ಶ್ರೀ ಕ್ಷೇತ್ರ ಧರ್ಮಸ್ಥಳ ಪುಣ್ಯ ಕ್ಷೇತ್ರ ಹುಟ್ಟಿಕೊಂಡಿದ್ದು ಹೇಗೆ? ಓದಿ ರೋಚಕ ಸ್ಟೋರಿ
ಧರ್ಮಸ್ಥಳ ಒಂದು ದಕ್ಷಿಣ ಕನ್ನಡದ ಪುಣ್ಯಕ್ಷೇತ್ರ. ಶ್ರೀ ಮಂಜುನಾಥ ದೇವಾಲಯ ಇರುವ ಪುಣ್ಯ ಭೂಮಿ. ಹರಸಿಕೊಂಡ ಎಷ್ಟೋ ಭಕ್ತರ ಇಷ್ಟಾರ್ಥ ಸಿದ್ಧಿ ಮಾಡಿಕೊಟ್ಟ ಗರಿಮೆ ಧರ್ಮಸ್ಥಳದ್ದು. ಶ್ರೀ ಮಂಜುನಾಥ ಸ್ವಾಮಿಯ ದೇಗುಲ ಬಿಟ್ಟು ಇನ್ನೂ ಅನೇಕ ದೇವಾಲಯಗಳನ್ನು ಹೊಂದಿದೆ. ಶ್ರವಣ ಬೇಳಗೋಳದಿಂದ ಬಾಹುಬಲಿ ಪ್ರತಿಮೆಯನ್ನು ಹೊಂದಿರುವ ಊರು. ಭಕ್ತ ಜನರ ಸಾಲು ಸಾಲುಗಳು ನೆರೆಯುವ ಪುಣ್ಯ ಕ್ಷೇತ್ರಗಳಲ್ಲಿ ಧರ್ಮಸ್ಥಳವು ಒಂದು. ಡಾಕ್ಟರ್. ವೀರೇಂದ್ರ ಹೆಗ್ಗಡೆಯವರ ನೇತ್ರತ್ವದಲ್ಲಿ ತನ್ನ ಪರಂಪರೆಯನ್ನು ಬಿಡದೆ ಪ್ರಸಿದ್ಧಿ ಪಡೆದಿದೆ. ಈ ಧರ್ಮಸ್ಥಳದ ಬಗ್ಗೆಯೂ ಕೆಲವು ಹಿನ್ನೆಲೆ ಕಥೆಗಳಿವೆ. ಅವುಗಳಲ್ಲಿ ಒಂದನ್ನು ಇಲ್ಲಿ ವಿವರಿಸಲಾಗಿದೆ. ಅದೇನೆಂದರೆ ಈ ಧರ್ಮಸ್ಥಳ ಕ್ಷೇತ್ರಕ್ಕೆ ಏಳು ನೂರು ವರ್ಷಗಳ ಇತಿಹಾಸವಿದೆ. ನೇತ್ರಾವತಿ ದಡದಲ್ಲಿ ಆರಾಧ್ಯ ದೈವವಾಗಿ ಶ್ರೀ ಮಂಜುನಾಥನ ನಂಬಿದ ಊರು ಧರ್ಮಸ್ಥಳ.
ಇಲ್ಲಿ ಶ್ರೀ ಮಂಜುನಾಥ ದೇವರು ಬಂದು ನೆಲೆಸಿರುವುದಕ್ಕೆ ಒಂದು ಕಥೆಯಿದೆ. ಗುಡುಮಾ ಎಂಬುದು ಧರ್ಮಸ್ಥಳದ ಹಿಂದಿನ ಹೆಸರು. ಭೀಮಣ್ಣ ಪರ್ಗಡೆ ಹಾಗೂ ಅಮ್ಮೂ ಬಲ್ಲಾಳಿ ಎನ್ನುವ ದಂಪತಿ ಇಲ್ಲಿನ ನೆಲಾಡಿ ಬೀದಿಯಲ್ಲಿ ವಾಸವಾಗಿದ್ದರು. ಈ ದಂಪತಿಗಳು ಅಪಾರ ದೈವ ಭಕ್ತಿ ಹೊಂದಿದ್ದರು. ಒಂದು ದಿನ ಇದರ ಮನೆಗೆ ನಾಲ್ಕು ಜನ ಅತಿಥಿಗಳು ಆಗಮಿಸುತ್ತಾರೆ. ಬಂದವರಿಗೆ ತುಂಬಾ ಚೆನ್ನಾಗಿ ಅತಿಥಿ ಸತ್ಕಾರ ಮಾಡುತ್ತಾರೆ ಈ ದಂಪತಿಗಳು. ಅವರು ಬಂದ ದಿನ ಒಂದು ಪವಾಡ ನಡೆಯುತ್ತದೆ. ಭೀಮಣ್ಣ ಪರ್ಗಡೆಯವರ ಕನಸಿನಲ್ಲಿ ಆ ನಾಲ್ಕು ಜನರು ಧರ್ಮ ದೇವತೆಗಳ ರೂಪದಲ್ಲಿ ಕಾಣಿಸಿಕೊಂಡು ಅವರೆಲ್ಲರೂ ಅದೆ ಮನೆಯಲ್ಲಿ ನೆಲೆಸುವ ಆಸೆ ವ್ಯಕ್ತಪಡಿಸಿತ್ತಾರೆ. ಇದನ್ನು ಅರಿತ ಭೀಮಣ್ಣ ದಂಪತಿ ಆ ಮನೆಯನ್ನು ಖಾಲಿ ಮಾಡಿ ಈ ನಾಲ್ಕು ಜನರಿಗೆ ಬಿಟ್ಟು ಕೊಡುತ್ತಾರೆ. ಅಂದಿನಿಂದ ಕಾಳಿರಾವು ಮತ್ತು ಕುಮಾರಸ್ವಾಮಿ ಎಂಬ ಪುರುಷ ದೈವ, ಕಲರ್ಕೈ ಹಾಗೂ ಕನ್ಯಾಕುಮಾರಿ ಎಂಬ ಎರಡು ಸ್ತ್ರೀ ದೈವಗಳು ಈ ಮನೆಯಲ್ಲಿ ನೆಲೆ ನಿಂತವಂತೆ. ಅಲ್ಲೊಂದು ಗುಡಿ ಕಟ್ಟಿಸಿದ ಭೀಮಣ್ಣ ಪೂಜಾರಿಯನ್ನು ನಿತ್ಯ ಪೂಜೆಗೆ ನೇಮಕ ಮಾಡಿದ್ದರು. ಇವೆಲ್ಲ ಘಟನೆಗಳ ನಂತರ ಒಬ್ಬ ಶಿವ ಯೋಗಿಗಳು ಅಲ್ಲಿ ಒಂದು ಶಿವನ ಲಿಂಗ ಪ್ರತಿಷ್ಟಾಪನೆ ಮಾಡುವಂತೆ ಸಲಹೆ ನೀಡಿದರು. ಧರ್ಮ ದೇವತೆಗಳು ಇದನ್ನೇ ಹೇಳಿದವು.
ಇವರೆಲ್ಲರ ಮಾತು ಕೇಳಿ ಭೀಮಣ್ಣ ಕದ್ರಿಯಲ್ಲಿರುವ ಶಿವಲಿಂಗ ತರಲು ತನ್ನ ಪ್ರತಿನಿಧಿಯಾಗಿ ಅಣ್ಣಪ್ಪ ಸ್ವಾಮಿಯನ್ನು ಕಳುಹಿಸುತ್ತಾನೆ. ಶಿವಲಿಂಗ ಅಣ್ಣಪ್ಪ ಸ್ವಾಮಿಯ ಮೂಲಕ ಬರುವುದರ ಒಳಗೆ ಕುರ್ಡಮದಲ್ಲಿ ಪವಾಡ ನಡೆದುಹೋಗಿತ್ತು. ಅಲ್ಲಿ ಮೊದಲೇ ನೆಲೆಸಿದ್ದ ಧರ್ಮ ದೇವತೆಗಳು ಮಂಜುನಾಥನಿಗಾಗಿ ದೇವಾಲಯವನ್ನು ಸೃಷ್ಟಿ ಮಾಡಿದ್ದರು. ಇದು ಧರ್ಮಸ್ಥಳ ಮಂಜುನಾಥೇಶ್ವರ ನೆಲೆಸಿದ ಕಥೆಯಾಗಿದೆ. ಈಗ ವಿದ್ಯಾದಾನ, ಅಭಯದಾನ ಹಾಗೂ ಆರೋಗ್ಯದಾನಗಳಂತಹ ಚತುರ್ದಾನಗಳ ಮೂಲಕ ಸೇವೆ ಸಲ್ಲಿಸುತ್ತಿದೆ. ಇವೆಲ್ಲವೂ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ. ಎಲ್ಲರೂ ತಂದೆ ಸ್ಥಾನದಲ್ಲಿಟ್ಟು ಪೂಜಿಸುವ ವೀರೇಂದ್ರ ಹೆಗ್ಗಡೆಯವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿ ಧರ್ಮಸ್ಥಳದ ಸೇವೆಗೆ ನಿಂತವರು. ಇವರ ಹಿರಿಯರು ಕೂಡ ಧರ್ಮಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ.
ಈ ಕ್ಷೇತ್ರ ಸಾಂಸ್ಕೃತಿಕವಾಗಿ ದಾನಧರ್ಮಗಳ ಜೊತೆಗೆ ಸಂಸ್ಕಾರ ತಿಳಿಸುತ್ತಿದ್ದು ನಮ್ಮ ಪರಂಪರೆಯಾದ ಯಕ್ಷಗಾನ ಚರಿತ್ರೆಯನ್ನು ಹೊಂದಿದೆ. ತಾಯಿ ನೇತ್ರಾವತಿ ನದಿಯ ಸ್ನಾನದಿಂದ ಬಹಿರಂಗ ಶುದ್ದಗೊಂಡ ಭಕ್ತರು ಮಂಜುನಾಥೇಶ್ವರನ ದರ್ಶನದಿಂದ ಅಂತರಂಗ ಶುದ್ದಿಗೊಂಡು ಮಾನಸಿಕ ನೆಮ್ಮದಿ ಕಾಣುತ್ತಾರೆ. ಮಂಜುನಾಥೇಶ್ವರನ ದರ್ಶನಕ್ಕೆ ಬರುವ ಭಕ್ತರ ಹಸಿವು ನೀಗಿಸಲು ಪ್ರತಿ ನಿತ್ಯ ಇಲ್ಲಿ ಅನ್ನದಾಸೋಹ ಏಕಕಾಲದಲ್ಲಿ ಸಹಾಸ್ರಾರು ಭಕ್ತರಿಗೆ ಕಲ್ಪಿಸಲಾಗುತ್ತದೆ. ದೇಶ ವಿದೇಶಗಳಿಂದಲೂ ಶ್ರೀ ಮಂಜುನಾಥೇಶ್ವರನ ದರ್ಶನಕ್ಕಾಗಿ ಭಕ್ತರು ಬರುತ್ತಾರೆ. ವರದಕ್ಷಿಣೆ ಹಾಗೂ ಆಡಂಬರದ ಮದುವೆಯ ಸುಧಾರಣೆಗಾಗಿ 1972 ರಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತದೆ. ಧರ್ಮಸ್ಥಳ ಸಂಸ್ಥೆಯಿಂದ ಐವತ್ತಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಪ್ರೈಮರಿ ಇಂದ ಉನ್ನತ ಶಿಕ್ಷಣದ ವರೆಗೂ ವಿದ್ಯೆಯ ಹಂಚುವಕಾರ್ಯದಲ್ಲಿ ನಿರತವಾಗಿವೆ. ಇನ್ನೂ ಅನೇಕ ಧಾರ್ಮಿಕ ಕಾರ್ಯಗಳು ಧರ್ಮಸ್ಥಳದ ವತಿಯಿಂದ ನಡೆಯುತ್ತಲೇ ಇವೆ. ಜೀವನದಲ್ಲಿ ಒಮ್ಮೆಯಾದರೂ ಧರ್ಮಸ್ಥಳ ಮಂಜುನಾಥೇಶ್ವರನನ್ನು ನೋಡಲೆಬೇಕು ಅಂತಹ ಪುಣ್ಯಕ್ಷೇತ್ರ ಇದಾಗಿದೆ.