ಗ್ರಹಗತಿಗಳು ಬದಲಾದಂತೆಲ್ಲ ಮನುಷ್ಯನ ಜೀವನದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ. ಇವು ಕೆಲವೊಮ್ಮೆ ಶುಭ ಸಂದೇಶಗಳನ್ನು ತರಬಹುದು. ಇನ್ನೂ ಕೆಲವೊಮ್ಮೆ ಸಮಸ್ಯೆಗಳನ್ನು ಕಷ್ಟದ ದಿನಗಳನ್ನು ತರಬಹುದು. ಮುಂದಿನ ವಾರ ದ್ವಾದಶಿ ರಾಶಿಗಳ ಭವಿಷ್ಯವೂ ಬದಲಾಗುತ್ತದೆ. ಗ್ರಹಗಳ ಸ್ಥಾನಪಲ್ಲಟದಿಂದಾಗಿ ಜೀವನದಲ್ಲಿ ಕೆಲ ಏಳು ಬೀಳುಗಳಾಗುವುದು ಸಹಜ ಪ್ರಕ್ರಿಯೆಯಾಗಿದೆ. ಮತ್ತೊಂದು ವಿಚಾರವೆಂದರೆ ಗ್ರಹಗತಿಗಳ ಬದಲಾವಣೆಯಿಂದಾಗಿ ಮನುಷ್ಯನ ಆತ್ಮವಿಶ್ವಾಸ ಕೊರತೆ, ಚಿಂತೆ, ಹಾಗೂ ಗೊಂದಲಗಳಿಗೂ ಕಾರಣವಾಗಬಹುದು. ಕೆಲ ರಾಶಿ ಚಕ್ರಗಳಿಗೆ ಉತ್ತಮ ಸಂದೇಶವನ್ನು ನೀಡಿದರೆ ಇನ್ನೂ ಕೆಲ ರಾಶಿ ಚಕ್ರಗಳ ಮೇಲೆ ಕೆಲ ವಿಚಾರದಲ್ಲಿ ಕೆಟ್ಟ ಪರಿಣಾಮಗಳು ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಯಾವ ರಾಶಿಯವರ ಜೀವನದಲ್ಲಿ ಏ.17ರಿಂದ ಏ.23ರವರೆಗೆ ಉತ್ತಮ ಲಾಭ ಪಡೆಯಲಿದ್ದಾರೆ. ಯಾವ ರಾಶಿಯವರು ದುರಾದೃಷ್ಟ ಹೊಂದಿದ್ದಾರೆ ಎಂಬುದನ್ನು ನೋಡೋಣ.

ಮೇಷ ಕೆಲವರೊಂದಿಗೆ ಅತಿಯಾಗಿ ಸ್ನೇಹ ಸಂಬಂಧ ವೃದ್ಧಿಸುವ ಸಾಧ್ಯತೆ ಇದೆ. ವ್ಯವಹಾರಗಳಲ್ಲಿ ಸಂಬಂಧ ಹಳಸದಂತೆ ಎಚ್ಚರವಹಿಸಿರಿ. ವಾಹನ ಚಾಲನೆ ವೇಳೆ ಎಚ್ಚರ ಇರಲಿ. ಕೆಲವರು ಪಿತ್ರಾರ್ಜಿತ ಆಸ್ತಿಗಾಗಿ ನ್ಯಾಯಾಂಗದ ಮೊರೆ ಹೋಗಬೇಕಾಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳುತ್ತವೆ. ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳು ಉಲ್ಬಣಗೊಳ್ಳಬಹುದು. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಎದುರಾಗಬಹುದು. ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಜಮೀನು ಕೊಳ್ಳುವ ವಿಚಾರದಲ್ಲಿ ಕುಟುಂಬದಲ್ಲಿ ಒಗ್ಗಟ್ಟಿನ ಕೊರತೆಯನ್ನು ಕಾಣಬೇಕಾದೀತು. ಕಣ್ಣಿನ ಸಮಸ್ಯೆ ಇರುವವರು ಚಿಕಿತ್ಸೆ ಪಡೆಯುವುದು ಉತ್ತಮ.

ವೃಷಭ ನಿಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಣ ಸಂಪಾದಿಸುವವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಿರಿ. ರಾಜಕಾರಣಿಗಳು ಅವರ ಬಾಲ ಬುಡುಕರನ್ನು ದೂರವಿಡುವುದು ಬಹಳ ಉತ್ತಮ. ಕಳೆದುಹೋದ ದಿನಗಳ ಬಗ್ಗೆ ಬಹಳ ಚಿಂತಿಸುವುದು ಅಷ್ಟು ಸರಿಯಲ್ಲ. ಯಾವುದೇ ಕೆಲಸಗಳಲ್ಲಿ ಅತಿ ಆತುರ ತೋರಿ ಗಂಡಾಂತರಕ್ಕೆ ಸಿಲುಕಿಕೊಳ್ಳಬೇಡಿರಿ. ವಜ್ರದ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹೆಚ್ಚಳವಾಗಲಿದೆ. ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಸ್ಥಾನಮಾನ ಸಿಗುವ ಸಾಧ್ಯತೆ ಇದೆ. ವಿದೇಶಿ ಕಂಪನಿಗಳ ಸಂಪರ್ಕದಿಂದಾಗಿ ನಿಮ್ಮ ವ್ಯವಹಾರಗಳು ವಿಸ್ತಾರಗೊಳ್ಳುತ್ತವೆ. ಕೃಷಿ ಮಾಡುವಾಗ ನೂತನ ವಿಧಾನವನ್ನು ಬಳಸಿಕೊಳ್ಳುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.

ಮಿಥುನ ಅನಿವಾರ್ಯವಲ್ಲದ ಕೆಲಸಗಳನ್ನು ಸ್ವಲ್ಪಮಟ್ಟಿಗೆ ಮುಂದೂಡುವುದು ಉತ್ತಮ. ವ್ಯಾಪಾರ ವ್ಯವಹಾರಗಳಲ್ಲಿನ ಆಗುಹೋಗುಗಳ ಬಗ್ಗೆ ಸರಿಯಾಗಿ ವಿಚಾರಣೆ ಮಾಡಿರಿ. ಅಧ್ಯಯನಕ್ಕೆ ಉತ್ತೇಜನ ಸಿಕ್ಕು ಉತ್ತಮ ವಿದ್ಯಾಲಯಗಳಲ್ಲಿ ಪ್ರವೇಶ ದೊರೆಯುತ್ತದೆ. ನಿಮ್ಮ ಸಂಗಾತಿಯ ಸಲಹೆಗಳು ನಿಮಗೆ ಬಹಳ ಪ್ರಯೋಜನಕಾರಿಯಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ನೀರಿನಿಂದ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗುವ ಸಾಧ್ಯತೆಯಿದೆ. ವ್ಯಾಪಾರ ಉದ್ಯಮದಲ್ಲಿ ಸ್ವಲ್ಪಮಟ್ಟಿನ ಪ್ರಗತಿಯನ್ನು ಕಾಣಬಹುದು. ಸರ್ಕಾರಿ ಸಂಸ್ಥೆಗಳಿಗೆ ಆಹಾರ ಮತ್ತು ಇತರೆ ವಸ್ತುಗಳನ್ನು ಪೂರೈಕೆ ಮಾಡುವವರಿಗೆ ಹೆಚ್ಚಿನ ಪೂರೈಕೆಗಾಗಿ ಆದೇಶಗಳು ಬರಬಹುದು.

ಕಟಕ ನಿಮ್ಮ ವಿರುದ್ಧ ನಿಮ್ಮ ಸಹೋದ್ಯೋಗಿಗಳಿಂದ ಸಣ್ಣ ಪಿತೂರಿಯೊಂದು ರೂಪುಗೊಳ್ಳುವ ಸಾಧ್ಯತೆ ಇದೆ. ಆ ಬಗ್ಗೆ ಉದಾಸೀನದಿಂದ ಇರುವುದು ಬಹಳ ಒಳ್ಳೆಯದು. ಮಿತ್ರರೊಡನೆ ಕೂಡಿ ಮಾಡುವ ಹಣಕಾಸಿನ ವ್ಯವಹಾರಗಳಲ್ಲಿ ಹೆಚ್ಚು ಜಾಗೃತರಾಗಿರುವುದು ಒಳ್ಳೆಯದು. ಅನಿರೀಕ್ಷಿತವಾಗಿ ಪರಿಚಯವಾದ ವ್ಯಕ್ತಿಯೊಬ್ಬರಿಂದ ಆಧ್ಯಾತ್ಮಿಕ ಸಲಹೆಗಳನ್ನು ಪಡೆಯುವಿರಿ. ಮಕ್ಕಳ ಗುಣ, ನಡತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರಿ. ಸಂಸಾರ ಅಥವಾ ಕುಟುಂಬದಲ್ಲಿ ಜೋರಾದ ಮಾತುಗಳು ನಡೆಯುವ ಸಾಧ್ಯತೆ ಇದೆ. ಶಾಂತಿಯಿಂದ ಪರಿಹರಿಸಿಕೊಳ್ಳುವುದು ಒಳ್ಳೆಯದು. ತಂದೆಯಿಂದ ಧನಸಹಾಯವನ್ನು ನಿರೀಕ್ಷಿಸಬಹುದು. ಉತ್ತಮ ಫಲಿತಾಂಶಕ್ಕಾಗಿ ವಿದ್ಯಾರ್ಥಿಗಳು ಹೆಚ್ಚು ಶ್ರಮ ವಹಿಸಬೇಕಾದ ಅಗತ್ಯವಿದೆ. ಮಹಿಳೆಯರು ಅತಿಯಾದ ಭಾವೋದ್ವೇಗಕ್ಕೆ ಒಳಗಾಗುವುದು ಬೇಡ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ಸಿಂಹ ದೀರ್ಘಕಾಲೀನ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಹೊಸ ಆಶಾಕಿರಣವೊಂದು ಗೋಚರಿಸುತ್ತದೆ. ಕೃಷಿಕರ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಮಟ್ಟಿನ ಏರಿಕೆಯನ್ನು ಕಾಣಬಹುದು. ಕೆಲವರಿಗೆ ಬಿಡುವಿಲ್ಲದ ಕೆಲಸಗಳಿಂದ ಆಕ್ರೋಶ ಹೆಚ್ಚಾಗುವ ಸಾಧ್ಯತೆ ಇದೆ. ಸ್ತ್ರೀಯರಿಂದ ಹಣದ ವಿಚಾರದಲ್ಲಿ ಮೋಸವಾಗುವ ಸಾಧ್ಯತೆಗಳಿವೆ ಎಚ್ಚರವಹಿಸಿರಿ. ಹಿತಶತ್ರುಗಳ ಕಾಟವು ಬೇಸರ ತರಿಸುತ್ತದೆ. ಈ ಹಿಂದೆ ಸಂಗ್ರಹಿಸಲ್ಪಟ್ಟ ವಸ್ತುಗಳು ಹೆಚ್ಚಿನ ಬೆಲೆಗೆ ಮಾರಾಟವಾಗಿ ಆನಂದ ತರುತ್ತದೆ. ಕೆಲವರಿಗೆ ಪಿತ್ರಾರ್ಜಿತ ಆಸ್ತಿ ದೊರೆಯುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕ ಸ್ಥಿತಿಯು ಸಾಧಾರಣವಾಗಿ ಇರುತ್ತದೆ. ಅಪರಿಚಿತ ವ್ಯಕ್ತಿಗಳ ಜೊತೆ ಯಾವುದೇ ವ್ಯವಹಾರ ಮಾಡುವಾಗ ಎಚ್ಚರವಿರಲಿ.

ಕನ್ಯಾ ರಾಜಕೀಯ ನಾಯಕರುಗಳಿಗೆ ಅವರ ವಿಷಯದಲ್ಲಿ ಬದಲಾವಣೆಯೊಂದನ್ನು ಕಾಣಬಹುದು. ನೆರೆಹೊರೆಯವರಿಗೆ ನೀತಿ ಹೇಳಲು ಹೋಗಿ ಗೌರವಕ್ಕೆ ಧಕ್ಕೆ ತಂದುಕೊಳ್ಳುವಿರಿ. ಆದಾಯ ಕೊಡುವ ಹೊಸ ಮಾರ್ಗವೊಂದನ್ನು ಹುಡುಕಲು ಪ್ರಯತ್ನ ಪಡುವಿರಿ. ವ್ಯವಹಾರಗಳಲ್ಲಿ ಅತಿಯಾದ ಮಾತುಗಳ ಮೇಲೆ ಹಿಡಿತವಿರಲಿ. ಇಲ್ಲವಾದಲ್ಲಿ ವ್ಯವಹಾರದಿಂದ ಹೊರ ಬರುವ ಸಾಧ್ಯತೆಗಳಿವೆ. ಧನಾದಾಯವು ಅಷ್ಟು ತೃಪ್ತಿಕರವಾಗಿರುವುದಿಲ್ಲ. ಸರ್ಕಾರಿ ಕಚೇರಿ ಕೆಲಸಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಪ್ರೀತಿ ಪ್ರೇಮದ ಬಗ್ಗೆ ಅತಿಯಾದ ಆತುರ ಖಂಡಿತ ಬೇಡ. ಹಿರಿಯರಿಂದ ಸಂಗಾತಿಗೆ ಆಸ್ತಿ ದೊರೆಯುವ ಸಂದರ್ಭವಿದೆ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪಮಟ್ಟಿನ ಅಭಿವೃದ್ಧಿಯನ್ನು ಕಾಣಬಹುದು.

ತುಲಾ ವೃತ್ತಿ ನೈಪುಣ್ಯತೆಯಿಂದ ಕೆಲವು ನೌಕರರಿಗೆ ವಿಶೇಷ ಸ್ಥಾನಮಾನ ದೊರೆಯುವ ಸಾಧ್ಯತೆ ಇದೆ. ಸಾಲ ಕೊಟ್ಟವರು ಮರುಪಾವತಿಗಾಗಿ ಎಡಬಿಡದೆ ತಗಾದೆಯನ್ನು ಮಾಡುವರು. ಹೂಡಿಕೆ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ಇರಲಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ರಾಜಕೀಯ ವ್ಯಕ್ತಿಗಳ ವಶೀಲಿಯನ್ನು ಬಳಸಿಕೊಂಡು ನಿಮ್ಮ ಕಾರ್ಯಸಾಧನೆ ಮಾಡಿಕೊಳ್ಳುವಿರಿ. ದಾಂಪತ್ಯದಲ್ಲಿ ಒಳಜಗಳಗಳು ಉಂಟಾಗಬಹುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಸಾಕಷ್ಟು ಹೆಚ್ಚಳವನ್ನು ಕಾಣಬಹುದು. ಆಭರಣದ ಹರಳುಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ವಿಸ್ತರಣೆಯಾಗುವ ಯೋಗವಿದೆ. ಹಿರಿಯರಿಂದ ನಿಮಗೆ ಧನಸಹಾಯದ ಜೊತೆಗೆ ಸಲಹೆ ಸೂಚನೆಗಳು ದೊರೆಯುತ್ತವೆ.

ವೃಶ್ಚಿಕ ಕೆಲಸಕಾರ್ಯಗಳಲ್ಲಿ ನಿಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಿರಿ. ಮನೆಯ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅಗತ್ಯ. ಪ್ರಯತ್ನಪಡುತ್ತಿದ್ದ ಸ್ಥಿರಾಸ್ತಿಯನ್ನು ಹೊಂದುವ ಅವಕಾಶವಿದೆ. ಸೂಕ್ಷ್ಮ ಕೆಲಸಕಾರ್ಯಗಳಲ್ಲಿ ನಿಮ್ಮ ಜಾಣ್ಮೆಯನ್ನು ಯಾರೊಡನೆಯೂ ಹಂಚಿಕೊಳ್ಳದಿರುವುದು ಬಹಳ ಉತ್ತಮ. ಆರ್ಥಿಕತೆಯಲ್ಲಿ ಅಲ್ಪಮಟ್ಟಿನ ಚೇತರಿಕೆಯನ್ನು ಕಾಣಬಹುದು. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಗೌರವದ ಜೊತೆಗೆ ಆದಾಯವೂ ಹೆಚ್ಚುತ್ತದೆ. ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವೃದ್ಧಿಸಿ ಹೆಚ್ಚು ಧನ ಸಂಪಾದನೆಯಾಗುತ್ತದೆ. ಸ್ನೇಹಿತರ ಸಹಕಾರದಿಂದ ಮನೆಯ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬಹುದು.

ಧನು ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವವರಿಗೆ ವ್ಯವಹಾರ ಚೆನ್ನಾಗಿ ನಡೆದು ಆದಾಯ ಹೆಚ್ಚುತ್ತದೆ. ಮಹಿಳೆಯರಿಗೆ ಸಂಗಾತಿಯಿಂದ ವಿಶೇಷ ಉಡುಗೊರೆಗಳು ದೊರೆಯಬಹುದು. ಕೃಷಿಕ್ಷೇತ್ರದಲ್ಲಿ ಬಿಡುವಿಲ್ಲದ ಕೆಲಸಗಳು ನಡೆಯುತ್ತವೆ. ಯಂತ್ರಗಳ ಮೇಲೆ ಕೆಲಸ ಮಾಡುವವರು ಎಚ್ಚರಿಕೆಯಿಂದ ಕೆಲಸ ಮಾಡಿರಿ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಪ್ರಯಾಣ ಮಾಡುವಾಗ ಎಚ್ಚರವಿರಲಿ, ನಿಮ್ಮ ವಸ್ತುಗಳು ಕಳವಾಗುವ ಸಾಧ್ಯತೆ ಇದೆ. ಹೈನುಗಾರಿಕೆಯನ್ನು ಮಾಡುವವರಿಗೆ ನಷ್ಟಗಳು ಕಡಿಮೆಯಾಗಿ ಆದಾಯ ಬರಲಾರಂಭಿಸುತ್ತದೆ. ಮಹಿಳಾ ಕಲಾವಿದರುಗಳಿಗೆ ಉತ್ತಮ ಅವಕಾಶದ ಜೊತೆಗೆ ಸಂಪಾದನೆಯೂ ಹೆಚ್ಚುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಹೊಸ ರೀತಿಯ ವ್ಯವಹಾರ ಮಾಡುವ ಅವಕಾಶಗಳು ದೊರೆಯುತ್ತದೆ.

ಮಕರ ಇರುವ ಸಂಸ್ಥೆಯನ್ನು ಬಿಟ್ಟು ಹೊಸ ಸಂಸ್ಥೆ ಅಥವಾ ಉದ್ಯೋಗಕ್ಕೆ ಸೇರುವ ಅವಕಾಶವಿದೆ. ನಿಮ್ಮ ಕಾರ್ಯಸೂಚಿಯಲ್ಲಿ ತುರ್ತು ವಿಷಯಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡಿರಿ. ಆರ್ಥಿಕವಾಗಿ ಸಾಕಷ್ಟು ಚೇತರಿಕೆಯನ್ನು ಕಂಡು ಹೊಸ ರೀತಿಯ ವ್ಯವಹಾರಗಳ ಆರಂಭದ ಬಗ್ಗೆ ಗಮನಹರಿಸುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಇದ್ದ ಮನಸ್ತಾಪಗಳು ದೂರವಾಗಿ ವ್ಯವಹಾರ ಮುಂದುವರೆಯುತ್ತದೆ. ನಿತ್ಯ ಉಪಯೋಗಿ ದವಸಧಾನ್ಯಗಳನ್ನು ಮಾರಾಟ ಮಾಡುವವರ ವ್ಯವಹಾರದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ದೈನಂದಿಕ ಚಟುವಟಿಕೆಗಳಿಗಾಗಿ ಸಾಕಷ್ಟು ಸಮಯ ಮೀಸಲಿಡುವಿರಿ. ಸಾರ್ವಜನಿಕ ಸೇವಾ ಸಂಸ್ಥೆಗಳಿಗೆ ದೇಣಿಗೆಯನ್ನು ನೀಡಿ ಸಂತಸಪಡುವಿರಿ.

ಕುಂಭ ವೈಯಕ್ತಿಕ ವ್ಯವಹಾರದ ನಿಮಿತ್ತ ದೂರ ಪ್ರಯಾಣವನ್ನು ಮಾಡಬೇಕಾಗಬಹುದು. ಯುವಕರು ವೃತ್ತಿಯಲ್ಲಿ ಗುಂಪುಗಾರಿಕೆಯನ್ನು ಮಾಡಲು ಹೋಗಿ ಸಾಕಷ್ಟು ಹಿನ್ನಡೆ ಅನುಭವಿಸುವರು. ದೈನಂದಿನ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆಯುತ್ತದೆ. ಹಿತಶತ್ರುಗಳ ವಿಚಾರದಲ್ಲಿ ಸಾಕಷ್ಟು ಎಚ್ಚರಿಕೆ ಇರಲಿ. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರವಹಿಸಿರಿ. ಸಂಸ್ಥೆಯೊಂದನ್ನು ಕಟ್ಟುವ ನಿಮ್ಮ ಆಸೆಗೆ ಪೂರಕವಾಗುವ ಸುದ್ದಿಯೊಂದು ನಿಮಗೆ ತಿಳಿಯುತ್ತದೆ. ಹೊಸ ವಾಹನವನ್ನು ಖರೀದಿಯನ್ನು ಮಾಡುವ ಯೋಗವಿದೆ. ಚಿನ್ನದ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಹೆಚ್ಚಳವಿರುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ಹಿರಿಯರಿಗೆ ಸಾರ್ವಜನಿಕ ಗೌರವ ದೊರೆಯುತ್ತದೆ.

ಮೀನ ನಿಮ್ಮ ಗುಪ್ತ ಹಣ ಅಥವಾ ಗುಪ್ತ ಆಸ್ತಿಯ ವಿವರಗಳು ಹೊರಬರುತ್ತವೆ. ಬೇರೆಯವರ ಮಾತು ಕೇಳಿ ಕೆಲವು ಸಂಬಂಧಗಳನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ, ಎಚ್ಚರವಹಿಸಿ. ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ತಾಯಿ ಆರೋಗ್ಯದ ಬಗ್ಗೆ ವಿಶೇಷ ಗಮನ ಅಗತ್ಯ. ಉದ್ಯೋಗ ಕ್ಷೇತ್ರದಲ್ಲಿ ಹಿತಶತ್ರುಗಳು ಹೆಚ್ಚಾಗುವ ಸಾಧ್ಯತೆ ಇದೆ. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಉಪನ್ಯಾಸಕರುಗಳಿಗೆ ಉತ್ತಮ ಅವಕಾಶ ದೊರೆಯುವ ಸಾಧ್ಯತೆ ಇದೆ. ಸ್ಥಿರಾಸ್ತಿಯೊಂದನ್ನು ಮಾರಾಟ ಮಾಡಿ ಅಧಿಕ ಲಾಭ ಗಳಿಸುವಿರಿ. ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಇದ್ದ ತೊಡಕುಗಳು ನಿವಾರಣೆಯಾಗಿ ಹೊಸ ಶಾಖೆಯನ್ನು ಈಗ ಪ್ರಾರಂಭಿಸಬಹುದು.

Leave a Reply

Your email address will not be published. Required fields are marked *