ಇಪ್ಪತ್ತು ವರ್ಷದ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ವಿಷಯವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂಗಡ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಲೋಕಸಭೆಯಲ್ಲಿ ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಗುಜರಿ ನೀತಿ ಜಾರಿಯ ಬಗ್ಗೆ ಪ್ರಸ್ತಾಪಿಸಿ ೨೦ ವರ್ಷ ಮೇಲ್ಪಟ್ಟ ಖಾಸಗಿ ವಾಹನ, ೧೫ ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳ ಪರೀಕ್ಷೆಗೆ ಒಳಗಾಗಬೇಕು. ಈ ಮೂಲಕ ಹಳೆಯ ವಾಹನಗಳನ್ನು ಮಾಲೀಕರು ಸ್ವಯಂಪ್ರೇರಿತರಾಗಿ ಗುಜರಿಗೆ ಹಾಕಬೇಕು ಎಂದು ಸೂಚಿಸಿದ್ದಾರೆ. ಹಳೆಯ ವಾಹನ ಗುಜರಿಗೆ ಹಾಕಿದರೆ ಹೊಸ ವಾಹನ ಖರೀದಿಗೆ ಆಕರ್ಷಕ ಸೌಲಭ್ಯ ನೀಡುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಿಳಿಸಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಹಳೆಯ ಮತ್ತು ಮಾಲಿನ್ಯ ಉಂಟು ಮಾಡುವ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿ ಹಾಕಲು ಮುಂದಾಗುವ ಮಾಲೀಕರಿಗೆ ಹೊಸ ವಾಹನಗಳ ಖರೀದಿಗೆ ಆಕರ್ಷಕ ಸೌಲಭ್ಯಗಳು ದೊರೆಯಲಿವೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. 2021–22ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಸ್ಕ್ರ್ಯಾಪಿಂಗ್ ಪಾಲಿಸಿ (ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ನೀತಿ) ಅನ್ವಯ ಈ ಕ್ರಮಗಳನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ. ಹೊಸ ಕ್ರಮಗಳಿಂದ ಭಾರತದ ಆಟೊಮೊಬೈಲ್‌ ಉದ್ಯಮದ ಬೆಳವಣಿಗೆ ಶೇಕಡ 30ರಷ್ಟು ಹೆಚ್ಚಲಿದೆ. ಪ್ರಸ್ತುತ 4.5 ಲಕ್ಷ ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಆಟೊಮೊಬೈಲ್‌ ಉದ್ಯಮವು ಭವಿಷ್ಯದಲ್ಲಿ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ವಹಿವಾಟುನಡೆಸುವ ನಿರೀಕ್ಷೆ ಇದೆ ಎಂದು ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಸ್ಕ್ರ್ಯಾಪಿಂಗ್ ಪಾಲಿಸಿಯಿಂದ ಆರ್ಥಿಕತೆಗೆ ಉತ್ತೇಜನ ದೊರೆಯುವ ಜತೆಗೆ ಆಟೊಮೊಬೈಲ್‌ ಉದ್ಯಮಕ್ಕೂ ಲಾಭವಾಗಲಿದೆ. ಜೊತೆಗೆ ವಾಹನ ಮಾಲಿನ್ಯಕ್ಕೂ ಕಡಿವಾಣ ಬೀಳಲಿದೆ. ವಾಹನಗಳನ್ನು ಗುಜರಿಗೆ ಹಾಕುವವರಿಗೆ ತಯಾರಕರಿಂದ ಹಲವು ರಿಯಾಯಿತಿಗಳು ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ. ಹೊಸ ನೀತಿಯ ವಿವರಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು. ಈ ನೀತಿಯಿಂದಾಗಿ ಮುಂದಿನ ದಿನಗಳಲ್ಲಿ ಆಟೊಮೊಬೈಲ್‌ ಉದ್ಯಮವು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಕಲ್ಪಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಹಳೆಯ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚಾಗುವುದನ್ನು ತಡೆಗಟ್ಟುವ ದೃಷ್ಟಿಯಿಂದ ಬಜೆಟ್‌ನಲ್ಲಿ ಗುಜರಿ ನೀತಿಯನ್ನು ಪ್ರಸ್ತಾಪಿಸಲಾಗಿದೆ. ದಿನೇ ದಿನೇ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ತಡೆಗಟ್ಟಲು ೪೨ ನಗರ ಕೇಂದ್ರಗಳಿಗೆ ಒಟ್ಟು ೨,೨೧೭ ಕೋಟಿ ರೂ. ಅನುದಾನವನ್ನು ಪ್ರಕಟಿಸಿದ್ದಾರೆ. ದೇಶದ ಆಟೋಮೊಬೈಲ್ ಉದ್ಯಮದ ಉತ್ತೇಜನಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು, ಕಳೆದ ಒಂದೂವರೆ ವರ್ಷಗಳಿಂದ ಹಳೆಯ ವಾಹನಗಳನ್ನು ಗುಜರಿಗೆ ಹಾಕುವ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಸ್ತಾಪಿಸುತ್ತಲೆ ಬಂದಿದ್ದರು. ಈಗ ಇದು ಬಜೆಟ್‌ನಲ್ಲಿ ಘೋಷಿಸುವ ಮೂಲಕ ಅಂತ್ಯಗೊಂಡಿದೆ. ಇದರಿಂದ ಭಾರತೀಯ ಉತ್ಪಾದಕರಿಗೆ ನೆರವಾಗಲಿದೆ.

ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಹಣಕಾಸಿನ ನೆರವಿನ ಜತೆಗೆ ಹೊಸ ವಾಹನ ಖರೀದಿಗೆ ಉತ್ತೇಜನ ನೀಡುವ ಉದ್ದೇಶದಿಂದಲೇ ಗುಜರಿ ನೀತಿಯನ್ನು ಜಾರಿಗೆ ತರಲಾಗಿದೆ. ಕಳೆದ ೨ ವರ್ಷದಿಂದ ಆಟೋ ಮೊಬೈಲ್ ಕ್ಷೇತ್ರದ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳ ಮಾದರಿಯಲ್ಲೇ ದೇಶದಲ್ಲೂ ಗುಜರಿ ನೀರಿ ಜಾರಿಗೆ ತರುವಂತೆ ವಾಹನ ತಯಾರಕ ಕಂಪನಿಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಈಗ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್, ಗುಜರಿ ವಾಹನ ನೀತಿಯನ್ನು ಜಾರಿಗೆ ತಂದಿದ್ದಾರೆ.

ಸ್ವಯಂ ಪ್ರೇರಿತವಾಗಿ ವಾಹನಗಳನ್ನು ಗುಜರಿ ಹಾಕುವುದನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಹೀಗಾಗಿ ಹಳೆಯ ಮತ್ತು ಮಾಲಿನ್ಯ ಉಂಟು ಮಾಡುವ ವಾಹನಗಳ ಮಾಲೀಕರ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳುತ್ತೀರಿ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಸಚಿವರು ಹಸಿರು ತೆರಿಗೆ ವಿಧಿಸಲು ಸರ್ಕಾರಕ್ಕೆ ಅವಕಾಶವಿದೆ. ಜೊತೆಗೆ ವಾಹನದ ಕ್ಷಮತಾ ಪರೀಕ್ಷೆಯನ್ನು ಕಡ್ಡಾಯವಾಗಿ ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಸುಮಾರು ಒಂದು ಕೋಟಿ ವಾಹನಗಳು ಗುಜರಿ ಸೇರಬಹುದು. ಹೊಸ ನೀತಿಯಿಂದ ಉಕ್ಕು, ಪ್ಲಾಸ್ಟಿಕ್‌ ರಬ್ಬರ್‌ ಮುಂತಾದ ಗುಜರಿ ಸಾಮಾನುಗಳ ಲಭ್ಯತೆಯೂ ಹೆಚ್ಚಳವಾಗಲಿದೆ. ಈ ಗುಜರಿ ಸಾಮಾನುಗಳನ್ನು ಸಹ ಆಟೊಮೊಬೈಲ್‌ ತಯಾರಿಸಲು ಬಳಸುವುದರಿಂದ ಹೊಸ ವಾಹನಗಳ ಮೌಲ್ಯವು ಸಹ ಶೇಕಡ 30ರಿಂದ 40ರಷ್ಟು ಕಡಿಮೆಯಾಗಲಿದೆ. ಹೊಸ ತಂತ್ರಜ್ಞಾನ ಅಳವಡಿಸಲು ಹೊಸ ನೀತಿಯಲ್ಲಿ ಉತ್ತೇಜನ ನೀಡಲಾಗುವುದು ಎಂದು ವಿವರಿಸಿದ್ದಾರೆ. ಹಸಿರು ತೆರಿಗೆ ವಿಧಿಸುವ ಬಗ್ಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಹಲವು ರಾಜ್ಯಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಿಲ್ಲ. ಹಳೆಯ ವಾಹನಗಳಿಗೆ ಹಸಿರು ತೆರಿಗೆ ವಿಧಿಸಲು ಮೋಟಾರು ವಾಹನ ಕಾಯ್ದೆ  ಅಡಿಯಲ್ಲಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಗಳಿಗೆ ಮತ್ತೊಮ್ಮೆ ಸೂಚನೆ ನೀಡುತ್ತೇವೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಇಲಾಖೆಯ ಕಾರ್ಯದರ್ಶಿ ಗಿರಿಧರ್‌ ಅರಮಾನೆ ತಿಳಿಸಿದ್ದಾರೆ. ಹಳೆಯ ವಾಹನಗಳನ್ನು ಗುಜರಿಗೆ ವಿಲೇವಾರಿ ಮಾಡುವ ನೀತಿ ಅನ್ವಯ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಕ್ಷಮತಾ ಪರೀಕ್ಷೆ ನಡೆಸಲಾಗುತ್ತದೆ.

Leave a Reply

Your email address will not be published. Required fields are marked *