ಪುನೀತ್ ರಾಜ್ ಕುಮಾರ್ ನಟಿಸಬೇಕಿದ್ದ ಈ ಸಿನಿಮಾಗಳು ಅರ್ಧಕ್ಕೆ ನಿಂತಿವೆ
ಪುನೀತ್ ಕೇವಲ ನಟ, ನಿರ್ಮಾಪಕ ಮಾತ್ರವಲ್ಲದೆ ಉತ್ತಮ ಗಾಯಕ ಕೂಡ ಹೌದು. ಕನ್ನಡದ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ 95ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಆದರೆ ಈಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುನೀತ್ ರಾಜ್ ಕುಮಾರ್ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದು ಕುಟುಂಬಸ್ಥರು, ಅಸಂಖ್ಯಾತ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.
ಕೇವಲ 46ನೇ ವಯಸ್ಸಿಗೆ ಅವರು ಹೃದಯಾಘಾತಕ್ಕೆ ಒಳಗಾಗುತ್ತಾರೆ ಎಂಬುದನ್ನು ಯಾರಿಯೂ ಊಹಿಸಿರಲಿಲ್ಲ. ಪುನೀತ್ ಅಪಾರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಮೃತಪಟ್ಟಿದ್ದರಿಂದ ಅನೇಕ ಸಿನಿಮಾ ಕೆಲಸಗಳು ಹಾಗೆಯೇ ಉಳಿದುಕೊಂಡಿವೆ. ಯಾವುದು ಆ ಸಿನಿಮಾಗಳು? ಎನ್ನುವುದನ್ನು ನಾವಿಲ್ಲಿ ನೋಡೋಣ.
ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಪವನ್ ಕುಮಾರ್ ಜೊತೆಯಾಗಿ ‘ದ್ವಿತ್ವ’ ಸಿನಿಮಾ ಮಾಡಬೆಕಿತ್ತು. ನಿರ್ದೇಶಕ ಪವನ್ ಕುಮಾರ್ ಅವರು ಸ್ಯಾಂಡಲ್ವುಡ್ನ ‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ಗೆ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂದಾಗಲೇ ಚಿತ್ರರಂಗದಲ್ಲಿ ಒಂದು ಹೊಸ ನಿರೀಕ್ಷೆ ಹುಟ್ಟಿತ್ತು. ಆ ಸಿನಿಮಾದ ವಿಶಿಷ್ಟ ಟೈಟಲ್ ‘ದ್ವಿತ್ವ’ ಕೂಡ ಸಾಕಷ್ಟು ಸದ್ದು ಮಾಡಿತು. ಈ ಬಗ್ಗೆ ವಿವರಿಸಿರುವ ನಿರ್ದೇಶಕ ಪವನ್ ಕುಮಾರ್, ‘ದ್ವಿತ್ವ ಸಿನಿಮಾದ ಕಥೆ ಯಂಗ್ ಲವ್ ಸ್ಟೋರಿಯಲ್ಲ. ಇದರ ಕಂಟೆಂಟ್ ಕೊಂಚ ಪ್ರಬುದ್ಧವಾಗಿದೆ.
ಅಂತಹ ಕಥೆಗೆ ಅಷ್ಟೇ ಪ್ರಬುದ್ಧವಾಗಿ ನಟಿಸುವ ಕಲಾವಿದರ ಅಗತ್ಯವಿರುತ್ತದೆ ಎಂಬ ಕಾರಣಕ್ಕೆ ಪುನೀತ್ ರಾಜಕುಮಾರ್ ಅವರನ್ನು ನಾಯಕನಾಗಿ ಆಯ್ಕೆ ಮಾಡಲಾಗಿತ್ತು. ಸೈಕಲಾಜಿಕಲ್ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್ ಕುಮಾರ್ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದರು. 2014ರಲ್ಲಿ ತೆರೆಗೆ ಬಂದ ಪುನೀತ್ ನಟನೆಯ ‘ಪವರ್ ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದು ಅವರ ಮೊದಲ ಹಾಗೂ ಕೊನೆಯ ಕನ್ನಡ ಚಿತ್ರ. ದ್ವಿತ್ವ ಚಿತ್ರದ ಮೂಲಕ ತ್ರಿಷಾ ಮತ್ತೆ ಕನ್ನಡಕ್ಕೆ ಬರಬೇಕಿತ್ತು.
ಇನ್ನು ಬಹದ್ದೂರ್, ಭರ್ಜರಿ, ಭರಾಟೆ ಸಿನಿಮಾ ನಿರ್ದೇಶನ ಮಾಡುವ ಮೂಲಕ ಸಾಕಷ್ಟು ಹೆಸರು ಮಾಡಿರುವ ಚೇತನ್ ಕುಮಾರ್ ಅವರು ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದರು. ಕ್ರಿಸ್ಮಸ್ಗೆ ಸಿನಿಮಾದ ಟೀಸರ್ ರಿಲೀಸ್ ಆಗಬೇಕಿತ್ತು. ಪುನೀತ್ ‘ಜೇಮ್ಸ್’ ಮತ್ತು ‘ದ್ವಿತ್ವ’ ಕೆಲಸಗಳಲ್ಲಿ ಬ್ಯುಸಿ ಆಗಿದ್ದರು. ಈ ಎರಡೂ ಸಿನಿಮಾಗಳ ಕೆಲಸಗಳು ಭರದಿಂದ ಸಾಗಿತ್ತು. ಇದಾದ ನಂತರ ಪುನೀತ್ ಅವರು ಜೇಕಬ್ ವರ್ಗೀಸ್ ಜತೆ ಮತ್ತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿತ್ತು.
ಪುನೀತ್ ರಾಜ್ಕುಮಾರ್ ಅವರು ಪಿಆರ್ಕೆ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಬಹಳ ಪ್ರೀತಿಯಿಂದ ಆರಂಭಿಸಿದ್ದರು. ಈ ಬ್ಯಾನರ್ ಅಡಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದ್ದರು. ಸಾಕಷ್ಟು ಸಿನಿಮಾಗಳನ್ನು ಪಿಆರ್ಕೆ ಬ್ಯಾನರ್ ನಿರ್ಮಾಣ ಮಾಡಿದೆ. ಆದರೆ, ಈವರೆಗೆ ಅವರು ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನಟಿಸಿರಲಿಲ್ಲ. ಈಗ ಇದಕ್ಕೆ ಕಾಲ ಕೂಡಿ ಬಂದಿದೆ ಎನ್ನಲಾಗಿತ್ತು. ಅದು ಈಡೇರುವ ಮೊದಲೇ ಪುನೀತ್ ಮೃತಪಟ್ಟಿದ್ದಾರೆ. ಪಿಆರ್ಕೆ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಮೂಡಿ ಬರುವ ಚಿತ್ರದಲ್ಲಿ ಪುನೀತ್ ನಟಿಸಬೇಕು ಎಂಬುದು ಅಭಿಮಾನಿಗಳ ಕನಸಾಗಿತ್ತು. ಅಷ್ಟೇ ಅಲ್ಲ, ಪುನೀತ್ ಕೂಡ ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು.
ಆದರೆ, ಅದು ಈವರೆಗೆ ಸಾಧ್ಯವಾಗಿರಲಿಲ್ಲ. ಈಗ ಈ ಕನಸು ನನಸಾಗುವ ಕಾಲ ಸನಿಹವಾಗಿದೆ ಎನ್ನುವ ಮಾತು ಕೇಳಿ ಬಂದಿತ್ತು. ‘ಪೃಥ್ವಿ’ ಸಿನಿಮಾದಲ್ಲಿ ಪುನೀತ್ ಹಾಗೂ ಜೇಕಬ್ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ರೀತಿಯ ಕಥೆಯನ್ನು ಜೇಕಬ್ ಹೆಣೆದಿದ್ದರು. ಪುನೀತ್ ಚಿತ್ರಕ್ಕೆ ಹೀರೋ ಆಗಿದ್ದರು. ಪಿಎಆರ್ಕೆ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬರಬೇಕಿತ್ತು.