ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಿನಿಮಾದಲ್ಲಿ ಒಂದಿಷ್ಟು ಹಾಸ್ಯ ಇರುತ್ತದೆ. ಗಣೇಶ್ ಅವರ ಸಾಧನೆಯ ಹಿಂದೆ ನೋವಿನ ಕಥೆ ಇದೆ ಹಾಗಾದರೆ ಗಣೇಶ್ ಅವರ ಜೀವನ, ಸಿನಿ ಪ್ರಯಾಣದ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಲಕ್ ಎಂದರೆ ನಮ್ಮ ಪರಿಶ್ರಮದ ಇನ್ನೊಂದು ಅಡ್ಡ ಹೆಸರು, ಮನೆಯಲ್ಲಿ ಕುಳಿತುಕೊಂಡು ಲಕ್ ಬರುತ್ತದೆ ಎಂದರೆ ಬರುವುದು ಲಕ್ವಾ ಎಂಬ ಮಾತನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಹೇಳಿದ್ದಾರೆ. ನಗುಮುಖದ ಗಣೇಶ್ ಅವರು ಬಹಳ ನೋವನ್ನು, ಕಷ್ಟವನ್ನು ಅನುಭವಿಸಿದ್ದಾರೆ. ತೆರೆಮರೆಯ ಕಲಾವಿದನಾಗಿ, ಕಿರುತೆರೆಯ ಹಾಸ್ಯಗಾರನಾಗಿ ನಂತರ ಸೂಪರ್ ಸ್ಟಾರ್ ಆದರು. ನಟ ಹಾಗೂ ನಿರ್ಮಾಪಕರಾದ ಗಣೇಶ್ ಅವರು 1978, ಜುಲೈ 2 ರಂದು ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನಲ್ಲಿ ಕಿಶನ್ ಹಾಗೂ ಸುಲೋಚನಾ ದಂಪತಿಗಳಿಗೆ ಜನಿಸಿದರು. ಕಿಶನ್ ಅವರ ಮೂರು ಜನ ಮಕ್ಕಳಲ್ಲಿ ಗಣೇಶ್ ಅವರು ಹಿರಿಯ ಮಗನಾಗಿದ್ದಾರೆ. ಇವರಿಗೆ ಇಬ್ಬರು ತಮ್ಮಂದಿರಿದ್ದಾರೆ. ಗಣೇಶ್ ಅವರ ತಂದೆ ನೇಪಾಳಿ ಮೂಲದವರಾಗಿದ್ದು, ತಾಯಿ ಒಕ್ಕಲಿಗರು. ಚಿಕ್ಕಂದಿನಿಂದ ಚುರುಕು ಸ್ವಭಾವದವರಾಗಿದ್ದ ಗಣೇಶ್ ಅವರು ಪ್ರಾರಂಭಿಕ ಶಿಕ್ಷಣವನ್ನು ಬೆಂಗಳೂರಿನ ನೆಲಮಂಗಲದಲ್ಲಿ ಪಡೆದರು. ಗಣೇಶ್ ಅವರು ಶಾಲಾ ದಿನಗಳಲ್ಲಿ ತರಲೆ ಸ್ವಭಾವದವರಾಗಿದ್ದರು ಹಾಗೆಯೇ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಗಣೇಶ್ ಅವರಿಗೆ ಅಭಿನಯದಲ್ಲಿ ಆಸಕ್ತಿ ಇದ್ದು ಕಾಲೇಜು ದಿನಗಳಲ್ಲಿ ಡ್ರಾಮಾಗಳಲ್ಲಿ, ಹಲವು ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅವರು ಡಿಪ್ಲೋಮಾ ಓದಿದ್ದಾರೆ ಆದರೆ ನಟನೆಯಲ್ಲಿ ಅವರಿಗೆ ಹೆಚ್ಚು ಆಸಕ್ತಿ ಇರುವುದರಿಂದ ನಟನೆಯನ್ನು ಕಲಿತರು. ಅವರು ಹಲವು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದರು. ಯದ್ವಾತದ್ವಾ, ಪಾಪ ಪಾಂಡು ಮುಂತಾದ ಹಾಸ್ಯ ಪ್ರಧಾನ ಕೌಟುಂಬಿಕ ಧಾರವಾಹಿಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದರು. ಅವರು ಉತ್ತಮವಾಗಿ ಮಿಮಿಕ್ರಿ ಕೂಡ ಮಾಡುತ್ತಿದ್ದರು. ಅಹಂ ಪ್ರೆಮಾಸ್ಮಿ, ಅಮೃತಧಾರೆ ಮುಂತಾದ ಸಿನಿಮಾಗಳಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡರು ನಂತರ ಉದಯ ಚಾನೆಲ್ ನಲ್ಲಿ ಕಾಮಿಡಿ ಟೈಮ್ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿ ಜನರ ಮನಸ್ಸನ್ನು ಗೆದ್ದರು. ಚೆಲ್ಲಾಟ ಸಿನಿಮಾ ಅವರ ಮೊದಲ ನಾಯಕ ನಟನಾಗಿ ಅಭಿನಯಿಸಿದ ಚಿತ್ರವಾಗಿದೆ ಆದರೆ ಈ ಸಮಯದಲ್ಲಿ ಹಲವು ಟೀಕೆಗಳಿಗೆ ಗಣೇಶ್ ಅವರು ಒಳಗಾದರು, ಹಾಸ್ಯ ಕಲಾವಿದನಿಗೆ ಇಷ್ಟೊಂದು ವೈಭವವೇಕೆ ಮುಂತಾದ ಟೀಕೆಗಳನ್ನು ಗಣೇಶ್ ಅವರು ಕೇಳಬೇಕಾಯಿತು.

ನಂತರ 2006 ರಲ್ಲಿ ತೆರೆಕಂಡ ಮುಂಗಾರುಮಳೆ ಸಿನಿಮಾ ಭಾರಿ ಹಿಟ್ ಆಯಿತು. ಗಣೇಶ್ ಹಾಗೂ ಪೂಜಾಗಾಂಧಿ ಅವರ ಅಭಿನಯದಲ್ಲಿ ಮೂಡಿ ಬಂದ ಮುಂಗಾರುಮಳೆ ಸಿನಿಮಾ ಜನಪ್ರಿಯವಾಯಿತು. ಈ ಚಿತ್ರ ಶತದಿನೋತ್ಸವವನ್ನು ಮೀರಿ ಪ್ರಚಾರ ಮಾಡಿತು ನಂತರ ಗಣೇಶ್ ಅವರು ರಾಜ್ಯಾದ್ಯಂತ ಮನೆಮಾತಾದರು. ನಂತರ ಗಾಳಿಪಟ ಚಿತ್ರದಲ್ಲಿ ಅಭಿನಯಿಸಿದರು, ಅವರ ಅಭಿನಯಕ್ಕೆ ಫಿಲಂ ಫೇರ್ ಅವಾರ್ಡ್ ದೊರೆಯಿತು. ಕೃಷ್ಣ, ಚೆಲುವಿನ ಚಿತ್ತಾರ, ಚಮಕ್, ಮಳೆಯಲಿ ಜೊತೆಯಲಿ, ಅರಮನೆ, ಬೊಂಬಾಟ್ ಹೀಗೆ ಹಲವು ಸಿನಿಮಾಗಳಲ್ಲಿ ಗಣೇಶ್ ಅವರು ನಟಿಸಿದರು. ಕಷ್ಟ ಅನುಭವಿಸಿ ಬಂದ ನಟರಾದ ಗಣೇಶ್ ಅವರು ದೊಡ್ಡಮಟ್ಟದಲ್ಲಿ ಬೆಳೆದರು ಆದರೆ ಅವರು ಕಷ್ಟದ ಪಾಠವನ್ನು ಮರೆತಿಲ್ಲ. ಗಣೇಶ್ ಅವರು ಶ್ರದ್ಧೆಯಿಂದ ಕೆಲಸ ಮಾಡುತ್ತಾರೆ ಎಂದು ಅವರನ್ನು ಹತ್ತಿರದಿಂದ ನೋಡಿದವರು ಹೇಳುತ್ತಾರೆ.

ಗಣೇಶ್ ಅವರು ತಮ್ಮದೇ ಆದ ಗೋಲ್ಡನ್ ಮೂವೀಸ್ ಎಂಬ ನಿರ್ಮಾಣ ಸಂಸ್ಥೆ ಹೊಂದಿದ್ದು ಅವರ ನಿರ್ದೇಶನದಲ್ಲಿ ಕೂಲ್ ಎಂಬ ಸಿನಿಮಾ ಬಿಡುಗಡೆಯಾಯಿತು. ಗಣೇಶ್ ಅವರು 30ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಒಂದು ಕಾಲದಲ್ಲಿ ತಮ್ಮ ಊರಿನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬರಲು ದುಡ್ಡಿಲ್ಲದೆ ನಡೆದುಕೊಂಡು ಬಂದಿದ್ದರು ಇಂದು ಒಂದು ಚಿತ್ರಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಸಾಧನೆ ಮಾಡಿದ್ದಾರೆ ಅವರ ಜೀವನ ಎಲ್ಲರಿಗೂ ಮಾದರಿಯಾಗಿದೆ.

Leave a Reply

Your email address will not be published. Required fields are marked *