ಜಗತ್ತಿನ ಪ್ರಾಚೀನ ವಿಶ್ವವಿದ್ಯಾಲಯದ ವೈಭವದ ಬಗ್ಗೆ ಹಾಗೂ ನಂತರ ವಿಶ್ವವಿದ್ಯಾಲಯ ಏನಾಯಿತು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಹಿಂದೆ ಇಡೀ ಜಗತ್ತಿನ ನಾನಾ ದೇಶಗಳ ಜನ ಭಾರತದ ವಿಶ್ವವಿದ್ಯಾಲಯಗಳಲ್ಲಿ ಒಂದು ಅವಕಾಶ ಸಿಗಲಿ ಎಂದು ಬಯಸುತ್ತಿದ್ದರು. ಕ್ರಿಸ್ತಪೂರ್ವ 12ನೇ ಶತಮಾನದಲ್ಲಿ ಆವತ್ತಿನ ಮಗಧ ಅಂದರೆ ಈಗಿನ ಬಿಹಾರದಲ್ಲಿದ್ದ ನಳಂದ ವಿಶ್ವವಿದ್ಯಾಲಯ ಸರಿಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳನ್ನು ತನ್ನ ಒಡಲಲ್ಲಿಟ್ಟುಕೊಂಡು ಜ್ಞಾನವನ್ನು ನೀಡುತಿತ್ತು ಎಂದು ಇತಿಹಾಸ ಹೇಳುತ್ತದೆ. ಮುಂದೆ ಅದನ್ನು ಮಹಾ ವಿಹಾರ ಎಂದು ಕರೆಯಲಾಯಿತು ಅಂದರೆ ಬೌದ್ಧ ಧರ್ಮದ ಜ್ಞಾನಾರ್ಜನೆಯ ಕೇಂದ್ರ ಆದರೆ ಈ ವಿಶ್ವವಿದ್ಯಾಲಯ ಬುದ್ದ ಹುಟ್ಟುವುದಕ್ಕೂ ಮೊದಲೇ ಇತ್ತು ಎಂದು ಅಲ್ಲಿನ ವಸ್ತುಗಳು ತಿಳಿಸುತ್ತದೆ. ಅಲ್ಲದೆ ಈ ವಿಶ್ವವಿದ್ಯಾಲಯದಲ್ಲಿ ಮಹಾವೀರ, ತೀರ್ಥಂಕರರು 14 ವರ್ಷ ಋತುಗಳನ್ನು ಕಳೆದಿದ್ದಾರೆ. ಗೌತಮ ಬುದ್ಧನು ಇಲ್ಲಿ ದ್ಯಾನಾಸಕ್ತನಾಗಿ ಸಾಕಷ್ಟು ವರ್ಷ ಕಳೆದಿದ್ದಾನೆ ಎಂಬುದರ ಬಗ್ಗೆ ಉಲ್ಲೇಖವಿದೆ.

ನಳಂದ ಎಂದರೆ ಜ್ಞಾನವನ್ನು ಹಂಚುವುದು ಎಂದರ್ಥ ಇಲ್ಲಿ ಜ್ಞಾನವನ್ನು ಹಂಚುವುದರಿಂದ ನಳಂದ ಎಂದು ಕರೆಯಲಾಯಿತು. ಆನಂತರ ಗಣಿತ, ಖಗೋಳ, ತತ್ವಶಾಸ್ತ್ರ ಹೀಗೆ ಸಾಕಷ್ಟು ವಿಷಯಗಳನ್ನು ಬೋಧಿಸಲಾಗುತ್ತಿತ್ತು. ಬೌದ್ಧಧರ್ಮಕ್ಕೆ ರಾಜಶ್ರಯ ಸಿಕ್ಕಿದ ನಂತರ ಮಗಧವನ್ನು ಆಳುತ್ತಿದ್ದ ಅರಸರು ಕೂಡ ಬೌದ್ಧಧರ್ಮವನ್ನು ಸ್ವೀಕರಿಸಿದ ನಂತರ ಈ ವಿಶ್ವವಿದ್ಯಾಲಯದಲ್ಲಿ ಬೌದ್ಧಧರ್ಮದ ತತ್ವಗಳನ್ನು ಅನುಸರಿಸಲು ಪ್ರಾರಂಭವಾಯಿತು. ಹೀಗಾಗಿ ಇವತ್ತಿನ ಚೀನಾ, ಮಯನ್ಮಾರ ಮುಂತಾದ ಹಲವು ದೇಶಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರತೊಡಗಿದರು. ನಳಂದ ವಿಶ್ವವಿದ್ಯಾಲಯ ಅಜಾತಶತ್ರುವಿನ ಕಾಲದಿಂದಲೂ ಸಂಪದ್ಭರಿತವಾಗಿ ಇತ್ತು. ಮೌರ್ಯ ಚಕ್ರವರ್ತಿ ಅಶೋಕನು ಬೌದ್ದ ಧರ್ಮವನ್ನು ಸ್ವೀಕರಿಸಿದ ನಂತರ ನಳಂದ ವ್ಯಾಪ್ತಿಯಲ್ಲಿ ದೊಡ್ಡದೊಂದು ಬೌದ್ಧವಿಹಾರವನ್ನು ನಿರ್ಮಾಣ ಮಾಡಿದನು. ಮೌರ್ಯರ ನಂತರ ಶಾತವಾಹನರು, ಕುಶಾನರು, ಗುಪ್ತ ವಂಶದವರ ಕಾಲದಲ್ಲಿ ಈ ವಿಶ್ವವಿದ್ಯಾಲಯ ವಿಶ್ವವಿಖ್ಯಾತಿಯನ್ನು ಪಡೆದುಕೊಂಡಿತ್ತು.

ಕುಮಾರ ಗುಪ್ತನ ಕಾಲದಲ್ಲಿ ನಳಂದ ಹಾಗೂ ವಿಕ್ರಮಶೀಲ ವಿಶ್ವವಿದ್ಯಾಲಯಗಳು ಸಾಕಷ್ಟು ಅಭಿವೃದ್ಧಿಯಾಯಿತು. ಕ್ರಿಸ್ತಶಕ 5ನೇ ಶತಮಾನದ ಹೊತ್ತಿಗೆ ಈ ವಿಶ್ವವಿದ್ಯಾಲಯದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳು, 1,500 ಶಿಕ್ಷಕರಿದ್ದರು. ಎರಡನೇ ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಚೀನಾದ ಬೌದ್ಧ ಪ್ರವಾಸಿಗ ಫಾಹಿಯಾನ್ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪಾಟಲಿಪುತ್ರಕ್ಕೆ ಬಂದು ನಳಂದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದನು ಎಂಬ ಉಲ್ಲೇಖವಿದೆ. ಫಾಹಿಯಾನ್ ಭಾರತದ ಬಗ್ಗೆ ಸಾಕಷ್ಟು ಉತ್ತಮ ಅಂಶಗಳನ್ನು ದಾಖಲಿಸುತ್ತಾನೆ ನಳಂದ ವಿಶ್ವವಿದ್ಯಾಲಯವನ್ನು ಹೊಗಳಿದ್ದಾನೆ. ಕನೋಜದ ಹರ್ಷವರ್ಧನನ ಕಾಲದಲ್ಲಿ ಚೀನಾದ ಪ್ರವಾಸಿಗನಾದ ಹ್ಯೂಯೆನ್ ತ್ಸಾಂಗ್ ಭಾರತಕ್ಕೆ ಭೇಟಿ ನೀಡಿದನು ಆಗ ಅವನು ಎರಡು ವರ್ಷಗಳ ಕಾಲ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದನು. ಅವನು ತನ್ನ ಪುಸ್ತಕದಲ್ಲಿ ನಳಂದ ವಿಶ್ವವಿದ್ಯಾಲಯದ ಬಗ್ಗೆ ವಿಶ್ವವಿದ್ಯಾಲಯದ ಸುತ್ತ ಇಟ್ಟಿಗೆಯಿಂದ ಕಟ್ಟಿದ ಗೋಡೆಗಳಿದ್ದವು, ಒಂದು ದೊಡ್ಡ ಬಾಗಿಲು ಪ್ರವೇಶದ್ವಾರವಾಗಿತ್ತು, ಬೆಳಗಿನ ಜಾವದಲ್ಲಿ ವಿಹಾರಗಳ ಮೇಲ್ಛಾವಣಿ ಮೇಲೆ ಕುಳಿತುಕೊಂಡರೆ ಮೋಡಗಳ ನಡುವೆ ಕುಳಿತುಕೊಂಡಿರುವ ಅನುಭವವಾಗುತ್ತದೆ ಎಂದು ದಾಖಲಿಸುತ್ತಾನೆ.

ಕಾಲಾನಂತರ ಈ ವಿಶ್ವವಿದ್ಯಾಲಯ ಚೀನಿ ಯಾತ್ರಿಕರ ಮೆಚ್ಚಿನ ಸ್ಥಳವಾಗಿತ್ತು. ನಂತರ ಬೌದ್ಧರ ಯಾತ್ರಾಸ್ಥಳ ಹಾಗೂ ಪವಿತ್ರ ಸ್ಥಳವಾಗಿ ಬದಲಾಗಿಹೋಯಿತು. 12ನೇ ಶತಮಾನದವರೆಗೆ ಈ ವಿಶ್ವವಿದ್ಯಾಲಯ ಜ್ಞಾನವನ್ನು ನೀಡುತ್ತಾ ಬಂದಿತ್ತು. ಇಲ್ಲಿ ಬೌದ್ಧ ಧರ್ಮದ ಪ್ರಭಾವ ಕಡಿಮೆಯಾಗಿ ಶೈವ-ವೈಷ್ಣವ ಪಂಥಗಳಿಗೆ ರಾಜಾಶ್ರಯ ಸಿಕ್ಕ ನಂತರವೂ ನಳಂದ ವಿಶ್ವವಿದ್ಯಾಲಯದ ವೈಭವಕ್ಕೆ ಚ್ಯುತಿ ಬರಲಿಲ್ಲ ಆದರೆ ಈ ವಿಶ್ವವಿದ್ಯಾಲಯದ ಮೇಲೆ ಭಕ್ತಿಯಾರ್ ಖಿಲ್ಜಿಯು ಧಾಳಿ ಮಾಡಿ ಅಲ್ಲಿನ ಬೌದ್ಧ ಯಾತ್ರಿಕರನ್ನು ಕೊಂದುಬಿಟ್ಟ. ನಂತರ ವಿಶ್ವವಿದ್ಯಾಲಯ ತನ್ನ ಭವ್ಯತೆಯನ್ನು ಕಳೆದುಕೊಂಡಿತು.

ಭಕ್ತಿಯಾರ್ ಖಿಲ್ಜಿ ಹಚ್ಚಿದ ಬೆಂಕಿ ಆರು ತಿಂಗಳವರೆಗೆ ಅಲ್ಲಿನ ಗ್ರಂಥಭಂಡಾರವನ್ನು ಸು ಟ್ಟಿತ್ತು ಎಂಬ ಉಲ್ಲೇಖವಿದೆ. ಉಳಿದಿದ್ದ ಕೆಲವು ಗ್ರಂಥಗಳನ್ನು ನಳಂದ ಮುಖ್ಯಸ್ಥರಾಗಿದ್ದ ಬೌದ್ಧ ಭಿಕ್ಕು ಶಾಖ್ಯ ಶ್ರೀಭದ್ರ ರಕ್ಷಣೆ ಮಾಡುತ್ತಾರೆ ನಂತರ ಗ್ರಂಥಗಳ ಸಮೇತ ಟಿಬೇಟ್ ನ್ನು ಸೇರಿಕೊಳ್ಳುತ್ತಾರೆ. ಆದ್ದರಿಂದಲೇ ಇಂದಿಗೂ ಭಾರತ ಹಾಗೂ ಟಿಬೇಟ್ ನಡುವೆ ಅವಿನಾಭಾವ ಸಂಬಂಧವಿದೆ. ನಂತರ ಈ ವಿಶ್ವವಿದ್ಯಾಲಯದ ವೈಭವ ಮರುಕಳಿಸಲಿಲ್ಲ ಆದರೆ 1847 ರಲ್ಲಿ ಬ್ರಿಟಿಷ್ ಅಧಿಕಾರಿ ಅಲೆಗ್ಸಾಂಡರ್ ಕನ್ನಿಂಗ್ ಹ್ಯಾಮ್ ವಿಶ್ವವಿದ್ಯಾಲಯದ ಅವಶೇಷಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ, ನಂತರ ನಡೆದ ಉತ್ಖನನಗಳು ನಳಂದ ವಿಶ್ವವಿದ್ಯಾಲಯದ ಕೀರ್ತಿಯನ್ನು ಜಗತ್ತಿಗೆ ತೆರೆದಿಡಲು ಯಶಸ್ವಿಯಾಯಿತು. ನಳಂದ ಗೋಡೆಗಳು ಉತ್ತರದಿಂದ ದಕ್ಷಿಣಕ್ಕೆ 488 ಮೀಟರಗಳಷ್ಟು, ಪೂರ್ವ ಪಶ್ಚಿಮಕ್ಕೆ 244 ಮೀಟರನಷ್ಟು ಅಂದರೆ 12, 80,000ದ ಅಡಿಗಳ ವಿಸ್ತೀರ್ಣದಲ್ಲಿ ಈ ಕಟ್ಟಡಗಳಿವೆ, ಸುಮಾರು 32 ಎಕರೆಯಲ್ಲಿ ಈ ವಿಶ್ವವಿದ್ಯಾಲಯ ಇತ್ತು ಎಂದು ತಿಳಿಯುತ್ತದೆ. ಇದು ಕೇವಲ ವಿಶ್ವವಿದ್ಯಾಲಯವಾಗಿರದೆ ನಮ್ಮ ನೆಲದ ಇತಿಹಾಸ, ನಮ್ಮ ಹೆಮ್ಮೆ, ಜ್ಞಾನ ನೀಡಿದ ಪುಣ್ಯಕ್ಷೇತ್ರವಾಗಿದೆ.

Leave a Reply

Your email address will not be published. Required fields are marked *