ITI ಮಾಡಿದ ಯುವಕ ಬೆಂಗಳೂರಿನ ಕೆಲಸ ಬಿಟ್ಟು ಕೃಷಿಯಲ್ಲಿ ಸಾಧನೆ.!
ಹುಟ್ಟಿನಿಂದ ಕೃಷಿಯನ್ನು ಕುಲ ಕಸುಬನ್ನಾಗಿ ಮಾಡಿಕೊಂಡು ಹಳ್ಳಿಗಳಲ್ಲಿ ಹಲವಾರು ರೈತರು ಬೆಳೆಯನ್ನು ಬೆಳೆಯುತ್ತಿದ್ದಾರೆ ಆದರೆ ವಿಭಿನ್ನವಾಗಿ ಶಂಕರ್ ಎಂಬ ಯುವಕ ಹಳ್ಳಿಯವರಾಗಿದ್ದು ಐಟಿಐ ಓದಿ ಪ್ರತಿಷ್ಟಿತ ಕಂಪನಿಯಲ್ಲಿ ಕೈತುಂಬಾ ಸಂಬಳ ಪಡೆಯುತ್ತಿದ್ದರು ಸಹ ಅದನ್ನು ಬಿಟ್ಟು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಿದ ಕಥೆಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕುನ್ನೂರು ಗ್ರಾಮದ ಶಂಕರ್ ಎಂಬ ಯುವಕ ಓದಿದ್ದು ಐಟಿಐ. ಬೆಂಗಳೂರಿನ ಪ್ರತಿಷ್ಟಿತ ಕಂಪನಿಯಲ್ಲಿ ಕೈತುಂಬಾ ಕೆಲಸವಿತ್ತು. ಕೆಲವುಕಾಲ ಕೆಲಸವನ್ನು ಮಾಡಿದ ನಂತರ ಶಂಕರ್ ಅವರು ಕೃಷಿಯಲ್ಲಿ ಮೊದಲಿನಿಂದಲೂ ಆಸಕ್ತಿ ಇರುವುದರಿಂದ ಬೆಂಗಳೂರಿನ ಕಂಪನಿಯಲ್ಲಿ ಕೆಲಸವನ್ನು ಬಿಟ್ಟು ವಾಪಸ್ ಊರಿಗೆ ಬಂದು ತಮ್ಮ 1 ಎಕರೆ 29 ಗುಂಟೆ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.
ಜಮೀನಿನಲ್ಲಿ ಯಾವಾಗಲೂ ತೇವಾಂಶ ಇದ್ದಾಗ ಬೆಳೆ ಚೆನ್ನಾಗಿ ಬರಲು ಸಾಧ್ಯ ಈ ಕಾರಣಕ್ಕಾಗಿ ಶಂಕರ್ ಅವರು ಜಮೀನಿನ ಸುತ್ತ ಗಾಳಿ ಗಿಡವನ್ನು ನೆಟ್ಟಿದ್ದಾರೆ. ಜಮೀನಿನಲ್ಲಿ ಯಾವಾಗಲೂ ನೀರು ಇರುವಂತೆ ನೋಡಿಕೊಳ್ಳಲು ಬೋರ್ವೆಲ್ ಸುತ್ತ ಇಂಗುಗುಂಡಿಯನ್ನು ಮಾಡಿದ್ದಾರೆ. ಅಲ್ಲದೆ ಜಮೀನಿನಲ್ಲಿ ಕಾಲುವೆ ಮಾಡಿ ನೀರು ಕಾಲುವೆ ಮೂಲಕ ಕೃಷಿ ಹೊಂಡಕ್ಕೆ ಬರುವಂತೆ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಅವರ ಜಮೀನಿನಲ್ಲಿ ಸದಾ ಕಾಲ ನೀರು ಹರಿಯುತ್ತಿರುತ್ತದೆ. ಅವರ ಕೃಷಿ ಕೆಲಸವನ್ನು ನೋಡಿ ವಿದೇಶಿಯರಾದ ರಷ್ಯಾ, ಚೈನಾ, ಅಮೆರಿಕನ್ನರು ಸಹ ಅವರ ಜಮೀನಿಗೆ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಂಡು ಹೋಗಿದ್ದಾರೆ.
ಅವರ ಜಮೀನಿನಲ್ಲಿ ಸದಾಕಾಲ ಹಸಿರು ನಳನಳಿಸುತ್ತದೆ. ತಮ್ಮ ಇರುವ ಸಣ್ಣ ಜಮೀನಿನಲ್ಲಿ 345 ಅಡಿಕೆ ಸಸಿಗಳು, 355 ಶ್ರೀಗಂಧದ ಗಿಡಗಳು, 300 ನುಗ್ಗೆ ಗಿಡಗಳು, ತೆಂಗು ಸೇರಿದಂತೆ ಸಾಕಷ್ಟು ಬೆಳೆಯನ್ನು ಬೆಳೆದಿದ್ದಾರೆ. ವಿಶೇಷವೆಂದರೆ ಜಮೀನಿನಲ್ಲಿ ಬಿದ್ದಿರುವ ಕಸ, ಕಡ್ಡಿಯನ್ನು ಅಲ್ಲಿಯೇ ಹಾಕಿ ಸಾವಯವ ಗೊಬ್ಬರವನ್ನು ತಯಾರಿಸಿ ಜಮೀನಿಗೆ ಬಳಕೆ ಮಾಡಿಕೊಳ್ಳುತ್ತಾರೆ. ಬೆಳೆಯ ಜೊತೆಗೆ ಅವರು ತಮ್ಮ ಜಮೀನಲ್ಲಿ ಅನೇಕ ಔಷಧಿ ಸಸ್ಯಗಳನ್ನು ಕೂಡ ಬೆಳೆದಿದ್ದಾರೆ.
ಶಂಕರ್ ಅವರು ಜಮೀನಿಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಪ್ರೀತಿಯಿಂದ ಕೃಷಿಯ ಬಗ್ಗೆ ತಮಗೆ ತಿಳಿದ ಎಲ್ಲಾ ಮಾಹಿತಿಯನ್ನು ಹಂಚಿಕೊಂಡು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಕೃಷಿ ಮಾಡಲು ಯಾವುದೇ ಬಂಡವಾಳವನ್ನು ಹಾಕಿಲ್ಲ ಅವರ ಪದ್ಧತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಂಡರೆ ಆಹಾರಧಾನ್ಯ ಉತ್ಪಾದನೆಯಲ್ಲಿ ನಮ್ಮ ದೇಶವನ್ನು ಹಿಂದಕ್ಕೆ ಹಾಕಲು ಯಾರಿಂದಲೂ ಸಾಧ್ಯವಿಲ್ಲ. ಶಂಕರ್ ಅವರ ಈ ಸಾಧನೆ ಎಲ್ಲರಿಗೂ ಮಾದರಿಯಾಗಿದೆ.
ಶೂನ್ಯ ಬಂಡವಾಳದಿಂದ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಏನನ್ನಾದರೂ ಸಾಧಿಸಬಹುದು ಭೂಮಿ ತಾಯಿ ಕೈಬಿಡುವುದಿಲ್ಲ ಎನ್ನುವುದಕ್ಕೆ ಶಂಕರ್ ಅವರು ಸಾಕ್ಷಿಯಾಗಿದ್ದಾರೆ. ಮನಸ್ಸಿದ್ದರೆ ಯಾವ ಕೆಲಸವನ್ನಾದರೂ ಅಚ್ಚುಕಟ್ಟಾಗಿ, ಪ್ರಶಂಸನೀಯವಾಗಿ ಮಾಡಬಹುದು ಎಂಬುದನ್ನು ಶಂಕರ್ ಅವರು ತೋರಿಸಿಕೊಟ್ಟಿದ್ದಾರೆ. ದೂರದ ನಗರಗಳಲ್ಲಿ ಮನಸ್ಸಿಲ್ಲದೆ ಇನ್ನೊಬ್ಬರ ಅಧೀನದಲ್ಲಿ ಕೆಲಸ ಮಾಡುವ ಬದಲು ಇರುವ ಜಮೀನಿನಲ್ಲಿ ಸಂತೋಷದಿಂದ ಕೆಲಸ ಮಾಡಿದರೆ ಸಿಗುವ ತೃಪ್ತಿ ಬೇರೆಲ್ಲೂ ಸಿಗುವುದಿಲ್ಲ.