ಕರ್ನಾಟಕವನ್ನು ಶ್ರೀಗಂಧದ ನಾಡು ಎನ್ನುವರು ಇತ್ತೀಚಿನ ದಿನಗಳಲ್ಲಿ ಶ್ರೀಗಂಧದ ಮರಗಳು ಕಡಿಮೆಯಾಗುತ್ತಿವೆ ಆದ್ದರಿಂದ ಶ್ರೀಗಂಧವನ್ನು ಎಲ್ಲರೂ ನೋಡಿರುವುದಿಲ್ಲ. ಶ್ರೀಗಂಧದ ವಸ್ತು ಸಂಗ್ರಹಾಲಯ ನಿರ್ಮಿಸಿರುವುದರಿಂದ ಎಲ್ಲರೂ ಶ್ರೀಗಂಧದ ವಸ್ತುಗಳನ್ನು ನೋಡಬಹುದು. ಶ್ರೀಗಂಧದ ವಸ್ತು ಸಂಗ್ರಹಾಲಯದ ಸ್ಥಳಾಂತರದ ಬಗ್ಗೆ ಸಚಿವರು ಹೇಳಿದ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಹಳ ಬೆಲೆಬಾಳುವ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ನೋಡಲು ಕಣ್ಣಿಗೆ ಹಬ್ಬ. ಶ್ರೀಗಂಧದ ವಸ್ತು ಸಂಗ್ರಹಾಲಯದ ಸ್ಥಳಾಂತರದ ಬಗ್ಗೆ ಚಿಂತನೆ ನಡೆಯುತ್ತಿದ್ದು ಮೈಸೂರು ಅರಮನೆ ಆವರಣ ಅಥವಾ ಮೈಸೂರು ಮೃಗಾಲಯದಲ್ಲಿ ತೆರೆಯುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ ಸೋಮಶೇಖರ್‌ ತಿಳಿಸಿದರು.

ಈಗಾಗಲೇ ಮೈಸೂರಿನ ಅಶೋಕಪುರಂನಲ್ಲಿ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥಳಾಂತರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಒಟ್ಟಿನಲ್ಲಿ ಸುಲಭವಾಗಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಶ್ರೀಗಂಧದ ವಸ್ತು ಸಂಗ್ರಹಾಲಯವನ್ನು ಸ್ಥಳಾಂತರ ಮಾಡಲಾಗುವುದು ಎಂದರು. ಸೋಮಶೇಖರ್ ಅವರು ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿರುವುದು ಸಂತಸದ ವಿಷಯವಾಗಿದೆ, ಕಳೆದ ಬಾರಿ ಭೇಟಿಯ ವೇಳೆ ಮೈಸೂರು ಅರಮನೆಯಲ್ಲಿ ವಸ್ತುಸಂಗ್ರಹಾಲಯವನ್ನು ತೆರೆಯುವ ಉದ್ದೇಶ ಹೊಂದಿದ್ದಾಗಿ ತಿಳಿಸಿದ್ದೆ ಆದರೆ ಅಲ್ಲಿ ಕಟ್ಟಡದ ಕೊರತೆ ಇರುವುದರಿಂದ ಅರಮನೆ ಮೈದಾನದ ಸಮಿತಿಯವರು ಕಟ್ಟಡವನ್ನು ಕಟ್ಟಿಕೊಡುವ ಬಗ್ಗೆ ಹೇಳಿದ್ದರು ಎಂಬ ಮಾಹಿತಿಯನ್ನು ತಿಳಿಸಿದರು. ಇದೇ ವೇಳೆ ಮೈಸೂರು ಮೃಗಾಲಯದಲ್ಲೂ ಸ್ಥಳಾವಕಾಶ ಇರುವ ಬಗ್ಗೆ ಮಾಹಿತಿ ಬಂದಿದ್ದರಿಂದ ಅಲ್ಲೂ ಸಹ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದರು. ಬೆಲೆಬಾಳುವ ವಸ್ತುಗಳು ಇರುವುದರಿಂದ ಸುರಕ್ಷತೆಯನ್ನು ನೋಡಿಕೊಂಡು ಸೂಕ್ತ ಸ್ಥಳದಲ್ಲಿ ತೆರೆಯುವ ನಿರ್ಧಾರವನ್ನು ಅರಣ್ಯ ಇಲಾಖೆ ಮಾಡಲಿದೆ ಎಂದು ಅವರು ಹೇಳಿದರು.

ಶ್ರೀಗಂಧದ ವಸ್ತು ಸಂಗ್ರಹಾಲಯಕ್ಕೆ ಸರ್ಕಾರದಿಂದ ಪ್ರೋತ್ಸಾಹ ಕೊಡಲಾಗುತ್ತಿದೆ ಅಲ್ಲದೆ ಖಾಸಗಿಯಾಗಿ ಬೆಳೆಸಲು ಸಹ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಉತ್ತಮ ದರ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಶ್ರೀಗಂಧ ಬೆಳೆಯಬೇಕಾಗಿದೆ. ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಯಾರು ಬೇಕಾದರೂ ವೀಕ್ಷಣೆ ಮಾಡಬಹುದಾಗಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದರು. ಉದ್ಘಾಟನೆ ಬಳಿಕ ವಸ್ತುಸಂಗ್ರಹಾಲಯದಲ್ಲಿರುವ ಶ್ರೀಗಂಧದ ವಿವಿಧ ತಳಿಗಳು, ಬೇರುಗಳು, ಕಾಂಡಗಳು, ಪ್ರಭೇದಗಳು, ಅವುಗಳ ಉಪಯೋಗಗಳು, ವರ್ಗೀಕರಣದ ವಿವರಗಳು ಸೇರಿದಂತೆ ಶ್ರೀಗಂಧದ ಮರದಲ್ಲಿ ಏನೆಲ್ಲಾ ಔಷಧೀಯ ಗುಣಗಳಿವೆ ಹಾಗೂ ಅದರಿಂದ ಎಷ್ಟು ಲಾಭ ಗಳಿಸಬಹುದು ಎಂಬ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಇದೇ ವೇಳೆ ಶ್ರೀಗಂಧದಿಂದ ತಯಾರಿಸಿದ ವಿವಿಧ ಉತ್ಪನ್ನಗಳನ್ನು ಸಹ ಪ್ರದರ್ಶನಕ್ಕೆ ಇರಿಸಿರುವುದು ವಿಶೇಷ. ಮ್ಯೂಸಿಯಂನಲ್ಲಿ ಪ್ರೊಜೆಕ್ಟರ್‌ ಮೂಲಕ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ ಸಚಿವರು, ಶ್ರೀಗಂಧದ ಬೆಳೆಯಿಂದ ರೈತರು ಹೇಗೆಲ್ಲಾ ಲಾಭ ಗಳಿಸಬಹುದು, ಒಂದು ಮರದಿಂದ ಎಷ್ಟು ಆದಾಯ ಗಳಿಸಬಹುದು, ಶ್ರೀಗಂಧದ ಕೃಷಿ ಹೇಗೆ ಮಾಡಬೇಕು ಎಂಬ ವಿವರಣೆಯನ್ನು ನೋಡಿ, ರೈತರಿಗೆ ನಿಜಕ್ಕೂ ಇದು ಉಪಯುಕ್ತವಾಗಿದ್ದು, ಶ್ರೀಗಂಧದ ಮೂಲಕ ಲಾಭ ಪಡೆಯಬೇಕು ಎಂದು ಸಚಿವರು ಅಭಿಪ್ರಾಯ ಪಟ್ಟರು. ಸಚಿವರ ಮಾತಿನಂತೆ ರೈತರು ಶ್ರೀಗಂಧದ ಉಪಯೋಗವನ್ನು ಸರಿಯಾಗಿ ಪಡೆಯಬೇಕು.

Leave a Reply

Your email address will not be published. Required fields are marked *