ದಸರಾ ಪದದ ಅರ್ಥ ಹಾಗೂ ವಿಜಯ ದಶಮಿಯ ಮಹತ್ವವನೊಮ್ಮೆ ಓದಿ

0 60

ನವರಾತ್ರಿಯ ವಿಶೇಷ, ನವರಾತ್ರಿಯ ಪೂಜಾ ವಿಧಾನ ಹಾಗೂ ಮಹತ್ವವನ್ನು ಈ ಲೇಖನದ ಮೂಲಕ ತಿಳಿಯೋಣ.

ಮಹಿಷಾಸುರನ ರಾಕ್ಷಸ ಪ್ರವೃತ್ತಿ ವಿಜೃಂಭಿಸಿ ತಾಮಸಿ ಪಾಶವೀ ಗುಣಗಳು ಮೆರೆಯುತ್ತಿದ್ದಾಗ ಅಸುರಿ ಪಾಶದಿಂದ ಮುಕ್ತವಾಗಲು ದೇವಿಯು ಒಂಭತ್ತು ಅವತಾರ ಅಥವಾ ರೂಪಗಳನ್ನು ತಾಳಿ ಅವನ ಸಂಹಾರ ಮಾಡಿ ಸಾತ್ವಿಕತೆಯನ್ನು ಮೆರೆದ ದಿನದ ವಿಜಯೋತ್ಸವವೇ ನವರಾತ್ರಿ ಅಥವಾ ದಸರಾ. ದಸರಾ ಪದದ ಉತ್ಪತ್ತಿ ದಶಹರಾ ಎಂದು ದಶ ಎಂದರೆ ಹತ್ತು ಹರಾ ಎಂದರೆ ಸೋತಿವೆ ಎಂದು. ದಸರೆಯ ಮೊದಲ ಒಂಬತ್ತು ರಾತ್ರಿಗಳಲ್ಲಿ ಹತ್ತು ದಿಕ್ಕುಗಳಲ್ಲಿ ದೈವೀಶಕ್ತಿ ಸಂಪನ್ನ ಹಾಗೂ ಅವಳ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ ಹತ್ತು ದಿಕ್ಕುಗಳ ಮೇಲೆ ಸಾತ್ವಿಕತೆಯ ವಿಜಯವಾಗುತ್ತದೆ ಎಂದು ಉಲ್ಲೇಖಿಸಲಾಗಿದೆ. ನವರಾತ್ರಿಯ ಮುಖ್ಯ ಶಾಸ್ತ್ರ ವಿಧಾನ ಘಟಸ್ಥಾಪನೆ ಅಥವಾ ಕಲಶ ಸ್ಥಾಪನೆಯಾಗಿದೆ. ಈ ಹಬ್ಬ ಮೊದಲು ಕೃಷಿ ಪ್ರಧಾನವೆಂದು ತೋರಿತು ನಂತರ ಧಾರ್ಮಿಕ ಸ್ವರೂಪ ಲಭಿಸಿತು ಅನಂತರ ರಾಜ ಆಳ್ವಿಕೆಯ ಸಂದರ್ಭದಲ್ಲಿ ರಾಜಕೀಯ ಸ್ವರೂಪವೂ ದೊರೆಯಿತು. ನವರಾತ್ರಿ ಎಂದರೆ ಒಂಬತ್ತು ರಾತ್ರಿಗಳ ಸಮೂಹ. ಐದು ರೀತಿಯ ನವರಾತ್ರಿಗಳಿವೆ. ಅದರಲ್ಲಿ ಮುಖ್ಯವಾದವು ಶರನ್ನವರಾತ್ರಿ ಮತ್ತು ಚೈತ್ರ ನವರಾತ್ರಿ. ಶರನ್ನವರಾತ್ರಿಯನ್ನು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ರೀತಿಗಳಲ್ಲಿ ಆಚರಿಸಲಾಗುತ್ತದೆ. ಜಗನ್ಮಾತೆಯಾದ ಆದಿಶಕ್ತಿಯನ್ನು ಒಂಭತ್ತು ದಿನವೂ ನವ ವಿಧದಲ್ಲಿ ಪೂಜಿಸಲಾಗುತ್ತದೆ.

ಶ್ರೀರಾಮನು ರಾವಣನ ಸಂಹಾರ ಮಾಡಿದ್ದು ವಿಜಯ ದಶಮಿಯ ದಿನವೇ. ಪಾಂಡವರು ಅಜ್ಞಾತವಾಸ ಮುಗಿಸಿ ಬನ್ನಿ ಮರದಲ್ಲಿ ಬಚ್ಚಿಟ್ಟಿದ್ದ ತಮ್ಮ ಆಯುಧಗಳನ್ನು ಮರಳಿ ಪಡೆದದ್ದು ಇದೆ ದಿನ ಎಂಬ ಪ್ರತೀತಿ ಇದೆ ನವರಾತ್ರಿಯಲ್ಲಿ ದೇವಿ ತತ್ತ್ವವು ಎಂದಿಗಿಂತ ಸಾವಿರ ಪಟ್ಟು ಹೆಚ್ಚು ಕಾರ್ಯ ನಿರತವಾಗಿರುತ್ತದೆ ಹಾಗಾಗಿ ದೇವಿ ನಾಮಜಪ ಶ್ರೀ ದುರ್ಗಾದೇವ್ಯೈ ನಮಃ ಎಂದು ಪಠಿಸಿ ಈ ತತ್ವದ ಲಾಭ ಪಡೆಯಬೇಕು. ನವರಾತ್ರಿಯ ಮೊದಲ ಮೂರು ದಿನ ತಮೋ ಗುಣವನ್ನು ಕಡಿಮೆ ಮಾಡಲು ತಮೋಗುಣ ಮಹಾಕಾಳಿಯ ಆರಾಧಿಸಿ, ನಂತರದ ಮೂರು ದಿನಗಳಲ್ಲಿ ರಜೋಗುಣ ವೃದ್ಧಿಸಲು ಮಹಾಲಕ್ಷ್ಮೀಯ ಹಾಗೂ ಕೊನೆಯ ಮೂರು ದಿನಗಳಂದು ಮಹಾ ಸರಸ್ವತಿಯನ್ನು ಆರಾಧಿಸುತ್ತಾರೆ. ನವರಾತ್ರಿಯ ವ್ರತಾಚರಣೆ ಎಂದರೆ ಅಖಂಡ ದೀಪ ಪ್ರಜ್ವಲನೆ ಅಂದರೆ ನವರಾತ್ರಿಯ ಒಂಭತ್ತು ದಿನವೂ ಸತತ ದೀಪವನ್ನು ಉರಿಸುವುದು. ಶ್ರೀದೇವಿ ಮಹಾತ್ಮೆ ಪಠಣ, ಸಪ್ತಶತಿ ಪಠಣ, ದೇವಿ ಭಾಗವತ ಮತ್ತು ಲಲಿತೋಪಾಖ್ಯಾನ ಶ್ರವಣ ಸೌಂದರ್ಯ ಲಹರಿ ವಾಚನ ಗಾಯನ,ಲಲಿತಾ ಪೂಜೆ ಸರಸ್ವತಿ ಪೂಜೆ ,ಉಪವಾಸ ಮತ್ತು ಜಾಗರಣೆ. ಹತ್ತನೆಯ ದಿನ ವಿಜಯದಶಮಿಯಂದು ಶಮೀ (ಬನ್ನಿ) ವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿ ವಿನಿಮಯ ಮಾಡಿಕೊಳ್ಳಬೇಕು. ವಿಜಯನಗರದ ಅರಸರ ಕಾಲದಲ್ಲಿ ವಿಜಯೋತ್ಸವವಾಗಿ ಪ್ರಾರಂಭವಾಗಿ ಮುಂದೆ ಮೈಸೂರು ಅರಸರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯನ್ನು ತಲುಪಿತ್ತು. ಮೈಸೂರಿನ ಜಂಬೂಸವಾರಿ ಜಗತ್ಪ್ರಸಿದ್ಧ . ಗೊಂಬೆಗಳನ್ನು ಮನೆಮನೆಗಳಲ್ಲಿ ಅಲಂಕಾರಿಕವಾಗಿ ಜೋಡಿಸಿ ಪೂಜಿಸಿ ಆರತಿ ಮಾಡಿ ಮಕ್ಕಳನ್ನು ಕರೆದು ಬೊಂಬೆ ಬಾಗಿನ ಕೊಡುವ ಪದ್ಧತಿ ಇದೆ, ಅಷ್ಟಮಿಯಂದು ಕನ್ಯಾ ಮುತ್ತೈದೆಯರ (ಎಂಟು ವರ್ಷದೊಳಗಿನ ಹೆಣ್ಣು ಮಕ್ಕಳು) ಪೂಜೆ ಮಾಡುವ ಪರಿಪಾಠವಿದೆ. ಮೈಸೂರು ದಸರಾ ನೋಡಲು ಕಣ್ಣೆರಡು ಸಾಲುವುದಿಲ್ಲ. ಬದಲಾಗುತ್ತಿರುವ ಈ ಕಾಲಮಾನದಲ್ಲಿ, ಮನುಷ್ಯನ ಅಸುರೀ ಸ್ವಭಾವ ಹೆಚ್ಚುತ್ತಿರುವ ಈ ವಾತಾವರಣದಲ್ಲಿ ಸಾತ್ವಿಕತೆಯ ಪ್ರಭಾವ ಹೆಚ್ಚಾಗಲು ವ್ರತ ಹಬ್ಬದ ಆಚರಣೆಗಳು ಮುಖ್ಯವಾಗಿದೆ.

Leave A Reply

Your email address will not be published.