ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ ಎಂದರೆ ಬೇಡ ಎನ್ನುವವರು ಯಾರು ಇಲ್ಲ ಆದರೆ ಲಕ್ಷ್ಮೀದೇವಿ ಎಲ್ಲರಿಗೂ ಒಲಿಯುವುದಿಲ್ಲ. ಲಕ್ಷ್ಮೀದೇವಿ ಒಲಿಯದೆ ಇರಲು ಕಾರಣವೇನು, ಲಕ್ಷ್ಮೀದೇವಿ ಹೇಗೆ ಜನಿಸಿದಳು, ಲಕ್ಷ್ಮೀದೇವಿಯ ಬಗ್ಗೆ ಹಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಅಸುರರು ಅಮರತ್ವದ ಆಸೆಯಿಂದ ಸಮುದ್ರವನ್ನು ಕಡೆಯುತ್ತಾರೆ ಆಗ ಕಮಲ ಉದಯಿಸುತ್ತದೆ ಕಮಲದ ಒಳಗೆ ಮಹಾಲಕ್ಷ್ಮೀ ದೇವಿ ಇರುತ್ತಾಳೆ. ಲಕ್ಷ್ಮೀ ದೇವಿಯನ್ನು ನೋಡಿದ ತಕ್ಷಣ ಎಲ್ಲರಿಗೂ ಎಲ್ಲವೂ ಮರೆತು ಹೋಯಿತು. ರತ್ನ ವರ್ಣದ ಸೀರೆಯಲ್ಲಿ ಮಿನುಗುತ್ತಿದ್ದಳು ಮಹಾತಾಯಿ. ಎಲ್ಲರ ಕಣ್ಣುಗಳಲ್ಲಿಯೂ ಲಕ್ಷ್ಮೀಯನ್ನು ಪಡೆಯಬೇಕೆಂಬ ಆಸೆ ಆದರೆ ವಿಷ್ಣು ಗರುಡನ ಮೇಲೆ ವಿರಾಜಮಾನವಾಗಿ, ಹಸನ್ಮುಖಿಯಾಗಿ ಲಕ್ಷ್ಮೀಯನ್ನು ನೋಡುತ್ತಿದ್ದನು. ಅವನ ಕಣ್ಣುಗಳಲ್ಲಿ ಲಕ್ಷ್ಮೀ ಮೇಲೆ ಹಕ್ಕು ಸಾಧಿಸಬೇಕೆಂಬ ಆಸೆ ಇರಲಿಲ್ಲ. ವಿಷ್ಣುವನ್ನು ನೋಡಿ ಲಕ್ಷ್ಮೀಗೆ ಪರಮಾನಂದವಾಯಿತು.

ಲಕ್ಷ್ಮೀಗೆ ವಿಷ್ಣುವಿನ ಕಣ್ಣುಗಳಲ್ಲಿ ನಿಷ್ಕಲ್ಮಶ ಪ್ರೀತಿ ಕಂಡಿತು, ಲಕ್ಷ್ಮೀ ದೇವಿ ಮನಸೋತಳು. ಸಮುದ್ರ ದೇವ ನೀಡಿದ ಕಮಲ ಮಾಲೆಯನ್ನು ವಿಷ್ಣುವಿನ ಕೊರಳಿಗೆ ಮಹಾಲಕ್ಷ್ಮೀ ಹಾಕುತ್ತಾಳೆ. ನಾರಾಯಣನಾಗಿದ್ದ ವಿಷ್ಣು ಲಕ್ಷ್ಮೀನಾರಾಯಣನಾಗುತ್ತಾನೆ. ವಿಷ್ಣುವಿನ ಹೃದಯ ಲಕ್ಷ್ಮೀಯ ನಿವಾಸವಾಯಿತು ಅಲ್ಲದೇ ಲೋಕದಲ್ಲಿ ಸಮೃದ್ಧಿ ಉಂಟಾಯಿತು. ಲಕ್ಷ್ಮೀನಾರಾಯಣರು ದಾರಿದ್ರ್ಯವನ್ನು ತೆಗೆದುಹಾಕಿ ಸಮೃದ್ಧಿಯನ್ನು ಉಂಟುಮಾಡಿದರು ಹಾಗೆ ನರ ರೂಪದಲ್ಲಿರುವ ಗಂಡ ಹೆಂಡತಿ ಅಂದರೆ ಲಕ್ಷ್ಮೀನಾರಾಯಣರು ಕುಟುಂಬದ ಅಭಿವೃದ್ಧಿಯೊಂದಿಗೆ ಲೋಕದ ಅಭಿವೃದ್ಧಿ ಮಾಡಲು ದೇವರು ಶಕ್ತಿ ಕರುಣಿಸಿದ್ದಾರೆ ಆದ್ದರಿಂದ ಮದುವೆಯಾದವರನ್ನು ಶ್ರೀ ಹಾಗೂ ಶ್ರೀಮತಿ ಎಂದು ಕರೆಯಲಾಗುತ್ತದೆ. ಶ್ರೀ ಎಂಬ ಪದದಲ್ಲಿ ಸಿರಿ, ಸಂಪತ್ತು, ಅಧಿಕಾರ ಅಡಗಿದೆ.

ಅಷ್ಟಲಕ್ಷ್ಮೀಯಾಗಿ ಮನುಷ್ಯನ ಆದಿಯಿಂದ ಅಂತ್ಯದವರೆಗೆ ನಮ್ಮ ಜೊತೆ ಇದ್ದಾಳೆ ಮಹಾಲಕ್ಷ್ಮೀ. ನಮಗೆ ಜನ್ಮ ಕೊಟ್ಟ ತಾಯಿ ಆದಿಲಕ್ಷ್ಮೀ ಆದರೆ ಅಸಹನೆ, ಅಲಕ್ಷಗಳಿಂದ ನೋವನ್ನು ಪಡುತ್ತಾಳೆ ಆದಿಲಕ್ಷ್ಮಿ ರೂಪದಲ್ಲಿರುವ ತಾಯಿ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಭಕ್ತಿ ಇದ್ದರೆ ಅದು ಧನಲಕ್ಷ್ಮೀ. ಸಂತಾನ ಕೊಡುವವಳು ಸಂತಾನಲಕ್ಷ್ಮೀ ಆದರೆ ಹೆಣ್ಣು ಮಕ್ಕಳು ಹುಟ್ಟಿದರೆ ಲಕ್ಷ್ಮೀ ಕಾಣುವುದೇ ಇಲ್ಲ. ಹತಾಶರಾದ ಪುರುಷನಿಗೆ ಧೈರ್ಯ, ಸಹಕಾರ ಕೊಡುವ ಹೆಂಡತಿ ವೀರ ಲಕ್ಷ್ಮೀ. ಸಾಧನೆ ಮಾಡಿದವರು ತಾಯಿ, ತಂಗಿ, ಹೆಂಡತಿಯಲ್ಲಿ ಅವರು ಲಕ್ಷ್ಮೀಯನ್ನು ಕಂಡುಕೊಂಡಿದ್ದಾರೆ ಅವರ ಮುಖದಲ್ಲಿ ಸದಾ ನಗು ಕಂಡುಬರುತ್ತದೆ.

ಎಷ್ಟೋ ಬಡವರ ಗುಡಿಸಲು ಲಕ್ಷ್ಮೀಯರ ಬೆಳಕಿನಿಂದ ಬೆಳಗಿದೆ. ಇದ್ಯಾವುದು ಕಾಣಿಸದ ಪುರುಷರು ಹೆಣ್ಣಿನ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಅಧಿಕಾರ ಚಲಾಯಿಸುತ್ತಾರೆ. ತಾಯಿ, ಅಕ್ಕ, ತಂಗಿ, ಹೆಂಡತಿ, ಮಗಳನ್ನು ಪ್ರೀತಿಸಿದರೆ ಲಕ್ಷ್ಮೀ ದೇವಿ ತಾನಾಗಿಯೇ ಒಲಿಯುತ್ತಾಳೆ. ಬೆಂಕಿಯಂತೆ ಪರಿಶುದ್ಧತೆ, ಚಂದ್ರನಂತೆ ಪ್ರಶಾಂತತೆ, ಸೂರ್ಯನಂಥ ಪ್ರಕಾಶ ಗೋಚರವಾಗುತ್ತದೆ. ಸಮುದ್ರಮಥನವಾದಾಗ ವಿಷ್ಣುವಿನ ಕಣ್ಣಲ್ಲಿ ಕಂಡ ನಿಷ್ಕಲ್ಮಶ ಪ್ರೀತಿ ನಿಮ್ಮ ಕಣ್ಣಲ್ಲಿ ಕಂಡರೆ ಲಕ್ಷ್ಮೀದೇವಿ ನೆಲೆಸುವುದರಲ್ಲಿ ಯಾವುದೇ ಅನುಮಾನವಿಲ್ಲ.

Leave a Reply

Your email address will not be published. Required fields are marked *