ಇದೊಂದು ವಿಸ್ಮಯದ ಗುಹೆಯ ದೇವಾಲಯ ಆಗಿದೆ. ಇಲ್ಲಿ ಕಾಶೀಕ್ಷೇತ್ರ ನಿವಾಸಿ ವಿಶ್ವೇಶ್ವರ ದೇವರೇ ರಾಕ್ಷಸನೊಬ್ಬನನ್ನು ಸಂಹರಿಸಲೆಂದು ಕಾಶೀ ಕ್ಷೇತ್ರದಿಂದ ಆಗಮಿಸಿ ನೆಲೆನಿಂತಿದ್ದಾರೆ ಎಂಬ ಪ್ರಸಂಗ ಇದೆ. ಈ ಉದ್ಭವ ಲಿಂಗವನ್ನು ದರ್ಶನ ಮಾಡಿದರೆ ಕಾಶಿಗೆ ಹೋದಷ್ಟೇ ಪುಣ್ಯ ಲಭಿಸುತ್ತದೆ. ಈ ದೇವಾಲಯದ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ನಮ್ಮ ಭರತ ಖಂಡದಲ್ಲಿ 12 ಜ್ಯೋತಿರ್ಲಿಂಗಗಳು ಇವೆ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಇವುಗಳ ನಂತರ ಉಪ ಜ್ಯೋತಿರ್ಲಿಂಗಗಳೂ ಸಹ ನಮ್ಮ ದೇಶದಲ್ಲಿ ಇವೆ. ಈ ಸಾಲಿಗೆ ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಿಂದ 5 ಕಿಲೋಮೀಟರ್ ದೂರದಲ್ಲಿ ಇರುವ ಕಾಲಕಾಲೇಷ್ವರ ದೇವಾಲಯವೂ ಒಂದು. ಸುಮಾರು 300ಅಡಿ ಎತ್ತರದ ಗುಡ್ಡದ ಮೇಲೆ ಇರುವ ದೇವಾಲಯ ಇದಾಗಿದೆ. ಇದು ಒಂದು ಪುರಾತನ ಪುಣ್ಯಕ್ಷೇತ್ರವಾಗಿದೆ. ಇದನ್ನು ‘ದಕ್ಷಿಣದ ಕಾಶಿ’ ಎಂದು ಕರೆಯುತ್ತಾರೆ. ಗಜಾಸುರ ಎಂಬ ಅಸುರನ ಸಂಹಾರಕ್ಕಾಗಿ ಕಾಶೀ ಕ್ಷೇತ್ರವನ್ನು ಬಿಟ್ಟು ಶಿವನು ಇಲ್ಲಿಗೆ ಬಂದು ಅಸುರನನ್ನು ಸಂಹಾರ ಮಾಡಿದ ನಂತರ ಭಕ್ತರ ಇಷ್ಟಾರ್ಥದಂತೆ ಸ್ವಯಂ ಲಿಂಗವಾಗಿ ಇಲ್ಲಿ ನೆಲೆಸಿದ್ದಾನೆ. ಈ ಲಿಂಗವನ್ನು ಕಾಲಕಾಲೇಶ್ವರ ಎಂದು ಕರೆಯಲಾಗುತ್ತದೆ.

ಈ ದೇವರು ಉತ್ತರ ಕರ್ನಾಟಕದ ಅಸಂಖ್ಯಾತ ಭಕ್ತರ ಕುಲ ದೈವರಾಗಿದ್ದಾರೆ. ಈ ದೇವರು ನೆಲೆಸಿರುವ ಏಕಶಿಲೆಯ ಗುಡ್ಡವನ್ನು ಕಲಕಪ್ಪನ ಗುಡ್ಡ ಎಂದೇ ಕರೆಯಲಾಗುತ್ತದೆ. ಸುಮಾರು 200 ಮೆಟ್ಟಿಲುಗಳನ್ನು ಹತ್ತಿದರೆ ಗವಿಯೊಂದು ದೊರಕುತ್ತದೆ. ಇದರೊಳಗೆ ವಿಶಾಲವಾದ ಗರ್ಭಗುಡಿ ಇದೆ. ಇದರ ಹೊರಭಾಗದಲ್ಲಿ ಸಣ್ಣ ಕೊಳವಿದ್ದು ಅದನ್ನು ಅಂತರಗಂಗೆ ಎಂದು ಕರೆಯಲಾಗುತ್ತದೆ. ಈ ಕೊಳಕ್ಕೆ ಬೆಟ್ಟದ ಮೇಲಿನ ಆಲದಮರದ ಬೇರಿನಿಂದ ನೀರು ಜಿನುಗುತ್ತದೆ. ಈ ನೀರಿನ ಮೂಲ ಯಾರಿಗೂ ತಿಳಿದಿಲ್ಲ. ಈ ನೀರು ಬೇಸಿಗೆಯಲ್ಲೂ ಬತ್ತುವುದಿಲ್ಲ. ಇದರ ನೀರನ್ನು ತೀರ್ಥ ಸಮಾನವೆಂದು ಸ್ವೀಕರಿಸುತ್ತಾರೆ.

ಇಲ್ಲಿ ಯುಗಾದಿ ಹಬ್ಬದಲ್ಲಿ ಚಮತ್ಕಾರ ನಡೆಯುತ್ತದೆ. ಪ್ರತೀ ವರ್ಷವೂ ಚಾಂದ್ರಮಾನ ಯುಗಾದಿಯಂದು ಸೂರ್ಯೋದಯದ ನಂತರ ದೇವಾಲಯದ ಅಂತರಗಂಗೆಯ ಪಕ್ಕ ಪೊಟವೆಯೊಂದರಿಂದ ತನ್ನಿಂತಾನೇ ನೀರು ಹರಿದು ಬರುತ್ತದೆ. ಈ ನೀರಿನ ಆಧಾರದ ಮೇಲೆ ಆಯಾ ವರ್ಷ ರೈತರು ಮಳೆ ಬೆಳೆಯನ್ನು ಅಂದಾಜಿಸುತ್ತಾರೆ. ನೀರು ಯಥೇಚ್ಛವಾಗಿ ಆಗಮಿಸಿದರೆ ಆ ವರ್ಷ ಮಳೆ, ಬೆಳೆ ಚೆನ್ನಾಗಿ ಆಗುತ್ತದೆ ಎಂದೂ ನೀರು ಕಡಿಮೆ ಬಂದರೆ ಸಾಧಾರಣ ಮಳೆ, ಬೆಳೆಯಾಗುತ್ತದೆ ಎನ್ನುವುದು ಇಲ್ಲಿನ ವಾಡಿಕೆಯಾಗಿದೆ. ಹಾಗೆಯೇ ಯುಗಾದಿ ಹಬ್ಬದ ಹಿಂದಿನ ದಿನ ರಾತ್ರಿ ದೇಗುಲದ ಅರ್ಚಕರು ಸುಣ್ಣಬಣ್ಣ, ಬ್ರಶ್ ನ್ನು ದೇಗುಲದ ಒಳಗೆ ಇಟ್ಟು ಬೀಗ ಹಾಕುತ್ತಾರೆ. ಮರುದಿನ ದೇವಸ್ಥಾನದ ಒಳಭಾಗ ಹಾಗೂ ಹೊರಭಾಗ ಬಿಳಿಬಣ್ಣದಿಂದ ಅಲಂಕೃತಗೊಂಡಿರುತ್ತದೆ. ನೀವೂ ಸಹ ಇಲ್ಲಿ ಆಗಮಿಸಿ ಈ ದೇವಾಲಯದ ಪವಾಡವನ್ನು ನೋಡಿ.

Leave a Reply

Your email address will not be published. Required fields are marked *