ಕರ್ಣ ಎಂದೊಡನೆ ಅದೇನೋ ಅರಿಯದ ಭಾವವೊಂದು ಮನದಲ್ಲಿ ಮೂಡಿ ಮರೆಯಾಗುವುದು. ಕರ್ಣ ಮಹಾಭಾರತದ ಪ್ರಮುಖ ಪಾತ್ರಗಳಲ್ಲಿ ಒಬ್ಬ. ಕುಂತಿಯ ಮೊದಲ ಪುತ್ರ ಹಾಗೂ ದುರ್ಯೋಧನನ ಆಪ್ತಮಿತ್ರ. ಕರ್ಣನನ್ನು ರಾಧೇಯ ಎಂಬ ಮತ್ತೊಂದು ನಾಮಧೇಯದಿಂದ ಕೂಡ ಕರೆಯುತ್ತಾರೆ. ದಾನ ವೀರ ಶೂರನಾದ ಕರ್ಣ ಸೂರ್ಯನ ಪುತ್ರನಾದರೂ ಅವನಿಗೂ ತಪ್ಪಲಿಲ್ಲ ಅವಮಾನ ,ಅಪಮಾನ ,ನಿಂದನೆಯ ಮಾತುಗಳು. ಇಂದಿಗೂ ಮಹಾಭಾರತದ ದುರಂತ ಪಾತ್ರದ ಪುಟಗಳಲ್ಲಿ ಒಂದಾಗಿದೆ. ದೂರ್ವಾಸ ಮುನಿಗಳನ್ನು ಸತ್ಕರಿಸಿದ್ದಕ್ಕಾಗಿ ಅವರಿಂದ ಮಂತ್ರಗಳ ವರ ಪಡೆದಿದ್ದ ಕುಂತಿ, ಮಂತ್ರದ ಶಕ್ತಿಯನ್ನು ಪರೀಕ್ಷಿಸಬೇಕೆಂಬ ಚಾಪಲ್ಯದಿಂದ ಸರ್ಯಮಂತ್ರವನ್ನು ಜಪಿಸಲು ಆಗ ಸೂರ್ಯದೇವ ಪ್ರತ್ಯಕ್ಷನಾಗಿ ಆಕೆಗೆ ಗಂಡು ಮಗುವನ್ನು ಅನುಗ್ರಹಿಸುತ್ತಾನೆ.

ಲೋಕೋಪವಾದಕ್ಕೆ ಹೆದರಿದ ಕುಂತಿ ತನ್ನನ್ನು ತಾನೇ ಶಪಿಸಿಕೊಳ್ಳುತ್ತ ಮದುವೆಗೂ ಮುನ್ನವೇ ಸೂರ್ಯನ ವರದಾನದಿಂದ ಜನಿಸಿದ ಮಗುವನ್ನು ನದಿಯಲ್ಲಿ ತೇಲಿ ಬಿಡುತ್ತಾಳೆ. ಧೃತರಾಷ್ಟ್ರನ ಸಾರಥಿಯಾಗಿದ್ದ ಅಧಿರಥನ ಕೈಗೆ ಸಿಕ್ಕಿದ್ದು , ಕವಚ ಕುಂಡಲಗಳ ಸಮೇತನಾಗಿ ಹುಟ್ಟಿದ್ದ ಮಗುವನ್ನು ಅಧಿರಥ ತನ್ನ ಹೆಂಡತಿಯಾದ ರಾಧೇಯ ಕೈಗೆ ಕೊಟ್ಟು ಅಪೂರ್ವ ತೇಜೋಶಾಲಿಯಾದ ಆ ಮಗುವಿಗೆ ವಸುಷೇಣ ಎಂದು ಹೆಸರಿಟ್ಟನು. ಕಾಲ ಕಳೆದಂತೆಲ್ಲ ಅವನ ಸಾಧನೆಯ ಕೀರ್ತಿ ಕರ್ಣಾಕರ್ಣಿಕೆಯಾಗಿ ಅವನಿಗೆ ಕರ್ಣನೆಂಬ ಹೆಸರು ಬಂತು .

ಬಾಲ್ಯಕಳೆದು ಯವ್ವನಕ್ಕೆ ಕಾಲಿಟ್ಟಾಗ ಶಸ್ತ್ರಾಸ್ತ್ರಗಳ ವಿಧ್ಯಾಭ್ಯಾಸದಲ್ಲಿ ಆಸಕ್ತಿ ಮೂಡುತ್ತದೆ. ಸೂತನ ಮನೆಯಲ್ಲಿ ಬೆಳೆದ ಕಾರಣ ಆತ ಸೂತ ಪುತ್ರನೆಂದು ಆಚಾರ್ಯರು ಆತನಿಗೆ ವಿದ್ಯೆ ಕಲಿಸಲಿಲ್ಲ.ಆಗ ಕರ್ಣ ಪರಶುರಾಮ ರ ಬಳಿ ಬಂತು ತಾನು ವಿಪ್ರ( ಬ್ರಾಹ್ಮಣ)ನು ಎಂದು ಸುಳ್ಳು ಹೇಳಿ ಧನುರ್ವಿಧ್ಯೆಗಳನ್ನು ಕಲಿಯುತ್ತಾನೆ. ಒಂದು ದಿನ ಪರಶುರಾಮರು ವಿಶ್ರಾಂತಿ ಪಡೆಯುವ ಸಲುವಾಗಿ ಕರ್ಣ ನ ತೊಡೆಯ ಮೇಲೆ ಮಲಗುತ್ತಾರೆ,ಇಂದ್ರನ ಆಜ್ಞೆಯ ಮೇರೆಗೆ ಅಲಂಕ ಎಂಬ ದುಂಬಿಯು ಕರ್ಣ ನ ತೊಡೆಯನ್ನು ಕೊರೆದು ರಂದ್ರ ಮಾಡಿ ಹೋಗುತ್ತದೆ.ತಾನು ಅಲುಗಾಡಿದರೆ ತನ್ನ ಗುರುಗಳಿಗೆ ನಿದ್ರಾಭಂಗವಾಗುತ್ತದೆ ಎಂದು ತನ್ನ ಅಗಾಧವಾದ ನೋವನ್ನು ಸಹಿಸಿಕೊಳ್ಳುತ್ತಾನೆ. ರ’ಕ್ತಸ್ರಾವ ಹೆಚ್ಚಾಗಿ ,ರ’ಕ್ತದ ಸ್ಪರ್ಶದಿಂದ ಎಚ್ಚೆತ್ತ ಪರಶುರಾಮರು ತನಗೆ ಸುಳ್ಳು ಹೇಳಿ ಕಲಿತ ವಿದ್ಯೆ ಆಪತ್ಕಾದಲ್ಲಿ ಮರೆತುಹೋಗಲಿ ಎಂದು ಶಾಪಕೊಡಿತ್ತಾರೆ. ಹಸ್ತಿನಾಪುರದಲ್ಲಿ ಕೌರವರಿಗೂ – ಪಾಂಡವರಿಗೂ ಗುರು ದ್ರೋಣಾಚಾರ್ಯರು ಶಸ್ತ್ರ ವಿದ್ಯೆಯನ್ನು ಕಲಿಸುತ್ತಿದ್ದರು.ಅದನ್ನು ಪ್ರದರ್ಶಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು.ಅರ್ಜುನನು ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಂತೆ ಆತನು ಅದ್ವಿತೀಯನೆಂದು ಗುರುಗಳು ಅವನನ್ನು ಪ್ರಶಂಸಿಸುತ್ತಾರೆ.

ಈ ಮಾತುಗಳನ್ನು ಕೇಳಿ ಮುಂದೆ ಬಂದ ಕರ್ಣನು ತಾನು ಆರ್ಜುನನ್ನು ಸೋಲಿಸುವುದಾಗಿ ಹೇಳುತ್ತಾನೆ.ಆಗ ಕೃಪಾಚಾರ್ಯರು ಎದ್ದು ನಿಂತು ನಿನ್ನೊಬ್ಬ ಸೂತ ಪುತ್ರ ,ನೀನ್ಹೇಗೆ ಅರ್ಜುನನಿಗೆ ಸರಿಸಮನಾಗುವೆ ಎಂದು ಅವಮಾನ ಮಾಡುತ್ತಾರೆ.ಆಗ ತಾನೇ ಭೀಮನಿಂದ ಪರಾಜಿತನಾಗಿದ್ದ ದುರ್ಯೋಧನನ್ನು ಮುಂದು ಬಂದು ಕರ್ಣನ ಪರವಹಿಸಿ ಆತನನ್ನು ಅಂಗರಾಜ್ಯದ ರಾಜನನ್ನಾಗಿ ಮಾಡಿ ಗೌರವಿಸಿ ,ಆತನನ್ನು ತನ್ನ ಸ್ನೇಹಿತನಾಗಿಸಿಕೊಳ್ಳುತ್ತಾನೆ. ಕರ್ಣ ಮತ್ತು ಅರ್ಜುನನ ನಡುವೆ ಎಲ್ಲಾ ವಿಷಯಗಳಲ್ಲೂ ಸ್ಪರ್ದೆ ನಡೆಯುತ್ತಿತ್ತು.

ಇಬ್ಬರೂ ಶಕ್ತಿಯಲ್ಲಿ ಸರಿಸಮನಾದವರೆ. ಅರ್ಜುನನ ಮೇಲೆ ಅತಿಯಾದ ಪ್ರೀತಿಯನ್ನು ಹೊಂದಿದ್ದ ಇಂದ್ರನು ,ಕರ್ಣನನ್ನು ಹೇಗಾದರೂ ಮಾಡಿ ನಿಷ್ಯಕ್ತಗೊಳಿಸಬೇಕು ಎಂದು ಆಲೋಚಿಸಿ ,ಕರ್ಣನ ದಾನದ ಉದಾರಗಳನ್ನು ಅರಿತಿದ್ದ ಇಂದ್ರನು ಒಂದು ದಿನ ಬ್ರಾಂಹಣನ ವೇಷ ತೊಟ್ಟು ಕರ್ಣನ ಬಳಿ ಬಂದು ಆತನ ಕವಚ ಕುಂಡಲಗಳನ್ನು ದಾನವಾಗಿ ಕೇಳಿ ಪಡೆದುಕೊಳ್ಳುತ್ತಾನೆ. ಇದನ್ನು ಮೊದಲೇ ಅರಿತ್ತಿದ್ದ ಸೂರ್ಯನು ಕರ್ಣನ ಸ್ವಪ್ನದಲ್ಲಿ ಬಂದು ಎಚ್ಚರಿಸುತ್ತಾನೆ.ಆದರೆ ಕರ್ಣನು ತನ್ನ ಸಹಜ ಗುಣಕ್ಕೆ ಅನುಸಾರವಾಗಿ ದಾನ ಮಾಡಿ ಬಿಡುತ್ತಾನೆ. ಮಹಾಭಾರತದ ಯುದ್ದ ಪ್ರಾರಂಭವಾದ ಬಳಿಕ ಕರ್ಣನು ಕೌರವರ ಪರವಾಗಿ ,ಕೃಷ್ಣನು ಪಾಂಡವರ ಪರವಾಗಿ ನಿಲ್ಲುತ್ತಾರೆ. ದಿನಗಟ್ಟಲೆ ನಡೆದ ಈ ಯುದ್ಧದಲ್ಲಿ ಘಟಾನುಘಟಿಗಳೆಲ್ಲ ಸಾವನ್ನಪ್ಪುತ್ತಾರೆ.

ಯುದ್ಧವು ಕೊನೆಯ ಹಂತಕ್ಕೆ ತಲುಪಿದಾಗ ಕರ್ಣ ಹಾಗೂ ಆರ್ಜುನನ ನಡುವೆ ಭಾರಿ ಯುದ್ಧವೇ ಏರ್ಪಡುತ್ತದೆ.ಯುದ್ಧದ ಕೊನೆಯ ಕ್ಷಣದಲ್ಲಿ ಕರ್ಣನಿಗೆ ತಾನು ಕಲಿತ ವಿದ್ಯೆ ಮರೆತು ಹೋಗಿ ಹತಾಶನಾಗುತ್ತಾನೆ ಕಾರಣ ಗುರುಗಳ ಶಾಪಕ್ಕೆ ಗುರಿಯಾಗಿದ್ದರಿಂದ ಹಾಗೂ ಭೂತಾಯಿಯ ಶಾಪದಿಂದ ಆತನ ರಥದ ಚಕ್ರಗಳು ಭೂಮಿ ಒಳಗೆ ಹುದುಗಿ ಹೋಗುತ್ತವೆ. ಕರ್ಣನು ನಿರಾಯುತ್ತನಾಗಿ ರಥದ ಚಕ್ರಗಳನ್ನು ಮೇಲೆತ್ತಲು ಶತ ಪ್ರಯತ್ನ ಮಾಡುತ್ತಾನೆ. ಇದುವೇ ಸರಿಯಾದ ಸಮಯವೆಂದು ಕೃಷ್ಣನು ಅರ್ಜುನನನ್ನು ಬಾಣ ಪ್ರಯೋಗಿಸುವಂತೆ ಪ್ರಚೋದಿಸುತ್ತಾನೆ. ನಿರಾಯುತನಾದ ಕರ್ಣನ ಮೇಲೆ ಬಾಣ ಪ್ರಯೋಗಿಸುವುದು ಹೇಗೆ ಎಂದು ಕನಿಕರದಿಂದ ಯೋಚಿಸುತ್ತಿರುವಾಗ ಕರ್ಣನ ಅಧರ್ಮ ಕಾರ್ಯಗಳ ಪಟ್ಟಿ ಮಾಡಿ ಹೇಳಿ ಅರ್ಜುನನಿಂದ ಕರ್ಣನ ಮೇಲೆ ಬಾಣ ಪ್ರಯೋಗಿಸುವಂತೆ ಮಾಡುತ್ತಾನೆ ಕೃಷ್ಣ.
ಅರಿಯದೆ ಮಾಡಿದ ತಪ್ಪಿನಿಂದಾಗಿ ಹಾಗೂ ಅಗತ್ಯವಿರುವ ಸಂದರ್ಭಗಳಲ್ಲಿ ಇದ್ದ ಶಾಪದಿಂದ ಅವನಿಗೆ ಮುಳುವಾಗಿ ಕರ್ಣನು ಸಾವನಪ್ಪಬೇಕಾಗುತ್ತದೆ.

ಕರ್ಣನು ತಾನು ಸಾಯುವ ಕೊನೆ ಘಳಿಗೆಯಲ್ಲಿ ಕೃಷ್ಣನ ಬಳಿ ಮೂರು ವರಗಳನ್ನು ಕೇಳುತ್ತಾನೆ. ಮೊದಲನೆಯ ವರವಾಗಿ ಈ ಜನ್ಮದಲ್ಲಿ ನಾನು ಅನೇಕ ಅವಮಾನ, ಅಪಮಾನವನ್ನು , ಅನ್ಯಾಯಗಳನ್ನು ಎದುರಿಸಿದ್ದೇನೆ ಹಾಗಾಗಿ ಇಂತಹ ಅನ್ಯಾಯಕ್ಕೆ ಒಳಗಾದ ಜನರಿಗೆ ನನ್ನಿಂದಲೇ ಸಹಾಯವಾಗಬೇಕು.ನೊಂದವರಿಗೆ ಸಹಾಯ ಮಾಡುವ ಅವಕಾಶ ಮಾಡಿಕೊಡಿ ಎಂದು ಬೇಡಿಕೊಳ್ಳುತ್ತಾನೆ. ಎರಡನೇಯ ವರವಾಗಿ ತನ್ನ ಮುಂದಿನ ಜನ್ಮದಲ್ಲಿ ಕೃಷ್ಣನ ರಾಜ್ಯದಲ್ಲೇ ಜನಿಸಬೇಕೆಂದು ಕೇಳಿಕೊಳ್ಳುತ್ತಾನೆ. ನಂತರ ಕರ್ಣನು ತನ್ನ ಮೂರನೇಯ ವರವನ್ನು ಕೇಳಿಕೊಳ್ಳುತ್ತಾನೆ.ಅದನ್ನು ಕೇಳಿದ ಕೃಷ್ಣನು ಒಂದು ಕ್ಷಣ ಬೆಚ್ಚಿ ಬೀಳುತ್ತಾನೆ. ಅದೇನೆಂದರೆ ತನ್ನ ಕೊನೆಯ ವಿಧಿಯನ್ನು ಈ ಭೂ ಮಂಡಲದಲ್ಲಿ ಯಾವುದೇ ಪಾಪವಿಲ್ಲದ ಸ್ಥಳದಲ್ಲಿ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ.

ಈ ಭೂ ಮಂಡಲದಲ್ಲಿ ಪಾಪವಿಲ್ಲದ ಸ್ಥಳವಿಲ್ಲ ,ಪಾಪ ಮಾಡದ ಜನರಿಲ್ಲ ಇದನ್ನರಿತ ಜಗದ್ದೋದ್ದರಕನು ತನ್ನ ಅಂಗೈಯಲ್ಲಿ ಕರ್ಣನ ಕೊನೆಯ ವಿಧಿಯನ್ನು ಮುಗಿಸುತ್ತಾನೆ. ಕರ್ಣನ ಉದಾರ ಗುಣಗಳಿಂದ ಇಂದಿಗೂ ಕೂಡ ಕರ್ಣ ಜನರ ಮನಸ್ಸಿನಲ್ಲಿ ಮನೆ ಮಾಡಿರುವ. ಯುದ್ದವೆಲ್ಲವೂ ಮುಗಿದ ಬಳಿಕ ಧರ್ಮರಾಯನು ಸತ್ತವರಿಗೆಲ್ಲ ಉತ್ತರ ಕ್ರಿಯೆ ಮಾಡುವ ಸಂದರ್ಭದಲ್ಲಿ ಕುಂತಿದೇವಿಯು ಧರ್ಮರಾಯನ ಬಳಿ ಬಂದು ಕರ್ಣನು ತನ್ನ ಮಗನೆಂದು ಹಾಗೂ ಆತ ನಿಮ್ಮೆಲ್ಲರಿಗೂ ಹಿರಿಯ ಸಹೋದರನೆಂದು ಹೇಳಿ ಮೊದಲು ಅವನಿಗೆ ಕರ್ಮಾಧಿಕಾರಿ ನಡೆಯಬೇಕೆಂದು ತಿಳಿಸುತ್ತಾಳೆ. ಕರ್ಣನ ಜನ್ಮ ವೃತ್ತಾಂತ ಕೇಳಿ ಚಕಿತಗೊಂಡ ಧರ್ಮರಾಯ ತನ್ನ ತಾಯಿಯ ಮೇಲೆ ಕೋಪಾಗೊಳ್ಳುತ್ತಾನೆ. ನಂತರ ಮರುಗುತ್ತಾ ಪಾಂಡವರೆಲ್ಲರೂ ಸೇರಿ ಕರ್ಣನಿಗೆ ಕ್ಷತ್ರಿಯ ಯೋಜಿತವಾಗಿ ಸಂಸ್ಕಾರ ಮಾಡುತ್ತಾರೆ. ಹೀಗೆ ಕರ್ಣನ ದುರಂತ ಅಧ್ಯಾಯ ಇಲ್ಲಿಗೆ ಕೊನೆಗೊಳ್ಳುತ್ತದೆ.

Leave a Reply

Your email address will not be published. Required fields are marked *