ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಹಾಸ್ಯ ಕಲಾವಿದ,ಹವ್ಯಾಸಿ ಹಿನ್ನಲೆ ಗಾಯಕ ಮತ್ತು ಗೀತರಚನಕಾರ. ತಮ್ಮ ವಿಶಿಷ್ಟ ನಟನೆಯಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ. ಚಿಕ್ಕಣ್ಣ ಜನಿಸಿದ್ದು ಮೈಸೂರು ಜಿಲ್ಲೆಯ ಬಲ್ಲಹಳ್ಳಿಯಲ್ಲಿ 1986 ಜೂನ್ 22 ರಲ್ಲಿ. ಬಾಲ್ಯದಿಂದಲೂ ಬಡತನದಲ್ಲಿಯೇ ಬೆಳೆದ ನಟ ಚಿಕ್ಕಣ್ಣ ಮೈಸೂರಿನ ದೃಶ್ಯ ಕಲಾವಿದ ತಂಡದಲ್ಲಿ ಕಾಮಿಡಿ ಶೋಗಳನ್ನು ಮಾಡುವ ಮೂಲಕ ತಮ್ಮ ಕಲಾಜೀವನವನ್ನು ಆರಂಭ ಮಾಡಿದರು. ಈ ತಂಡದ ಮೂಲಕ ಹಲವು ಹಬ್ಬಗಳಲ್ಲಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದರು. ನಂತರ ಉದಯ ಟಿವಿಯಲ್ಲಿ ಪ್ರಸಾರವಾದ ಒಂದು ಕಾಮಿಡಿ ಶೋನಲ್ಲಿ ಕಾರ್ಯನಿರ್ವಹಿಸಿದರು.

ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದ ನಿರೂಪಣೆ ಮಾಡುವಾಗ ಯಶ್ ಕಣ್ಣಿಗೆ ಬಿದ್ದರು. ನಂತರ ಯಶ್‌ ಅಭಿನಯದ ಕಿರಾತಕ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹಾಸ್ಯನಟನಾಗಿ ಕಾಲಿಟ್ಟರು. ತದನಂತರ ತೆರೆಕಂಡ ರಾಜಾ ಹುಲಿ,ಅಧ್ಯಕ್ಷ ಚಿತ್ರಗಳು ಇವರಿಗೆ ಬಿಗ್ ಬ್ರೇಕ್ ನೀಡಿದವು. ಅಲ್ಲಿಂದ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ ಕಿರುತೆರೆಯಲ್ಲಿ ಖಳನಾಗಿ ಕೂಡ ಅಭಿನಯಿಸಿದ್ದಾರೆ. ಇವರಿಗೆ ಖಳನಾಯಕನಾಗಿ ನಟಿಸಬೇಕೆನ್ನುವ ಬಯಕೆ ಇದೆಯಂತೆ. ಈ ರೀತಿಯಾಗಿ ಬಡ ಕುಟುಂಬದಿಂದ ಯಾರ ಅಧಿಕಾರ ಹಣವನ್ನೂ ಬಳಸದೆ ತನ್ನ ಸ್ವಂತ ಪರಿಶ್ರಮ ನಟನೆಯ ಮೂಲಕ ಹಾಸ್ಯ ನಟನಾಗಿ ಬೆಳೆದೆ ಚಿಕ್ಕಣ್ಣ ಈಗ ಕೋವಿಡ್ ಸಮಯದಲ್ಲಿ ಗಾರೆ ಕೆಲಸ ಮಾಡುತ್ತಿದ್ದಾರೆ. ಚಿಕ್ಕಣ್ಣ ಗಾರೆ ಕೆಲಸ ಮಾಡುತ್ತಿರುವ ವಿಡಿಯೋ ಒಂದು ಈಗಾಗಲೇ ಬಹಳಷ್ಟು ವೈರಲ್ ಆಗಿದ್ದು ಚಿಕ್ಕಣ್ಣ ಇದರ ಕುರಿತಾಗಿ ಏನು ಹೇಳಿದ್ದಾರೆ ಎನ್ನುವುದನ್ನು ನೋಡೋಣ.

ಮೈಸೂರಿನ ಬಳಿ ತೋಟದ ಮನೆ ಮಾಡಿಕೊಂಡಿರುವ ಚಿಕ್ಕಣ್ಣ ಅಲ್ಲಿ ಮನೆ ಕಟ್ಟಿಸುತ್ತಿದ್ದು ಲಾಕ್​ಡೌನ್​ನಿಂದಾಗಿ ಅವರಿಗೆ ಗಾರೆ ಕೆಲಸದವರು ಸಿಗುತ್ತಿಲ್ಲವಂತೆ. ಈ ಕಾರಣದಿಂದ ಚಿಕ್ಕಣ್ಣ ತಮ್ಮ ಮನೆಯ ಕೆಲಸವನ್ನು ತಾವೇ ಮಾಡಲು ಮುಂದಾಗಿದ್ದಾರೆ. ಮೊದಲೇ ಗಾರೆ ಕೆಲಸ ಮಾಡಿ ಅಭ್ಯಾಸ ಇರುವ ಈ ಹಾಸ್ಯ ನಟ ಈಗ ಗೋಡೆಗಳಿಗೆ ಪ್ಲಾಸ್ಟಿಂಗ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ವೈರಲ್​ ಆಗುತ್ತಿದೆ. ಅಷ್ಟೇ ಅಲ್ಲದೆ ಸದ್ಯ ಲಾಕ್​ಡೌನ್​ನಿಂದಾಗಿ ಯಾವುದೇ ಚಟುವಟಿಕೆಗಳು ಇಲ್ಲದ ಕಾರಣ ಚಿಕ್ಕಣ್ಣ ಮೈಸೂರಿನ ಹೊರವಲಯದಲ್ಲಿರುವ ತಮ್ಮ ತೋಟದ ಮನೆಯಲ್ಲಿಯೇ ಇದ್ದುಕೊಂಡು ಹಸಿದವರ ಹೊಟ್ಟೆ ತುಂಬಿಸುವ ಕಾರ್ಯವನ್ನು ಸದ್ದಿಲ್ಲದೆ ಕೈಗೆತ್ತಿಕೊಂಡಿದ್ದಾರೆ. ಮೈಸೂರಿನ ನಂಜಬಹದ್ದೂರ್ ಛತ್ರದ ನಿರಾಶ್ರಿತ ಆಶ್ರಯ ಶಿಬಿರದಲ್ಲಿ ಇರುವ ಜನರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಕಷ್ಟದ ದಾರಿಯಲ್ಲಿ ಸಾಕಷ್ಟು ಬಾರಿ ಹಸಿವಿನಿಂದ ಬಳಲಿ ಬೆಳೆದ ನಟ ಇಂದು ತನ್ನಲ್ಲಿ ಇದ್ದಷ್ಟು ಬೇರೆಯವರಿಗೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯ. ಇನ್ನು ಇದಕ್ಕೆಲ್ಲ ಖರ್ಚು ಎಷ್ಟು ಆಗುತ್ತಿದೆ ಎಂದು ಕೇಳಿದರೆ ಚಿಕ್ಕಣ್ಣ ನಗುತ್ತಲೇ ಖರ್ಚು ತನಗೆ ಹೊರೆ ಎನ್ನಿಸುವಷ್ಟು ದೊಡ್ಡ ಖರ್ಚೇನೂ ನನಗೆ ಆಗುತ್ತಿಲ್ಲ ಎಂದು ನಗುತ್ತಲೇ ಹೇಳಿ ಕೊನೆಗೂ ತಾನು ಪ್ರತೀ ದಿನ ನಿರಾಶ್ರಿತರಿಗೆ ಸಹಾಯ ಮಾಡಲು ಮಾಡುವ ಖರ್ಚಿನ ಬಗ್ಗೆ ಎಲ್ಲಿಯೂ ಬಿಟ್ಟುಕೊಡಲಿಲ್ಲ. ಸದ್ಯ ಚಿಕ್ಕಣ್ಣನವರ ಮಾನವೀಯ ಕೆಲಸ ಕಂಡ ಅಭಿಮಾನಿಗಳು ಚಿಕ್ಕಣ್ಣನನ್ನು ಹೆಸರಲ್ಲಿ ಚಿಕ್ಕಣ್ಣ ಇರಬಹುದು ಆದ್ರೆ ಹೃದಯ ವೈಶಾಲ್ಯತೆಯಲ್ಲಿ ದೊಡ್ಡಣ್ಣ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹಾಸ್ಯ ನಟ ಚಿಕ್ಕಣ್ಣ ಅವರ ಈ ಸಹಾಯಕ್ಕೆ ಒಂದು ಮೆಚ್ಚುಗೆ ನೀಡೋಣ.

Leave a Reply

Your email address will not be published. Required fields are marked *