ಶ್ರೀ ಸಿದ್ದಗಂಗಾ ಮಠ ಹಾಗೂ ನಡೆದಾಡುವ ದೇವರು ಎನಿಸಿಕೊಂಡ ಶ್ರೀಗಳ ಬಗ್ಗೆ ನಿಮಗೆ ಗೊತ್ತಿಲ್ಲದ ವಿಶೇಷ ಸಂಗತಿಗಳು
ನಮ್ಮ ಇಡೀ ಕರ್ನಾಟಕದಲ್ಲಿ ಯಾರೂ ಕೂಡ ಇವರ ಬಗ್ಗೆ ಕೆಟ್ಟದಾಗಿ ಮಾತನಾಡಲಿಲ್ಲ, ಅಗೌರವ ತೋರಿಸಿಲ್ಲ, ದ್ವೇಷಿಸಿಲ್ಲ. ಕರ್ನಾಟಕದ ಜನರು ಇವರನ್ನು ತುಂಬಾ ಗೌರವಿಸುತ್ತಾರೆ ಹಾಗೂ ಪೂಜ್ಯ ಭಾವೆನೆಯಿಂದ ನೋಡುತ್ತಾರೆ ಎಂದರೆ ಅದು ಶಿವಕುಮಾರ ಸ್ವಾಮಿಗಳು ಮಾತ್ರ. ಯಾವುದೇ ಜಾತಿಯ ಅಥವಾ ಯಾವುದೇ ಧರ್ಮದ ವ್ಯಕ್ತಿ ಆಗಿರಲಿ ಶಿವಕುಮಾರ ಸ್ವಾಮಿಗಳನ್ನ ಪೂಜ್ಯ ಭಾವನೆಯಿಂದ ನೋಡ್ತಾರೆ ಹಾಗಾಗಿ ನಾವು ಅವರನ್ನ “ನಡೆದಾಡುವ ದೇವರು” ಎಂದೇ ಕರೆಯುತ್ತೇವೆ. ಇವತ್ತು ಈ ಲೇಖನದಲ್ಲಿ ಶಿವಕುಮಾರ ಸ್ವಾಮಿಗಳ ಬಗ್ಗೆ, ಮಠದ ಬಗ್ಗೆ ಹಾಗೂ ಅವರು ಹೇಳಿದ ಕೊನೆಯ ಮಾತಿನ ಬಗ್ಗೆ ತಿಳಿಸಿಕೊಡ್ತೀವಿ.
ಸುಮಾರು 90 ವರ್ಷಗಳ ಹಿಂದೆ ಸುಮಾರು 53 ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ಹಾಗೂ ಉಚಿತ ಅನ್ನದಾಸೋಹ ಮಾಡ್ತಾ ಇದ್ದ ಸಿದ್ಧಗಂಗಾ ಮಠ ಈಗ ವರ್ಷಕ್ಕೆ 10,000 ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾಭ್ಯಾಸ ಹಾಗೂ ಉಚಿತ ಅನ್ನದಾಸೋಹವನ್ನು ನೀಡುತ್ತಾ ಇದೆ. ಈ ಮಠದಲ್ಲಿ ಓದಿ ವಿದ್ಯಾವಂತರಾಗಿ ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿ ಇರುವವರ ಸಂಖ್ಯೆ ನೂರಲ್ಲ ಸಾವಿರವು ಅಲ್ಲ ಲಕ್ಷಗಟ್ಟಲೆ ಇದೆ. ಒಂದೇ ಸೂರಿನಡಿ ಸುಮಾರು 9,000 – 10,000 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಹಾಗೂ ಅನ್ನದಾಸೋಹ ನೀಡುತ್ತಿರುವುದನ್ನ ನೀವು ಬೆರೆಲ್ಲಿಯೂ ಕೇಳಿರಲು ಸಾಧ್ಯವಿಲ್ಲ. ಇಲ್ಲಿ ಹಚ್ಚಿರುವ ಒಲೆ ಇನ್ನು ಆರಿಲ್ಲ. ಇಲ್ಲಿ ಬಡಿಸುವ ಕೈಗಳು ಇನ್ನೂ ಕೂಡಾ ತಣಿದಿಲ್ಲ. ಇಲ್ಲಿ 14 ಪ್ರಾಥಮಿಕ ಶಾಲೆಗಳು, 55 ಪ್ರೌಢ ಶಾಲೆಗಳು, 20 ಸಂಸ್ಕೃತ ಪಾಠಶಾಲೆಗಳು, ಎಂಜಿನಿಯರಿಂಗ್, ಪಾಲಿಟೆಕ್ನಿಕ್ ಫಾರ್ಮಸಿ ಕಾಲೇಜುಗಳವರೆಗೆ ಒಂದಲ್ಲ ಎರಡಲ್ಲ… ಮಠದ ವತಿಯುಂದ ಹೀಗೆ 123 ವಿದ್ಯಾ ಸಂಸ್ಥೆಗಳು ನಾಡಿನಾದ್ಯಂತ ಶಿಕ್ಷಣದ ಬೆಳಕನ್ನು ಹರಡುತ್ತ ಇದೆ. ನಮಿಸುವ ಕೈಗಳಿಗಿಂತ ದುಡಿಯುವ ಕೈಗಳು ಶ್ರೇಷ್ಠ ಅನ್ನೋದನ್ನ ಈ ಮಠ ಕಲಿಸಿಕೊಡ್ತಾ ಇದೆ. ಈಗಿನ ಹಾಗೆ ದೊಡ್ಡ ದೊಡ್ಡ ಕಟ್ಟಡಗಳು, ನಿರಂತರ ಆದಾಯ, ಭಕ್ತರು ಕೊಡುವ ರಾಶಿ ಕಾಣಿಕೆಗಳು ಯಾವುದೂ ಇಲ್ಲದ ಸಮಯದಲ್ಲಿ ಕೂಡಾ ವಿದ್ಯಾರ್ಥಿಗಳಿಗೆ ಉಚಿತ ಊಟ ಮತ್ತು ವಿದ್ಯೆಯನ್ನು ಈ ಮಠ ನೀಡುತ್ತಾ ಬಂದಿದೆ.
ಈ ಮಠ ಹುಟ್ಟಿನಿಂದಲೂ ಶ್ರೀಮಂತ ಎನೂ ಅಲ್ಲ ಹಾಗೆ ಇದಕ್ಕೆ ಸಾವಿರಾರು ಎಕರೆ ಆಸ್ತಿ ಪಾಸ್ತಿಯೂ ಇರಲಿಲ್ಲ. ಈ ಮಠದ ಪರಂಪರೆಯಲ್ಲಿ ಭಿಕ್ಷೆ ಆದಾಯದ ಮೂಲ ಆಗಿತ್ತು. ಈಗ ಕಾಣುವ ಕಟ್ಟಡಗಳ ಸಮುಚ್ಚಯ ಆಗ ಇರಲಿಲ್ಲ. ಸೌಲಭ್ಯಗಳಂತೂ ಮೊದಲೇ ಇರಲಿಲ್ಲ. ಜನರಲ್ಲಿ ಬಡತನ , ಅನಕ್ಷರತೆ, ಮೌಢ್ಯ ತುಂಬಿ ತುಳುಕುತ್ತ ಇದ್ದ ಕಾಲ ಅದು. ಸುಮಾರು 90 ವರ್ಷಗಳ ಹಿಂದೆ ಮಠದ ಅಧ್ಯಕ್ಷರಾಗಿದ್ದ ಉತ್ಥಾನ ಶಿವ ಯೋಗಿಗಳು ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಅನ್ನದಾಸೋಹ ಪದ್ಧತಿಯನ್ನು ಆರಂಭಿಸುತ್ತಾರೆ. ಆಗ ಮೊದಲ ವರ್ಷದಲ್ಲಿ 53 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಆಗಷ್ಟೇ ತುಮಕೂರಿನ ಹೈಸ್ಕೂಲಿನಲ್ಲಿ ಪ್ರವೇಶ ಪಡೆದಿದ್ದ ಬಾಲಕನೊಬ್ಬ ಮಠದಲ್ಲಿ ತಂಗಲು ಜಾಗ ಕೇಳಿದ್ದ. ಯಾಕಂದ್ರೆ ಆಗಿನ ಕಾಲದಲ್ಲಿ ತಾನೇ ಇನ್ನೊಂದು ರೂಮು ಮಾಡಿಕೊಂಡು ಅಡುಗೆಯನ್ನೂ ಮಾಡಿಕೊಂಡು ಶಿಕ್ಷಣ ಮುಂದುವರಿಸುವುದು ಕಷ್ಟ ಆಗಿತ್ತು. ಆದರೆ ಆತನಿಗೆ ಒಮ್ಮೆಲೇ ಪ್ರವೇಶ ದೊರೆಯಲಿಲ್ಲ. ಸುಮಾರು 4 ತಿಂಗಳ ಸತತ ಪ್ರಯತ್ನದ ನಂತರ ಮಠದಲ್ಲಿ ಉಳಿಯಲು ಜಾಗ ಸಿಗತ್ತೆ. ಆ ರೀತಿ ಪ್ರವೇಶ ಪಡೆದುಕೊಂಡ ವಿದ್ಯಾರ್ಥಿಯೇ ಶಿವಕುಮಾರ ಸ್ವಾಮಿಗಳು.
ಆನಂತರ ವಿದ್ಯಾಭ್ಯಾಸ ಮುಗಿಸಿದ ಶಿವಕುಮಾರ ಸ್ವಾಮೀಜಿಗಳು ಓಂದೊಳ್ಳೆ ಉದ್ದೇಶವನ್ನ ಇಟ್ಟುಕೊಂಡು ತುಮಕೂರಿನಿಂದ ಬೆಂಗಳೂರಿಗೆ ಬಂದಿರುತ್ತಾರೆ. ಅಷ್ಟರಲ್ಲಿ ಆಗಲೇ ಅವರು ಮಠದಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಇರುತ್ತಾರೆ. ಬೆಂಗಳೂರಿಗೆ ಬಂದು ಮೂರು ವರ್ಷಗಳಲ್ಲಿ ಅವರಿಗೆ ಒಂದು ಆಘಾತ ಕಾದಿರತ್ತೆ. ಮಠದ ಉತ್ತರಾಧಿಕಾರಿ ಆಗಿದ್ದ ಮುರುಗ ಸಿದ್ಧ ಆರಾದ್ಯರು ಲಿಂಗೈಕ್ಯರಾಗಿರುತ್ತಾರೆ. ಇದು ನಡೆದಿದ್ದು 1930 ಜನವರಿ 16ನೆ ತಾರೀಕು. ಶಿವಕುಮಾರ ಸ್ವಾಮೀಜಿ ಅವರಿಗೆ ಮುರುಗರು ಒಳ್ಳೆಯ ಗುರು, ಉತ್ತಮ ಮಾರ್ಗದರ್ಶಕ ಹಾಗೂ ಸ್ನೇಹಿತರು ಆಗಿದ್ದರು. ತುಮಕೂರಿನಲ್ಲಿ ಹೈಸ್ಕೂಲ್ ಮುಗಿಸಿ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಓದುತ್ತಾ ಇದ್ದಾಗಲೂ ಸಹ ಮುರುಗರು ಶಿವಕುಮಾರ ಸ್ವಾಮೀಜಿಗಳ ಜೊತೆ ಸದಾ ಸಂಪರ್ಕದಲ್ಲಿ ಇರುತ್ತ ಇದ್ದರು.
ಇತ್ತ ಎಲ್ಲರೂ ಮುಂದಿನ ಮಠಾಧ್ಯಕ್ಷರು ಯಾರು? ಅನ್ನುವ ಚಿಂತೆಯಲ್ಲಿ ಇರುತ್ತಾರೆ. ಆಗ ಜನರ ಅಭಿಪ್ರಾಯ ಸಂಗ್ರಹ ಮಾಡಿ ಎಲ್ಲರ ಅಭಿಪ್ರಾಯವೂ ಅದೇ ಮಠದಲ್ಲಿ ವಿದ್ಯಾಭ್ಯಾಸ ಮುಗಿಸಿದ ಅದೇ ಶಿವಕುಮಾರ ಸ್ವಾಮೀಜಿಗಳ ಹೆಸರು. ಉತ್ಥಾನ ಶಿವ ಯೋಗಿಗಳೂ ಕೂಡಾ ನೀನೇ ಈ ಮಠದ ಮುಂದಿನ ಉತ್ತರಾಧಿಕಾರಿ ಆಗು ಎಂದು ಸನ್ಯಾಸತ್ವ ಸ್ವೀಕರಿಸಲು ಹೇಳುತ್ತಾರೆ. ಸಾಮಾನ್ಯವಾಗಿ ಮಠದ ಉತ್ತರಾಧಿಕಾರಿಯನ್ನು ನೇಮಿಸುವಾಗ ಅವರ ಜಾತಕ ಹಾಗೂ ಅವರ ಮನೆಯವರ ಒಪ್ಪಿಗೆ ಎಲ್ಲವನ್ನೂ ನೋಡಲಾಗುತ್ತೆ ನಂತರ ಸನ್ಯಾಸ ಧೀಕ್ಷೆಯನ್ನ ಕೊಡಲಾಗತ್ತೆ. ಆದರೆ ಆಗ ಅದ್ಯಾವುದೂ ನಡೆಯದೆ ತನ್ನಷ್ಟಕ್ಕೇ ತಾನೇ ಎಲ್ಲವೂ ನಡೆಯುತ್ತೆ.
ವೀರಪುರದ ಶಿವಣ್ಣನ ಮನೆಯಲ್ಲಿ ಕೋಲಾಹಲ ಉಂಟಾಗತ್ತೆ. ಮಗ ಪದವಿ ಮುಗಿಸಿ ಕೆಲಸ ಒ ಪಡೆಯುತ್ತಾನೆ ಆಮೇಲೆ ಮದುವೆ ಮಾಡಬಹುದು ಎಂದು ತಂದೆ ತಾಯಿ ಕನಸು ಕಂಡಿದ್ದರು. ಎಕಾ ಏಕೀ ಎಲ್ಲವೂ ಭಗ್ನ ಆದಾಗ ಆ ಹೆತ್ತ ಹೃದಯಗಳು ಮರುಗಿದ್ದವು. ಸ್ವಾಮೀಜಿ ಅವರ ಮನಸ್ಸನ್ನು ಅವರ ತಂಫೆ ಎಷ್ಟೇ ತಿರುಗಿಸಲು ಪ್ರಯತ್ನಿಸಿದರೂ ವಿಫಲರಾದರು. ಈ ರೀತಿ ಯಾವುದೇ ಪೂರ್ವ ತಯಾರಿ ಇಲ್ಲದೆ ಉತ್ತರಾಧಿಕಾರಿ ಆದವರು ಶ್ರೀ ಶಿವಕುಮಾರ ಸ್ವಾಮೀಜಿಗಳು. ಹಾಗೆ ಶಿವಕುಮಾರ ಸ್ವಾಮೀಜಿಗಳು ನಿಯಮ ನಿಷ್ಠೆಯಿಂದ ಮಠವನ್ನು ಪಾಲನೆ ಮಾಡ್ತಾ ಬಂದರು. ಯಾವತ್ತಿಗೂ ಪೂಜಾ ಪುನಸ್ಕಾರಗಳನ್ನು ತಪ್ಪಿದವರಲ್ಲ. ಅನಾರೋಗ್ಯದ ಸಂದರ್ಭದಲ್ಲಿಯೂ ಕೂಡಾ ಅವರು ಶಿವ ಪೂಜೆಯನ್ನು ಬಿಡಲಿಲ್ಲ. ಹೆಚ್ಚಿನದಾಗಿ ಅವರಿಗೆ ಮಠದ ವಿದ್ಯಾರ್ಥಿಗಳ ಮೇಲೆ ಎಷ್ಟು ಪ್ರೀತಿ ಇತ್ತು ಎಂದರೆ, ನಾನು ಯಾವಾಗ ಸತ್ತರೂ ಸರಿ ಮಕ್ಕಳು ಮಧ್ಯಾನ್ಹದ ದಾಸೋಹವನ್ನು ಸ್ವೀಕರಿಸಿದ ನಂತರವೇ ವಿಷಯ ತಿಳಿಸಬೇಕು ಎಂದು ಹೇಳಿದ್ದರಂತೆ. ಅದಕ್ಕಾಗಿಯೇ ಶ್ರೀ ಶಿವಕುಮಾರ ಸ್ವಾಮೀಜಿಗಳು 11:44 ಕ್ಕೆ ನಿಧಾನರಾಗಿದ್ದರೂ ಸಹ ಮಧ್ಯಾನ್ಹದ ವರೆಗೂ ವಿಷಯ ತಿಳಿಸದೆ, ಮಕ್ಕಳು ಮಧ್ಯಾನ್ಹದ ದಾಸೋಹವನ್ನು ಸ್ವೀಕರಿಸಿದ ನಂತರವೇ ಸ್ವಾಮಿಗಳು ಶಿವೈಕ್ಯರಾದ ವಿಷಯವನ್ನ ತಿಳಿಸುತ್ತಾರೆ.
ನಿಜಕ್ಕೂ ಈ ಮಹಾನ್ ಪುರುಷರು ಸಾವಿನಲ್ಲೂ ಕೂಡಾ ಯಾರೂ ಹಸಿದುಕೊಂಡು ಇರಬಾರದು ಎಂದು ಬಯಸುವುದು ಇದು ಅವರ ದೊಡ್ಡ ಗುಣವೇ ಸರಿ. ಇಂತಹ ಮಹಾನ್ ವ್ಯಕ್ತಿ ನಮ್ಮನ್ನೆಲ್ಲ ಅಗಲಿರುವುದು ಕರ್ನಾಟಕಕ್ಕೆ ತುಂಬಲಾಗದ ನಷ್ಟವೇ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಮತ್ತೆ ನಮ್ಮ ರಾಜ್ಯದಲ್ಲಿಯೇ ಹುಟ್ಟಿ ಬರಲಿ ಎಂದು ನಾವೆಲ್ಲರೂ ಪ್ರಾರ್ಥಿಸಿಕೊಳ್ಳೋಣ.