ಕಂಪನಿ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ಅದಕ್ಕಿಂತ ಹೆಚ್ಚು ಲಾಭಗಳಿಸುತ್ತಿರುವ ಮಹಿಳೆ

0 1,234

ಉದ್ಯೋಗ ತ್ಯಜಿಸಿ ಅಣಬೆ ಕೃಷಿ ಮಾಡಿ ಪ್ರತಿದಿನ ಆದಾಯ ಗಳಿಸುತ್ತಿರುವ ವಿದ್ಯಾವಂತ ಮಹಿಳೆ.
ಕೋರೊನಾ ಸೂತಕ ಛಾಯೆಯಿಂದ ನಿರುದ್ಯೋಗದ ಸಮಸ್ಯೆ ಹೆಚ್ಚುತ್ತಿರುವುದ ಜೊತೆಗೆ ಸಣ್ಣ ಪ್ರಮಾಣದ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ, ಕೆಲಸ ಅರಸಿ ಪಟ್ಟಣ ಸೇರಿದ್ದವರೆಲ್ಲಾ ಗ್ರಾಮಗಳಿಗೆ ಮರಳಿ ಉದ್ಯೋಗ ಕಳೆದುಕೊಂಡು ಪರದಾಡುತ್ತಿದ್ದಾರೆ, ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸಣ್ಣದಾಗಿ ಆರಂಭಗೊಳ್ಳುವ ಈ ಅಣಬೆ ಬೇಸಾಯ ಬದುಕು ಕಟ್ಟಿಕೊಡುತ್ತಿದೆ.

ಅಣಬೆಯನ್ನು ಒಂದು ಆಹಾರ ಪದಾರ್ಥವಾಗಿ ಗುರುತಿಸಿ ಪ್ರಪಂಚದ ಅನೇಕ ಕಡೆ ಸೇರಿದಂತೆ  ಭಾರತದಲ್ಲಿಯೂ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಹೆಚ್ಚಿನ ಸಸಾರಜನಕವನ್ನು ಪೂರೈಸುವ ಅಣಬೆಯು ಒಂದು ಅಮೂಲ್ಯ ಆಹಾರವಾಗುತ್ತಿದೆ, ಅಣಬೆ ಶೀಲಿಂದ್ರ ಪ್ರಬೇಧಕ್ಕೆ ಸೇರಿದೆ.. ಸಾಮಾನ್ಯವಾಗಿ ಅಣಬೆಗಳನ್ನು ಹರಿತ್ತುಗಳಿಲ್ಲದ ಸಸ್ಯಗಳೆಂದೆ ಕರೆಯಲಾಗುತ್ತದೆ. ಕಾಂಡ, ಎಲೆ, ಹೂವು ಇಲ್ಲದ, ಕಾಯಿ ಬಿಡದ ಸಸ್ಯವಾಗಿದೆ. ಭೂರಹಿತ ಕಾರ್ಮಿಕರು, ನಿರುದ್ಯೋಗ ಯುವಕ ಯುವತಿಯರು ಮತ್ತು ಮಹಿಳೆಯರು ಅತಿ ಕಡಿಮೆ ಖರ್ಚಿನಲ್ಲಿ ಲಭ್ಯವಿರುವಷ್ಟೂ ಜಾಗದಲ್ಲಿಯೇ ಅಣಬೆ ಬೇಸಾಯದಿಂದ ಆದಾಯ ಪಡೆಯಬಹುದು.

ಸ್ವ ಉದ್ಯೋಗಗಳ ಪೈಕಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ತಂದು ಕೊಡುವ ಕೃಷಿ ಪ್ರಕಾರದಲ್ಲಿ ಅಣಬೆ ಬೇಸಾಯವು ಒಂದು. ಪೌಷ್ಟಿಕಾಂಶ  ಮತ್ತು ಜೀವ ಸತ್ವಗಳು ಹೇರಳವಾಗಿರುವ ಅಣಬೆ ಮಧುಮೇಹದಿಂದ ಬಳಲುತ್ತಿರುವವರಿಗೆ ಉತ್ತಮ ಆಹಾರ. ಅಣಬೆಯು ಅತ್ಯಂತ ಹೆಚ್ಚು ಪ್ರೋಟಿನ್ ಯುಕ್ತ ಪದಾರ್ಥ ಹಾಗೂ ಲೋ ಕ್ಯಾಲರಿ ಪದಾರ್ಥ ಮತ್ತು ಇದರಲ್ಲಿ ವಿಟಮಿನ್ ಡಿ ಹೇರಳವಾಗಿರುತ್ತದೆ.

ಅಣಬೆ ಉತ್ಪಾದಿಸಲು ಭತ್ತದ ಹುಲ್ಲು ತುಂಬಾ ಆವಶ್ಯವಿದೆ. ಆದ ಕಾರಣ ಭತ್ತದ ಹುಲ್ಲು ಲಭ್ಯವಿರುವಂತಹ ಪ್ರದೇಶದಲ್ಲಿ ಅಣಬೆ ಕೃಷಿಯನ್ನು ಉತ್ಪಾದನಾ ಚಟುವಟಿಕೆಯಾಗಿ ಕೈಗೊಳ್ಳಬಹುದು, ಆದರೆ ಈಗ ಈ ಅಣಬೆ ಕೃಷಿಯನ್ನು ಯಾವುದೇ ಪ್ರದೇಶದಲ್ಲಾದರು ಬೆಳೆಯಲು ಸಾದ್ಯವಗುವಂತಹ ತಂತ್ರಜ್ಞಾನವನ್ನು ತೋಟಗಾರಿಕ ಸಂಶೋಧನಾ ಮಂಡಳಿಯ ವಿಜ್ಞಾನಿಗಳು ರೂಪಿಸಿದ್ದಾರೆ.

ಅಣಬೆ ಭೂಮಿಯ ಮೇಲೆ ಕೆಲವೊಮ್ಮೆ ಭೂ ಒಳ ಪದರದಿಂದ ಹೊರ ಚಿಮ್ಮುವ ರಸವತ್ತಾದ ಶೀಲಿಂದ್ರದ ಹೂ ಗೋಧಿಶಗಳೆಂದು ಪರಿಗಣಿಸಬಹುದು. ಅಣಬೆಯಲ್ಲಿ ಖಾದ್ಯ ಅಣಬೆಗಳು, ಔಷಧಿ ಅಣಬೆಗಳು ಹಾಗೂ ವಿಷಾಣಬೆಗಳೆಂದು ಮೂರು ವಿಧಗಳಿವೆ. ಖಾದ್ಯ ಅಣಬೆಗಳು ಪೌಷ್ಟಿಕರ ಆಹಾರವನ್ನು ಹೊಂದಿರುತ್ತದೆ. ಅಣಬೆ ಬೆಳೆಯಲು ಕೃಷಿ ಭೂಮಿ ಬೇಕು ಅನ್ನೋ ನಿಯಮವಿಲ್ಲ, ನಿಮ್ಮ ಮನೆಯ ತಾರಸಿ ಮೇಲೆ ಬೆಳೆಯಬಹುದು ಅಥಾವ ನಿಮ್ಮ ಮನೆಯ ಹತ್ತಿರ ಇರುವ ಖಾಲಿ ಜಮೀನಿನಲ್ಲಿ ಶೆಡ್ ನಿರ್ಮಿಸಿ ಬೆಳೆಯಬಹುದು. ಆದರೆ ಅದರ ಸುತ್ತಮುತ್ತಲ ವಾತಾವರಣವನ್ನು ಸ್ವಚ್ಛವಾಗಿಡಬೇಕು.

ಚಂದ್ರಕಲ ನರಗನಹಳ್ಳಿ ಅವರು ಸಿಂಪಿ ಅಣಬೆ (oyster)ಬೇಸಾಯವನ್ನು ತಮ್ಮ ವಾತಾವರಣಕ್ಕೆ ಹೊಂದುತ್ತದೆಂದು ಮತ್ತು ಕಡಿಮೆ ವೆಚ್ಚದಲ್ಲಿ ಮಾಡಬಹುದೆಂದು ಈ ಅಣಬೆ ಕೃಷಿಯನ್ನು ತರಬೇತಿ ಪಡೆದು ಶುರು ಮಾಡಿದರು. ಇದನ್ನು ಭತ್ತದ ಹುಲ್ಲಿನಿಂದ ಅಥವಾ ಕಬ್ಬಿನ ಜಲ್ಲೆಯಿಂದ ಅಥವಾ ರಾಗಿಯ ಹುಲ್ಲಿನ ಸಹಾಯದಿಂದ ಕೂಡ ತಯಾರಿಸಬಹುದು. ಒಣ ಭತ್ತದ ಹುಲ್ಲನ್ನು 2 ರಿಂದ 3 ಇಂಚಿನಷ್ಟು ಚಿಕ್ಕ ತುಂಡುಗಳಾಗಿ ಕತ್ತರಿಸಿ ಈರುಳ್ಳಿ ಚೀಲಕ್ಕೆ ತುಂಬಿಸಿ ಕುದಿಸಬೇಕು.

ನಂತರ ಅದನ್ನು ಬೇಯಿಸಿ ನೆನಸಿ ನೆರಳಿನಲ್ಲಿ ಒಣಗಿಸಬೇಕು. ಈ ರೀತಿಯಾಗಿ ಒಣಗಿಸಿದ ಹುಲ್ಲನ್ನು ಪಾಲಿಥಿನ್ ಚೀಲದಲ್ಲಿ ಪದರ ಪದರವಾಗಿ ಹುಲ್ಲನ್ನು ತುಂಬಿ ಬೀಜವನ್ನು ಸುತ್ತಲೂ ಹಾಕಿ ನಂತರ ಕೊನೆಯದಾಗಿ ಬೀಜಗಳನ್ನು ಮೇಲ್ಪದರಿನ ಮೇಲೆ ಹರಡಿ ಗಾಳಿ ಹೋಗದಂತೆ ಚೀಲದ ಬಾಯಿಯನ್ನು ದಾರದಿಂದ ಕಟ್ಟಬೇಕು, ಮತ್ತು 12 ರಿಂದ 15 ರಂಧ್ರಗಳನ್ನು ಮಾಡಿ ಅದಕ್ಕೆ ಹತ್ತಿ ಹಾಕಿ 20 ದಿನಗಳ ಕಾಲ ಕತ್ತಲ ಕೋಣೆಯಲ್ಲಿ ಇಡಬೇಕು. ಕೊಠಡಿಯ ತಾಪಮಾನ 25 ರಿಂದ 30 ಡಿ,ಸೆ ಮತ್ತು 85 ರಿಂದ 90 ಡಿ,ಸೆ ನಷ್ಟು ತೇವಾಂಶ ಇರುವಂತೆ ನೋಡಿಕೊಳ್ಳಬೇಕು.

ಈ ಅವಧಿಯಲ್ಲಿ ಶೀಲಿಂದ್ರವು ಹುಲ್ಲಿನ ಮೇಲೆ ಹತ್ತಿಯಂತೆ ಬೆಳೆದಿರುತ್ತದೆ. ಇದನ್ನು 25 ದಿನಗಳ ನಂತರ ಚೀಲವನ್ನು ಕತ್ತರಿಸಿ ತೆಗೆದು ಹುಲ್ಲಿನ ಮುದ್ದೆಯ ಮೇಲೆ ಪ್ರತಿದಿನ 2 – 3 ಬಾರಿ ತಣ್ಣೀರನ್ನು ಚುಮುಕಿಸಬೇಕು. ಪ್ಯಾಕಿಂಗ್ ಮಾಡುವಾಗ ಕೈಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹುಲ್ಲನ್ನು ಪದರು ಪದರಾಗಿ ಮಾಡಿ ಪ್ಯಾಕ್ ಮಾಡಬೇಕು. ಇದರಲ್ಲಿ ಮಾರ್ಕೆಟಿಂಗ್ ಕೂಡ ತುಂಬಾ ಅವಶ್ಯಕವೆಂದು ಚಂದ್ರಕಲ ನರಗನಹಳ್ಳಿ ಅವರು ಅಣಬೆ ಬೇಸಾಯದ ಬಗ್ಗೆ ಸುವಿಸ್ತಾರವಾಗಿ ತಿಳಿಸಿ ಕೊಟ್ಟಿದ್ದಾರೆ.

Leave A Reply

Your email address will not be published.