ಪುರಾತನ ಔಷಧೀಯ ಸಸ್ಯವಾಗಿರುವ ಅಶ್ವಗಂಧ ದೇಹದ ಒತ್ತಡ ನಿರ್ವಹಿಸಲು ಪರಿಣಾಮಕಾರಿಯಾಗಿರುವ ಗಿಡಮೂಲಿಕೆಯಾಗಿದೆ. ಒತ್ತಡ ಹಾಗೂ ಆತಂಕ ನಿವಾರಕವಾಗಿರುವ ಈ ಗಿಡಮೂಲಿಕೆ. ದಿನನಿತ್ಯದ ಆಹಾರದಲ್ಲಿ ಸೇರ್ಪಡೆಗೊಳಿಸಿದರೆ ಅನೇಕ ರೀತಿಯ ಖಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ. ಇದರ ಪುಡಿಯನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಬೇಕು. ಪುಡಿ ನೀರಿನಲ್ಲಿ ಅಷ್ಟು ಸುಲಭದಲ್ಲಿ ಕರಗುವುದಿಲ್ಲ. ಪುಡಿಯು ನೀರಿನಲ್ಲಿ ಚೆನ್ನಾಗಿ ಮಿಶ್ರಗೊಂಡ ನಂತರವೇ ಅದನ್ನು ಸೇವಿಸಬೇಕು. ಹಿರಿಯರಿಂದ ಹಿರೇಮದ್ದು ಎಂದು ಕರೆಸಿಕೊಂಡಿರುವ ಅಶ್ವಗಂಧ ಮನೆ ಮುಂದೆ, ಹಿತ್ತಲಲ್ಲಿ ಬೆಳೆಯಬಹುದಾದ ಮನೆಮದ್ದು. ಅಶ್ವಗಂಧದ ಎಲೆಗಳು ಹಂದಿಯ ಕಿವಿಯ ರೀತಿ ಇರುವುದರಿಂದ ವರಾಹಕರ್ಣಿ ಎಂದೂ ಹೆಸರಿದೆ.

ಕಣ್ಮರೆಯಾಗುತ್ತಿರುವ ಗಿಡಮೂಲಿಕೆಯಲ್ಲಿ ಒಂದಾಗಿರುವ ಅಶ್ವಗಂಧದ ಔಷಧೀಯ ಗುಣ ಹಿರಿದಾದದ್ದು. ಇದು ಸರ್ವರೋಗಕ್ಕೆ ಮನೆ ಮದ್ದು. ಇದರ ಬೇರು, ತೊಗಟೆ, ಬೀಜ ಹಾಗೂ ಹಣ್ಣುಗಳನ್ನು ಆಯುರ್ವೇದ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಕಫ, ಕೆಮ್ಮು, ನಿತ್ರಾಣ ಹಾಗೂ ಸ್ತ್ರೀಯರ ದೈಹಿಕ ಸಮಸ್ಯೆಗಳಿಗೆ ಅಶ್ವಗಂಧ ತತ್‌ಕ್ಷಣಕ್ಕೆ ಸಿಗುವ ಮನೆಮದ್ದು. ಇದರ ಎಲೆಗಳಲ್ಲಿ ಖನಿಜಾಂಶ ಹಾಗೂ ಕ್ಯಾಲ್ಸಿಯಂ ಹೇರಳವಾಗಿರುವುದರಿಂದ ಮೂಳೆಗಳಲ್ಲಿ ಟೂಳ್ಳು ಉಂಟಾಗದಂತೆ ತಡೆಯುತ್ತದೆ.

ಬ್ಯಾಕ್ಟಿರಿಯಾ ವಿರುದ್ಧ ಹೋರಾಡಲು ಹೆಚ್ಚು ಪರಿಣಾಮಕಾರಿಯಾಗಿರುವ ಅಶ್ವಗಂಧ, ಉರಿಯೂತ ನಿವಾರಕ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ. ನಿದ್ರಾ ಹೀನತೆ, ಕ್ಯಾನ್ಸರ್, ಸಂಧಿವಾತ, ಮಧುಮೇಹವನ್ನು ಹತೋಟಿಗೆ ತರಲು ಅಶ್ವಗಂಧದ ಬೇರಿನಿಂದ ತಯಾರಿಸಿದ ಚೂರ್ಣವನ್ನು ನಿರಂತರವಾಗಿ ಸೇವಿಸುವುದು ಒಳಿತು. ಇದು ಮಾನಸಿಕ ಖಿನ್ನತೆಯನ್ನು ದೂರ ಮಾಡಿ ನಮ್ಮ ನರಮಂಡಲವನ್ನು ಸದೃಢವಾಗಿರುವಂತೆ ಮಾಡುತ್ತದೆ.

ದೃಷ್ಟಿದೋಷ ನಿವಾರಣೆಗೆ ಅಶ್ವಗಂಧದ ಬೇರನ್ನು ನೆಲ್ಲಿಕಾಯಿ ರಸದಲ್ಲಿ ಕಲಸಿ, ತುಪ್ಪ ಮತ್ತು ಜೇನುತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿ ಸೇವಿಸಿದರೆ ದೃಷ್ಟಿ ದೋಷವನ್ನು ನಿವಾರಣೆ ಮಾಡಬಹುದು ಎನ್ನುತ್ತಾರೆ ಆಯುರ್ವೇದ ಪಂಡಿತರು. ಮಾನಸಿಕ ವೈಕಲ್ಯ ಮತ್ತು ಖಿನ್ನತೆ ದೂರ ಅಶ್ವಗಂಧದ ಚೂರ್ಣ, ಲೋದ್ರದ ಚಕ್ಕೆ ಮತ್ತು ನೆಲಗುಂಬಳದ ಗಡ್ಡೆಯನ್ನು ಸಮಭಾಗದಲ್ಲಿ ಸೇರಿಸಿ, ದಿನಕ್ಕೆ 2.50 ಗ್ರಾಂ ಅನ್ನು ಪ್ರತಿ ನಿತ್ಯ ಒಂದು ಲೋಟ ಹಾಲಿನೊಂದಿಗೆ ಸ್ತ್ರೀಯರು ಸೇವಿಸಿದರೆ ಅವರಿಗೆ ಕಾಡುವ ಮಾನಸಿಕ ವೈಕಲ್ಯ ಮತ್ತು ಖಿನ್ನತೆಯನ್ನು ದೂರ ಮಾಡಬಹುದು. ಲೈಂಗಿಕ ಸಮಸ್ಯೆಗೆ ಪರಿಹಾರ ಪುರುಷರಲ್ಲಿ ಕಾಡುವ ಲೈಂಗಿಕ ಸಮಸ್ಯೆಗಳಿಗೆ ಅಶ್ವಗಂಧವು ರಾಮಬಾಣವಾಗಿದೆ. ಇದರಲ್ಲಿರುವ ಔಷಧೀಯ ಗುಣಗಳು ಅನೇಕ ಸಮಸ್ಯೆಗಳಿಗೆ ನೈಸರ್ಗಿಕವಾದ ಪರಿಹಾರವನ್ನು ನೀಡುತ್ತವೆ.

ಅಶ್ವಗಂಧವು ಉಷ್ಣಕಾರಕಶಕ್ತಿಯನ್ನು ಹೊಂದಿದೆ. ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ಸೇವಿಸುತ್ತಾರೆ. ಇದು ಶರೀರಕ್ಕೆ ಬಲ ನೀಡುತ್ತದೆ. ಮಕ್ಕಳು ಮತ್ತು ಯುವಕರಿಗೆ ಹೆಚ್ಚು ಅಶ್ವಗಂಧವನ್ನು ನೀಡಲಾಗುತ್ತದೆ. 100 ಗ್ರಾಂ ಅಶ್ವಗಂಧ ಬೇರನ್ನು ಶುದ್ಧ ಮಾಡಿ ಹಾಲಿನಲ್ಲಿ ಬೇಯಿಸಿ, ಒಣಗಿಸಿ, ಚೂರ್ಣವನ್ನು ಮಾಡಿ ಗಾಜಿನ ಭರಣಿಯಲ್ಲಿಡಬೇಕು. ಅನಂತರ ದಿನದಲ್ಲಿ ಮೂರು ಬಾರಿ ಐದು ಗ್ರಾಂ ನಷ್ಟು ಸೇವಿಸಿದರೆ ನಿಶ್ಯಕ್ತಿ ನಿವಾರಣೆಯಾಗುತ್ತದೆ.

ದೇಹ ಮತ್ತು ನರಮಂಡಲದ ಪುನಃಶ್ಚೇತನಕ್ಕಾಗಿ ಸಮಪ್ರಮಾಣದಲ್ಲಿ ಅಶ್ವಗಂಧ, ಜೇನು, ಕಲ್ಲುಸಕ್ಕರೆ ಮತ್ತು ತುಪ್ಪಗಳನ್ನು ಮಿಶ್ರಣ ಮಾಡಿ ಇದರದಲ್ಲಿ ಪ್ರತಿದಿನ ರಾತ್ರಿ ಊಟದ ಬಳಿಕ ಅರ್ಧ ಚಮಚ ಸೇವಿಸಿ. ಪರ್ಯಾಯವಾಗಿ ಅಶ್ವಗಂಧ ಪುಡಿ ಮತ್ತು ತ್ರಿಬುಲಾ ಪುಡಿಯನ್ನು ಸಹಾ ಸೇವಿಸಬಹುದು. ಸೇವನೆಯ ಬಳಿಕ ಒಂದು ಲೋಟ ಬಿಸಿ ಹಾಲನ್ನು ಸೇವಿಸುವುದು ಅಗತ್ಯವಾಗಿದೆ. ಜೀರ್ಣಕ್ರಿಯೆಯಲ್ಲಿನ ತೊಂದರೆಗಳನ್ನು ನಿವಾರಿಸುತ್ತದೆ. ಅಜೀರ್ಣದ ಕಾರಣವಾಗಿ ಉದ್ಭವವಾಗಿರುವ ಹಲವು ತೊಂದರೆಗಳನ್ನು ಅಶ್ವಗಂಧ ನಿವಾರಿಸುತ್ತದೆ. ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸಿ ಜೀರ್ಣಕ್ರಿಯೆ ಸುಲಭವಾಗಿಸುವ ಮೂಲಕ ವಿವಿಧ ಅಜೀರ್ಣಸಂಬಂಧಿ ರೋಗಗಳಿಂದ ಕಾಪಾಡುತ್ತದೆ.

ಒತ್ತಡ ನಿವಾರಣೆಗೆ ಅತ್ಯುತ್ತಮ ಎಂದೇ ಹೆಸರಾಗಿರುವ ಅಶ್ವಗಂಧವನ್ನು ಹುಡಿ ಅಥವಾ ಮಾತ್ರೆಯ ರೂಪದಲ್ಲಿ ಸೇವಿಸುವುದು ಸಂಪ್ರದಾಯವಾಗಿದೆ. ಚಾಕೊಲೇಟ್, ಪಾಸ್ತಾದಂತಹ ಬೇರೆ ಬೇರೆ ಸಾಮಾನ್ಯ ಆಹಾರ ಹಾಗೂ ಪಾನೀಯ ಐಟಂಗಳೊಂದಿಗೆ ಬೆರೆಸಿ ಸೇವಿಸಬಹುದಾಗಿದೆ. ಇದಲ್ಲದೆ ಅಶ್ವಗಂಧವು 2 ಪ್ರಮುಖ ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ. ಇದು ಶಕ್ತಿ ಸಾಮರ್ಥ್ಯಗಳೊಂದಿಗೆ ರೋಗನಿರೋಧಕ ಅಂಶ ಬಲಪಡಿಸುತ್ತದೆ. ಇದರಿಂದ ದೇಹವು ನಿರಾಳಗೊಂಡು ಉತ್ತಮ ನಿದ್ರೆ ಬರುತ್ತದೆ.

Leave a Reply

Your email address will not be published. Required fields are marked *