ಪವನ್ ಕಲ್ಯಾಣ್ ಭೇಟಿಯಾದ ಕಿಚ್ಚ ಸುದೀಪ್, ಒಟ್ಟಿಗೆ ಸಿನಿಮಾ ಮಾಡೋ ಪ್ಲಾನ್ ಇದೆಯಾ?

0 1

ಕನ್ನಡದ ಖ್ಯಾತ ನಟ ಅಭಿನಯ ಚಕ್ರವರ್ತಿ ಎಂದೇ ಬಿರುದು ಪಡೆದ ಸುದೀಪ್ ಅವರು ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತಮ್ಮ ಅಭಿನಯದ ಮೂಲಕ ಪರ ಭಾಷೆಗಳಲ್ಲಿ ಕೂಡಾ ತಮ್ಮ ನಟನೆಯ ಛಾಪು ಮೂಡಿಸಿದ್ದಾರೆ. ಇತ್ತೀಚೆಗೆ ಬಂದ ವರದಿಯ ಪ್ರಕಾರ , ಮಲಯಾಳಂನ ಸೂಪರ್‌ ಹಿಟ್ ಸಿನಿಮಾದ ರಿಮೇಕ್‌ನಲ್ಲಿ ಕಿಚ್ಚ ಸುದೀಪ್‌ ಮತ್ತು ಪವನ್ ಕಲ್ಯಾಣ್ ನಟನೆ ಮಾಡಲಿದ್ದಾರೆ . ನಟ ಸುದೀಪ್ ಅವರು ತೆಲುಗು ಚಿತ್ರರಂಗದವರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ‘ಈಗ’ ಚಿತ್ರದ ನಂತರ ಅವರಿಗೆ ಅಲ್ಲಿ ದೊಡ್ಡ ಅಭಿಮಾನಿ ಬಳಗವೆ ಸೃಷ್ಟಿಯಾಗಿದೆ. ಇದೀಗ ಅವರಿಗೆ ತೆಲುಗಿನಿಂದ ಒಂದು ಮಲ್ಟಿಸ್ಟಾರ್‌ ಸಿನಿಮಾದ ಆಫರ್ ಬಂದಿದ್ದು , ಇದರ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ನಟ ಕಿಚ್ಚ ಸುದೀಪ್ ಕನ್ನಡ ಭಾಷೆಯ ಜೊತೆಗೆ ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರರಂಗದಲ್ಲೂ ಫೇಮಸ್‌. ಅಲ್ಲೆಲ್ಲ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಆಗೊಮ್ಮೆ ಈಗೊಮ್ಮೆ ಅವರು ಪರಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಾ ಇರುತ್ತಾರೆ. ಇದೀಗ ಅವರಿಗೆ ಒಂದು ಇಂಟ್ರೆಸ್ಟಿಂಗ್ ಪ್ರಾಜೆಕ್ಟ್‌ ಸಿಕ್ಕಿದ್ದು ಕರೆ ಬಂದಿದೆ ಎಂಬ ಮಾಹಿತಿ ತಿಳಿದುಬಂದಿದೆ. ವಿಶೇಷವೆಂದರೆ ಆ ಸಿನಿಮಾದಲ್ಲಿ ತೆಲುಗು ಪವರ್ ಸ್ಟಾರ್ ಪವನ್‌ ಕಲ್ಯಾಣ್‌ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ. ಅಷ್ಟಕ್ಕೂ ಈ ಪ್ರಾಜೆಕ್ಟ್ ಯಾವುದು? ಆ ಕುರಿತ ಪೂರ್ಣ ಮಾಹಿತಿ ಇಲ್ಲಿದೆ. ಈ ವರ್ಷದ ಆರಂಭದಲ್ಲಿ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿರುವ ಮಲಯಾಳಂನ ಅಯ್ಯಪ್ಪನುಮ್ ಕೋಶಿಯುಮ್ ಚಿತ್ರವನ್ನು ತೆಲುಗಿಗೆ ರಿಮೇಕ್ ಮಾಡುವುದರ ಬಗ್ಗೆ ಸಿದ್ಧತೆಗಳು ನಡೆಯುತ್ತಿವೆ. ಬಿಜು ಮೆನನ್‌ , ಪೃಥ್ವಿರಾಜ್ ಸುಕುಮಾರನ್ ಕಾಂಬಿನೇಷನ್‌ನಲ್ಲಿ ಮೂಡಿಬಂದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸೌಂಡು ಮಾಡಿತ್ತು. ಇದೀಗ ಈ ಸಿನಿಮಾದಲ್ಲಿ ಬಿಜು ಮಾಡಿದ್ದ ಪೊಲೀಸ್ ಅಧಿಕಾರಿ ಪಾತ್ರವನ್ನು ತೆಲುಗಿನಲ್ಲಿ ಪವನ್ ಮಾಡುವ ಸಾಧ್ಯತೆಗಳಿದ್ದು, ಪೃಥ್ವಿರಾಜ್‌ ಮಾಡಿದ್ದ ಕೋಶಿ ಪಾತ್ರಕ್ಕೆ ಸುದೀಪ್‌ ಅವರನ್ನು ಆಯ್ಕೆ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ಪೊಲೀಸ್‌ ಅಧಿಕಾರಿ ಮತ್ತು ಮಾಜಿ ಸೈನಿಕನೊಬ್ಬನ ಮಧ್ಯೆ ನಡೆಯುವ ಅಹಮ್ಮಿನ ಕಥೆ ಇದಾಗಿದ್ದು, ಆ ಇಬ್ಬರು ಹೇಗೆ ಅಹಂ ಬೆಳೆಸಿಕೊಂಡು ಸಾಗುತ್ತಾರೆ? ಅವರಿಬ್ಬರ ಅಹಂನಿಂದ ಅಂತಿಮವಾಗಿ ಏನಾಗುತ್ತಿದೆ ಎಂಬುದೇ ಈ ಚಿತ್ರದ ಕಥೆಯ ಸಾರಾಂಶ ಆಗಿದೆ. ಸ್ಯಾಚಿ ಇದರ ನಿರ್ದೇಶನ ಮಾಡಿದ್ದರು. 6 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ ಬರೋಬ್ಬರಿ 60 ಕೋಟಿ ರೂಪಾಯಿ ಗಳಿಸಿ ದಾಖಲೆ ಮಾಡಿದೆ. ಕಮರ್ಷಿಯಲ್ ಸಿನಿಮಾಗಳಂತೆ, ನಾಯಕಿ ಜೊತೆ ಡ್ಯುಯೆಟ್‌, ಕಲರ್‌ಫುಲ್‌ ಡ್ಯಾನ್ಸ್ ಆಗಲಿ ಈ ಸಿನಿಮಾದಲ್ಲಿ ಇಲ್ಲ. ಅಯ್ಯಪ್ಪನುಮ್ ಕೋಶಿಯುಮ್ ರಿಮೇಕ್‌ ಹಕ್ಕುಗಳನ್ನು ಸೀತಾರಾ ಎಂಟರ್‌ಟೇನ್‌ಮೆಂಟ್‌ ಸಂಸ್ಥೆಯು ಪಡೆದುಕೊಂಡಿದ್ದು, ಸಾಗರ್‌ ಕೆ.ಚಂದ್ರ ಈ ರಿಮೇಕ್‌ಗೆ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗಿದೆ. ಕೋಶಿ ಪಾತ್ರಕ್ಕೆ ಸುದೀಪ್‌ ಜೊತೆಗೆ ರಾಣಾ ದಗ್ಗುಬಾಟಿ, ರವಿತೇಜ ಹೆಸರುಗಳು ಕೂಡ ಚಾಲ್ತಿಯಲ್ಲಿವೆ. ಅಂತಿಮವಾಗಿ ಯಾರು ಆ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಚಿತ್ರತಂಡವೇ ಅಧಿಕೃತವಾಗಿ ಹೇಳಬೇಕಿದೆ. ಸದ್ಯ ಸುದೀಪ್‌ ಫ್ಯಾಂಟಮ್‌ ಸಿನಿಮಾದಲ್ಲಿ ಬ್ಯುಸಿ ಇದ್ದರೆ, ಪವನ್ ಕಲ್ಯಾಣ್ ಅವರು ವಕೀಲ್ ಸಾಬ್‌ ಸಿನಿಮಾ ಮಾಡುತ್ತಿದ್ದಾರೆ. ಅಂದಹಾಗೆ ಕೆಲ ದಿನಗಳ ಹಿಂದಷ್ಟೇ ಸುದೀಪ್ ಮತ್ತು ಪವನ್ ಕಲ್ಯಾಣ್ ಭೇಟಿಯಾಗಿದ್ದು ಬಹುಶಃ ಇದೇ ವಿಚಾರಕ್ಕೆ ಇರಬಹುದು ಎಂಬ ಪ್ರಶ್ನೆ ಈಗ ಅಭಿಮಾನಿಗಳ ಮನದಲ್ಲಿ ಮೂಡಿದೆ.

Leave A Reply

Your email address will not be published.