ಕರುನಾಡ ಅಪ್ಪು ಕಣ್ಮರೆಯಾಗಿದ್ದಾರೆ. ಕೋಟ್ಯಂತರ ಅಭಿಮಾನಿಗಳಲ್ಲಿ ದುಃಖ ಮಡುಗಟ್ಟಿದೆ . ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನುವುದಕ್ಕಿಂದ ತಂದೆ ರಾಜ್ ಕುಮಾರ್, ತಾಯಿ ಪಾರ್ವತಮ್ಮರನ್ನು ಪುತ್ರ ಸೇರಿಕೊಂಡಿದ್ದಾರೆ ಅಂತ ಹೇಳುವುದೇ ಸಮಂಜಸ ಎನಿಸಿಕೊಳ್ಳುತ್ತದೆ. ಮಾನವತೆಯ ಪಡಿಯಚ್ಚಿನಂತೆ ಬದುಕಿನುದ್ದಕ್ಕೂ ಜೀವಿಸಿದ ನಟ ಪುನೀತ್ ರಾಜಕುಮಾರ್ ಇನ್ನೂ ನೆನಪು ಮಾತ್ರ.

ಹಠಾತ್ ನಿಧನರಾಗಿ ಕರುನಾಡನ್ನು ದುಃಖದಲ್ಲಿ ಮುಳುಗಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಕರ್ನಾಟಕ ರತ್ನಕ್ಕೆ ಭಾಜನರಾದ 10 ನೇ ವ್ಯಕ್ತಿ. ಅಲ್ಲದೆ, ಮರಣೋತ್ತರವಾಗಿ ಪ್ರಶಸ್ತಿಗೆ ಪಾತ್ರರಾಗುತ್ತಿರುವ ಮೊದಲ ವ್ಯಕ್ತಿ ಕೂಡಾ ಹೌದು. ಕರ್ನಾಟಕ ರತ್ನ ‘ಪ್ರಶಸ್ತಿಯನ್ನು ಈವರೆಗೆ ಒಂಬತ್ತು ಗಣ್ಯರಿಗೆ ನೀಡಲಾಗಿದೆ. ಕಡೆಯ ಬಾರಿಗೆ 2009 ರಲ್ಲಿ ಈ ಪ್ರಶಸ್ತಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ನೀಡಲಾಗಿತ್ತು . ಇದಾಗಿ 11 ವರ್ಷದ ನಂತರ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ.

ಅರ್ಥಪೂರ್ಣವಾಗಿ ಬದುಕಿ ನಾಡಿಗೆ ಅಪಾರ ಕೊಡುಗೆ ನೀಡಿದ ನಟ ಪುನೀತ್‌ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಿಸಿದ ರಾಜ್ಯ ಸರ್ಕಾರವನ್ನು ಹರಿಹರ ಪಂಚಮಸಾಲಿ ಪೀಠದ ಶ್ವಾಸಗುರು ವಚನಾನಂದ ಸ್ವಾಮೀಜಿ ಅಭಿನಂದಿಸಿದ್ದಾರೆ. ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಏರ್ಪಡಿಸಿದ್ದ ಪುನಿತ್ ನಮನ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ‘ ಕರ್ನಾಟಕ ರತ್ನ ‘ ಪ್ರಶಸ್ತಿ ನೀಡಲು ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ಧಾರ ಸ್ವಾಗತಾರ್ಹ ಎಂದರು . ಮನುಷ್ಯ ಎಷ್ಟು ಕಾಲ ಬದುಕುತ್ತಾನೆ ಎಂಬುದು ಮುಖ್ಯವಲ್ಲ . ಎಷ್ಟು ಅರ್ಥಪೂರ್ಣವಾಗಿ ಮತ್ತು ಮನುಷ್ಯರಾಗಿ ಬದುಕಿದ್ದೆವು ಎಂಬುದು ಮುಖ್ಯ . ಹೀಗೆ ಆದರ್ಶಪಾಯವಾಗಿ ಜೀವಿಸಿ ಅಲ್ಪ ಸಮಯದಲ್ಲೇ ಸಮಾಜಕ್ಕೆ ಅಪಾರ ಕೊಡುಗೆ ನೀಡಿ ಮರೆಯಾದವರು ನಟ ಪುನೀತ್ ರಾಜಕುಮಾರ್. ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗದಂತೆ ಮಾಡಿದ ಸಮಾಜಮುಖಿ ಕಾರ್ಯಗಳು ಎಲ್ಲವೂ ಪುನೀತ್ ಅವರ ಮರಣಾನಂತರ ಗೊತ್ತಾಗುತ್ತಿವೆ . ಅಂತಹ ಮಹಾನ್ ವ್ಯಕ್ತಿಗೆ ಮರಣೋತ್ತರ ‘ ಕರ್ನಾಟಕ ರತ್ನ ‘ ಘೋಷಿಸಿ ರಾಜ್ಯ ಸರ್ಕಾರ ಗೌರವ ಸಲ್ಲಿಸಿದೆ.

ಸದ್ಯ ಎಲ್ಲೆಲ್ಲೂ ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ‘ ಜೇಮ್ಸ್ ‘ ಚಿತ್ರದ್ದೇ ಮಾತು. ಅಪ್ಪು ಅಭಿನಯದ ಕೊನೆಯ ಸಿನಿಮಾ ಆಗಿರುವುದರಿಂದ ಈ ಚಿತ್ರದ ಮೇಲೆ ಪುನೀತ್ ಅಭಿಮಾನಿಗಳಿಗಷ್ಟೇ ಅಲ್ಲ , ಎಲ್ಲಾ ಕನ್ನಡಿಗರಿಗೂ ಪ್ರೀತಿ , ಅಭಿಮಾನ ಮತ್ತು ಸಾಕಷ್ಟು ನಿರೀಕ್ಷೆಗಳು ಇವೆ . ಇದೇ ಮಾರ್ಚ್ 17 ರಿಂದ ‘ ಜೇಮ್ಸ್ ‘ ಸಿನಿಮಾ ಜಾತ್ರೆ ಶುರುವಾಗಲಿದೆ . ಸಿನಿಮಾವನ್ನು ಅದ್ಧೂರಿಯಾಗಿ ಬರುವು ಮಾಡಿಕೊಳ್ಳಲು ಅಭಿಮಾನಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ ಈ ನಡುವೆ ಚಿತ್ರತಂಡ ‘ ಜೇಮ್ಸ್ ‘ ಪ್ರೀ – ರಿಲೀಸ್ ಇವೆಂಟ್ ಮಾಡಿಕೊಂಡಿದೆ.

ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಕೊನೆಯ ಜೇಮ್ಸ್ ಟೀಸರ್ ಪಿಆರ್‌ಕೆ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎಮೋಶನ್ಸ್ ಆರ್ ಬಿಗ್ಗರ್ ದ್ಯಾನ್ ಬ್ಯುಸಿನೆಸ್ ಅಂತ ಹೇಳಿ ಆರಂಭವಾಗುವ ಈ ಟೀಸರ್‌ನಲ್ಲಿ ಅಪ್ಪು ಹಾವ, ಭಾವ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ . ಅಪ್ಪು ಎಂಟ್ರಿಗೆ ಹಿರಿಯಣ್ಣ ಶಿವರಾಜ್‌ಕುಮಾರ್ ಧ್ವನಿ ನೀಡಲಾಗಿದೆ.

ಕಿಶೋರ್ ಪ್ರೊಡಕ್ಷನ್‌ನಲ್ಲಿ ಚೇತನ್ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪ್ರಿಯಾ ಆನಂದ್ , ಶರತ್ ಕುಮಾರ್, ಶ್ರೀಕಾಂತ್ ಮೆಹಕ್ , ಆದಿತ್ಯ ಮೆನನ್ , ಮುಕೇಶ್, ರಂಗಾಯಣ ರಘು, ಅವಿನಾಶ್, ಸಾಧು ಕೋಕಿಲಾ, ಚಿಕ್ಕಣ್ಣ, ಅನು ಪ್ರಭಾಕರ್, ಸುಚೇಂದ್ರ ಪ್ರಸಾದ್ ಮತ್ತು ಕೇತನ್ ಕರಂದ್ರೆ ನಟಿಸಿದ್ದಾರೆ. ಜೆ – ವಿಂಗ್ ಸೆಕ್ಯೂರಿಟಿ ಕಂಪನಿಯ ಮ್ಯಾನೇಜರ್ ಜೇಮ್ಸ್ ಉರ್ಫ್ ಸಂತೋಷ್ ಕುಮಾರ್ ಪಾತ್ರದ ಸುತ್ತ ನಡೆಯುವ ಕಥೆ ಇದು . ಸದಾ ಸಂತೋಷದಿಂದ ತಮ್ಮ ಸುತ್ತ ಸಂತೋಷ ಬಯಸುವ ವ್ಯಕ್ತಿ ಇದ್ದಕ್ಕಿದ್ದಂತೆ ಡಾರ್ಕ್ ಮಾರ್ಕೆಟ್ ಪ್ರವೇಶಿಸಿ , ಕ್ರೈಂ ಸಿಂಡಿಕೇಟ್‌ನಲ್ಲಿರುವ ಅತಿ ದೊಡ್ಡ ಪವರ್ ಬೋಕರ್ ಮತ್ತು ಉದ್ಯಮಿಗಳನ್ನು ಭೇಟಿ ಮಾಡುತ್ತಾನೆ . ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು ಡ್ರಾಮಾ , ಭಾವನೆ ಮತ್ತು ದೇಶ ಭಕ್ತಿಯನ್ನು ಅದ್ಭುತವಾಗಿ ಚಿತ್ರಿಸಿದಂತೆ ತೋರುತ್ತದೆ . ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಮಾಡಿದ್ದಾರೆ .

ಅಪ್ಪು ಸಿನಿಮಾ ಅಂದ್ಮಲೆ ಎನ್ನೂ ಡ್ಯಾನ್ಸ್ ಮತ್ತು ಫೈಟ್ ನೋಡಲು ತುದಿಗಾಲಿನಲ್ಲಿ ಕಾಯುತ್ತಾರೆ ಮಂದಿ . ಸ್ಟಂಟ್ ಮಾಸ್ಟರ್ ರವಿ ವರ್ಮಾ, ರಾಮ್ ಲಕ್ಷ್ಮಣ್, ಚೇತನ್ ಡಿ ಸೋಜಾ, ಅರ್ಜುನ್ ಮಾಸ್ಟರ್ ಮತ್ತು ವಿಜಯ್ ಮಾಸ್ಟರ್ ಕೈ ಚಳಕವಿದೆ . ಇನ್ನೂ ಪವರ್ ನೃತ್ಯಕ್ಕೆ ಎ.ಹರ್ಷ , ಶೇಖರ್ ಮಾಸ್ಟರ್ ಮತ್ತು ಮೋಹನ್ ಭುವನ್ ನಿರ್ದೇಶನ ಮಾಡಿದ್ದಾರೆ . ಇನ್ನೂ ಜೇಮ್ಸ್ ಸಿನಿಮಾವನ್ನು ಹೋಸಪೇಟೆ , ಗೋವಾ , ಹೈದರಾಬಾದ್ ಮತ್ತು ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ. ಕನ್ನಡ, ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಜೇಮ್ಸ್ ಸಿನಿಮಾ ಮಾರ್ಚ್ 17 ರಂದು ಬಿಡುಗಡೆ ಆಗುತ್ತಿದೆ ಬಿಡುಗಡೆ ಮಾಡಿರುವ ಟೀಸರ್‌ನಲ್ಲಿ ಸಖತ್ ಪವರ್ ಫುಲ್ ಡೈಲಾಗ್ ಇದ್ದು ಸಿನಿ ರಸಿಕರ ಗಮನ ಸೆಳೆದಿದೆ

ವಿಶ್ವದಲ್ಲಿ ಮೂರು ರೀತಿ ಮಾರ್ಕೆಟ್‌ಗಳಿವೆ. ಒಂದು ಒಪನ್ ಮಾರ್ಕೆಟ್, ಡೀಪ್ ಮಾರ್ಕೆಟ್ ಮತ್ತೊಂದು ಡಾರ್ಕ್ ಮಾರ್ಕೆಟ್ ಇದೊಂದು ವರ್ಲ್ಡ್ ಮಾಫಿಯಾ ನೂರು ಜನ ಗನ್ ಹಿಡ್ಕೊಂಡಿರುವ ವೇಸ್ಟ್ ಬಾಡಿಗಳಿಗಿಂತ ಒಬ್ಬ ಗನ್ ತರ ಇರುವ ವ್ಯಕ್ತಿಯನ್ನು ಹುಡ್ಕೊಡಿ ಎದೆ ಕೊಟ್ಟು ಕಾಪಾಡುವುದಕ್ಕೆ ಗೊತ್ತಿರಬೇಕು , ಎದುರಾಳಿ ಎದೆಗೆ ಬುಲೆಟ್ ನುಗೋಕು ಗೊತ್ತಿರಬೇಕು. ಟೀಸರ್‌ನಲ್ಲಿ ಅಪ್ಪುನ ಸಖತ್ ಕ್ಲಾಸ್ ಹಾಗೂ ಮಾಸ್ ಆಗಿ ತೋರಿಸಲಾಗಿದೆ. ಅದರಲ್ಲೂ ಮೂರು ಕುದುರೆಗಳ ಸಮಕ್ಕೆ ಅಪ್ಪು ಓಡಿರುವುದು ಎಲ್ಲರ ಗಮನ ಸೆಳೆದಿದೆ. ನನ್ನ ಜೊತೆ ಕಾಂಪೀಟ್ ಮಾಡಿರುವ ಯಾರೂ ಇದುವರೆಗೆ ಗೆದ್ದಿರುವ ರೆಕಾರ್ಡ್ ಬ್ರೇಕ್ ಮಾಡಿಲ್ಲ ಎಂದು ವಿಲನ್ ಡೈಲಾಗ್ ಹೇಳಿದಾಗ , ಶಿವರಾಜ್‌ಕುಮಾರ್ ಧ್ವನಿಯಲ್ಲಿ ನನಗೆ ಮೊದಲಿಂದಲೂ ರೆಕಾರ್ಡ್ ಬ್ರೇಕ್ ಮಾಡಿಯೇ ಅಭ್ಯಾಸ ಎಂದು ಹೇಳಿರುವುದು ಕೇಳಬಹುದು . ಆಗ ಹೆಲಿಕಾಪ್ಟರ್ ಮತ್ತು ಕಾರಗಳ ನಡುವೆ ಪುನೀತ್ ರಾಜ್‌ಕುಮಾರ್ ಸ್ಟೈಲಿಷ್ ಆಗಿ ನಡೆದುಕೊಂಡು ಬಂದಿದ್ದಾರೆ .

ಮೈಸೂರು ವಿಶ್ವವಿದ್ಯಾಲಯವು ಪುನೀತ್ ರಾಜಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇದೆಲ್ಲವೂ ಅಪ್ಪುವಿನ ಅಗಲುವಿಕೆಯ ನಡೆಯುತ್ತಿರುವುದರಿಂದ ಪ್ರತಿಯೊಬ್ಬ ಕನ್ನಡಿಗನಿಗೂ ಸಂತೋಷದ ಜೊತೆ ದುಃಖವನ್ನು ತಂದಿದೆ. ಜೇಮ್ಸ್ ಚಿತ್ರದ ಫ್ರೀ ರಿಲೀಸ್ ಈವೆಂಟ್ ಸಂದರ್ಭದಲ್ಲಿ ಅಪ್ಪುವಿನ ಅನುಪಸ್ಥಿತಿಯನ್ನು ನೆನೆದು ರಾಘಣ್ಣ ಮತ್ತು ಶಿವಣ್ಣ ಬಿಕ್ಕಿ ಬಿಕ್ಕಿ ಅತ್ತರು.

Leave a Reply

Your email address will not be published. Required fields are marked *