್ಬ ವ್ಯಕ್ತಿಯೂ ಅಂತಹ ದೇವಸ್ಥಾನಗಳಿಗೆ ಭೇಟಿ ನೀಡುವ ಮುಖಾಂತರ ಆ ಎಲ್ಲಾ ವಿಷಯಗಳನ್ನು ಮತ್ತೊಮ್ಮೆ ಮನನ ಮಾಡಿಕೊಂಡು ಮನಕ್ಕೆ ಶಾಂತಿ ಸಿಗಲಿ ಮತ್ತು ಮನಸ್ಸಿನ ದ್ವಂದ್ವಗಳ ಪರಿಹಾರಕ್ಕಾಗಿ ಹೋಗುತ್ತಾರೆ. ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಸಿಗುತ್ತದೆ. ದೇವಾಲಯದಲ್ಲಿ ಪೂಜೆ ನಡೆಯುವಾಗ ತಮ್ಮ ಮನಸ್ಸಿನಲ್ಲಿ ಇರಬಹುದಾದ ಎಲ್ಲಾ ತಳಮಳಗಳನ್ನು ಬಿಟ್ಟು ಮೆದುಳಿನಲ್ಲಿ ಬರಬಹುದಾದ ಎಲ್ಲಾ ಯೋಚನೆಗಳನ್ನು ಬದಿಗೊತ್ತಿ,

ಒಮ್ಮನಸ್ಸಿನಿಂದ ದೇವರ ಅಭಿಷೇಕ ಪೂಜೆಗಳಲ್ಲಿ ಪಾಲ್ಗೊಳ್ಳುವುದರಿಂದ ಹಾಗೆಯೇ ದೇವರ ದರ್ಶನ ಮಾಡುವುದರಿಂದ ಬಹಳಷ್ಟು ಏಕಾಗ್ರತೆ ದೊರೆತು ಮನಸ್ಸಿಗೆ ಒಂದು ರೀತಿಯ ಧನ್ಯತಾಭಾವ ಮೂಡಿದರೆ, ದೇಹಕ್ಕೆ ವಿಶ್ರಾಂತಿ ದೊರೆತ ಹಿತಾನುಭವವಾಗುತ್ತದೆ ಎನ್ನುವುದು ಭಕ್ತರ ನಂಬಿಕೆ. ಬಹುತೇಕ ಹೆಚ್ಚಿನ ದೇಗುಲಗಳಲ್ಲಿ ಮಾಂಸಾಹಾರ ನಿಷಿದ್ಧವಾಗಿದೆ. ಸಾಮಾನ್ಯವಾಗಿ ಮಾಂಸಾಹಾರ ತಿಂದರೂ, ತಿನ್ನದಿದ್ದರೂ ದೇಗುಲಕ್ಕೆ ಹೋಗುವಾಗ ಸ್ನಾನ ಮಾಡಿಯೇ ಹೋಗುವುದು ಸಂಪ್ರದಾಯ.

ಅಲ್ಲದೇ ದೇವಸ್ಥಾನಕ್ಕೆ ಅಂತಲ್ಲದಿದ್ದರೂ ಎಲ್ಲಿಯಾದರೂ ಹೋಗುವಾಗ ವೈಯಕ್ತಿಕ ಸ್ವಚ್ಛತೆಗೆ ನಾವು ಆದ್ಯತೆ ನೀಡುತ್ತೇವೆ. ಹೀಗಾಗಿ ದೇವಸ್ಥಾನಕ್ಕೆ ಹೋಗುವಾಗಲೂ ಸ್ನಾನ ಮಾಡಿ, ಶುಚಿಯಾಗಿ ಹೋಗುವುದು ವಾಡಿಕೆ. ಇನ್ನು ಮಾಂಸಾಹಾರ ತಿಂದು ಕೊಂಡು ಹೋಗಬಹುದು ಎನ್ನುವು ಜನರು ಬೇಡರ ಕಣ್ಣಪ್ಪ ಶಿವನಿಗೆ ಮಾಂಸಕೊಟ್ಟಿಲ್ಲವಾ ಅಂತ ಪ್ರಶ್ನಿಸುತ್ತಾರೆ. ಕೆಲ ದೇವರಿಗೆ ಮಾಂಸ, ಮದ್ಯ ನೈವೇದ್ಯ ಮಾಡುತ್ತಾರಲ್ಲಾ ಅಂತ ಉದಾಹರಣೆ ನೀಡುತ್ತಾರೆ. ಆದರೆ ಬೇಡರ ಕಣ್ಣಪ್ಪ ಮುಗ್ಧತೆಯಿಂದ ಮಾಂಸ ಕೊಡುತ್ತಿದ್ದ ಎನ್ನುವುದು ಇಲ್ಲಿ ಗಮನಿಸಬೇಕು.

ಇನ್ನು ಧರ್ಮಸ್ಥಳಧಲ್ಲಿ ಇರುವ ನಿಯಮವೇ ಬೇರೆ, ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಇರುವ ನಿಯಮವೇ ಬೇರೆ, ಸಿದ್ಧಗಂಗಾ ಮಠದಲ್ಲಿ ಇರುವ ನಿಯಮವೇ ಬೇರೆ ಬೇರೆಯಾಗಿರುತ್ತದೆ. ಕೆಲವು ದೇಗುಲಗಳಲ್ಲಿ ವಸ್ತ್ರಸಂಹಿತೆಯೂ ಇರುತ್ತದೆ. ಹೀಗಾದಾಗಾ ಅಲ್ಲಿಗೆ ಹೋದಾಗ ಆಯಾ ದೇಗುಲ ಅಥವಾ ಮಠದ ನಿಯಮಗಳನ್ನೇ ಅನುಸರಿಸಬೇಕು. ಅಲ್ಲಿಯ ರೂಲ್ಸ್ ನಾವು ಫಾಲೋ ಮಾಡೋದಿಲ್ಲ ಅಂತಾದರೆ ಅಲ್ಲಿಗೆ ಹೋಗದಿರುವುದೇ ಉತ್ತಮವಲ್ಲವೇ.

Leave A Reply

Your email address will not be published.